ಪಾಕ್ ಗೃಹ ಸಚಿವರ ಭೋಜನ ಕೂಟ ತಿರಸ್ಕರಿಸಿ ಸ್ವದೇಶಕ್ಕೆ ಮರಳಿದ ರಾಜನಾಥ್ ಸಿಂಗ್

ಗುರುವಾರ, 4 ಆಗಸ್ಟ್ 2016 (18:05 IST)
ಪಾಕಿಸ್ತಾನ ತಮ್ಮ ಭಾಷಣವನ್ನು ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಗೃಹ ಸಚಿವ ರಾಜನಾಥ್ ಸಿಂಗ್, ಪಾಕ್ ಗೃಹ ಸಚಿವ ಚೌಧರಿ ನಿಸಾರ್ ಅಲಿ ಖಾನ್ ಆಯೋಜಿಸಿದ್ದ ಮಧ್ಯಾಹ್ನದ ಭೋಜನಕೂಟವನ್ನು ತ್ಯಜಿಸಿ ಭಾರತಕ್ಕೆ ಮರಳಿದ್ದಾರೆ. 
 
ಏಳನೇ ಸಾರ್ಕ್ ಸಮ್ಮೇಳದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಗೃಹ ಸಚಿವರಿಗಾಗಿ ಖಾನ್, ಭೋಜನಕೂಟವನ್ನು ಏರ್ಪಡಿಸಿದ್ದರು. ಮುಖ್ಯ ಸಭೆಯ ನಂತರ ಊಟದ ವ್ಯವಸ್ಥೆ ಮಾಡಲಾಗಿತ್ತು ಎನ್ನಲಾಗಿದೆ. 
 
ಏತನ್ಮಧ್ಯೆ, ಪಾಕಿಸ್ತಾನದ ಅಂತರಿಕ ವ್ಯವಹಾರಗಳ ಸಚಿವರು ಸಭೆಯ ಮುಕ್ತಾಯವಾದ ಕೂಡಲೇ ತೆರಳಿದ ಹಿನ್ನೆಲೆಯಲ್ಲಿ , ರಾಜನಾಥ್ ಸಿಂಗ್ ಭೋಜನವನ್ನು ತಿರಸ್ಕರಿಸುವ ನಿರ್ಧಾರ ತೆಗೆದುಕೊಂಡರು ಎಂದು ಮೂಲಗಳು ತಿಳಿಸಿವೆ.
 
ಕೇಂದ್ರ ಗೃಹ ಸಚಿವ ತಾವಿಳಿದುಕೊಂಡಿದ್ದ ಹೋಟೆಲ್‌ಗೆ ಆಗಮಿಸಿ, ಭಾರತೀಯ ನಿಯೋಗದಲ್ಲಿರುವ ಅಧಿಕಾರಿಗಳೊಂದಿಗೆ ಊಟ ಸೇವಿಸಿದರು ಎಂದು ಮೂಲಗಳು ತಿಳಿಸಿವೆ.
 
ಪಂಚತಾರಾ ಐಷಾರಾಮಿ ಸೆರೆನಾ ಹೋಟೆಲ್‌‌ನಲ್ಲಿ ನಡೆಯುತ್ತಿರುವ ಸಾರ್ಕ್ ಸಮ್ಮೇಳನಕ್ಕಾಗಿ ಆಗಮಿಸಿದ ರಾಜನಾಥ್ ಸಿಂಗ್, ಗೇಟ್ ಬಳಿ ನಿಂತಿದ್ದ ಪಾಕ್ ಗೃಹ ಸಚಿವ ಖಾನ್ ಅವರೊಂದಿಗೆ ಇಷ್ಟವಿಲ್ಲದಂತೆ ಹ್ಯಾಂಡ್‌ಶೇಕ್ ಮಾಡಿ ಸಭೆಗೆ ತೆರಳಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ಇದಕ್ಕಿಂತ ಮೊದಲು ರಾಜನಾಥ್ ಸಿಂಗ್, ಭಯೋತ್ಪಾದಕರನ್ನು ವೈಭವೀಕರಿಸುವುದಲ್ಲದೇ ಅವರನ್ನು ಹುತಾತ್ಮರೆಂದು ಘೋಷಿಸುವುದು ಸರಿಯಲ್ಲ. ಭಯೋತ್ಪಾದಕರ ವಿರುದ್ಧ ಕಠಿಣ ಕಾರ್ಯಾಚರಣೆ ನಡೆಯಬೇಕು ಎನ್ನುವ ಸ್ಪಷ್ಟ ಸಂದೇಶವನ್ನು ಪಾಕಿಸ್ತಾನಕ್ಕೆ ರವಾನಿಸಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ