ಮಧ್ಯಪ್ರದೇಶದಾದ್ಯಂತ ಹಂತ ಹಂತವಾಗಿ ಮದ್ಯನಿಷೇಧ ಜಾರಿ: ಸಿಎಂ ಚೌಹಾನ್

ಸೋಮವಾರ, 10 ಏಪ್ರಿಲ್ 2017 (18:38 IST)
ರಾಜ್ಯದಲ್ಲಿ ಮದ್ಯನಿಷೇಧ ಹೇರಲು ಸರಕಾರ ಬದ್ಧವಾಗಿದ್ದು ಹಂತ ಹಂತವಾಗಿ ಎಲ್ಲಾ ಮದ್ಯದಂಗಡಿಗಳನ್ನು ಬಂದ್ ಮಾಡಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಘೋಷಿಸಿದ್ದಾರೆ.
 
ನರಸಿಂಗ್‌ಪುರ್ ಜಿಲ್ಲೆಯ ನೀಮ್‌ಖೇರಾ ಗ್ರಾಮದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಾದ್ಯಂತ ಮದ್ಯ ನಿಷೇಧ ಹೇರಲು ಸರಕಾರ ಕಟಿಬದ್ಧವಾಗಿದೆ. ಹಂತ ಹಂತವಾಗಿ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚಲಾಗುವುದು ಎಂದು ತಿಳಿಸಿದ್ದಾರೆ. 
 
ಮೊದಲ ಹಂತವಾಗಿ ನರ್ಮದಾ ನದಿ ದಂಡೆಯ ಐದು ಕಿ.ಮೀ ವ್ಯಾಪ್ತಿಯೊಳಗಿರುವ ಮದ್ಯದಂಗಡಿಗಳನ್ನು ಬಂದ್ ಮಾಡಲಾಗುವುದು. ಎರಡನೇ ಹಂತದಲ್ಲಿ ಧಾರ್ಮಿಕ ಸ್ಥಳಗಳು, ಶಾಲಾ ಕಾಲೇಜುಗಳ ಬಳಿ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡುವುದಿಲ್ಲ ಎಂದರು. 
 
ಕಳೆದ ಒಂದು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಮದ್ಯ ನಿಷೇಧಿಸುವಂತೆ ಒತ್ತಾಯಿಸಿ ಭಾರಿ ಪ್ರತಿಭಟನೆಗಳು ನಡೆದಿರುವುದು ಸರಕಾರವನ್ನು ಎಚ್ಚರಿಸಿದೆ.
 
ಕಳೆದ ಏಪ್ರಿಲ್ 5 ರಂದು ರೈಸೆನ್ ಜಿಲ್ಲೆಯ ಬರೇಲಿ ಪಟ್ಟಣದಲ್ಲಿ ಪ್ರತಿಭಟನಾಕಾರರು ಎರಡು ವಾಹನಗಳಿಗೆ ಬೆಂಕಿ ಹಚ್ಚಿದ್ದಲ್ಲದೇ ಇತರ ನಾಲ್ಕು ವಾಹನಗಳನ್ನು ಜಖಂಗೊಳಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ