ಕಾಂಗ್ರೆಸ್, ಬಿಜೆಪಿಯದ್ದು ಪತಿ-ಪತ್ನಿ ರೀತಿಯ ಸಂಬಂಧ: ಅರವಿಂದ್ ಕೇಜ್ರಿವಾಲ್

ಸೋಮವಾರ, 23 ಮೇ 2016 (14:45 IST)
ದೇಶದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪತಿ-ಪತ್ನಿಯ ಸಂಬಂಧವಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.
 
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವೆ ಪತಿ-ಪತ್ನಿಯ ರೀತಿಯ ಸಂಬಂಧವಿದೆ ಎಂದು ನನಗನ್ನಿಸುತ್ತಿದೆ. ಸಂಸತ್ತಿನಲ್ಲಿ ಎರಡು ಪಕ್ಷಗಳು ಪತಿ-ಪತ್ನಿಯ ರೀತಿಯಲ್ಲಿ ಪರಸ್ಪರ ವಾಗ್ವಾದದಲ್ಲಿ ತೊಡಗುತ್ತವೆ. ಕಾಂಗ್ರೆಸ್ ಪಕ್ಷದ ರಹಸ್ಯಗಳು ಬಿಜೆಪಿಗೆ ಗೊತ್ತಿವೆ. ಬಿಜೆಪಿ ಪಕ್ಷದ ರಹಸ್ಯಗಳು ಕಾಂಗ್ರೆಸ್ ಪಕ್ಷಕ್ಕೆ ಗೊತ್ತಿವೆ ಎಂದು ಕಿಡಿಕಾರಿದರು.  
 
ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಗೋವಾದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಹಲವಾರು ಕೇಸ್‌ಗಳನ್ನು ದಾಖಲಿಸಿದ್ದಾರೆ ಎಂದು ನನಗೆ ಮಾಹಿತಿಯಿದೆ. ಆದರೆ, ಕಾಂಗ್ರೆಸ್ ನಾಯಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಅಂತಹ ಕೇಸ್ ಫೈಲ್‌ಗಳನ್ನಿಟ್ಟುಕೊಂಡು ಬೆದರಿಸುತ್ತಾ ರಾಜಕೀಯ ಮಾಡುತ್ತಿದ್ದಾರೆ ಎಂದರು.
 
ಉಭಯ ಪಕ್ಷಗಳಿಗೂ ದೇಶದ ಜನತೆಯನ್ನು ಯಾವ ರೀತಿ ಮೂರ್ಖರನ್ನಾಗಿಸಬೇಕು ಎನ್ನುವುದು ಚೆನ್ನಾಗಿ ತಿಳಿದಿದೆ. ಆದರೆ, ಬಹಳ ದಿನಗಳ ಕಾಲ ಜನತೆಯನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
 
ಉಭಯ ಪಕ್ಷಗಳು ಸಾರ್ವಜನಿಕ ಹಣವನ್ನು ಲೂಟಿ ಹೊಡೆದು ಮಾಫಿಯಾ ರಾಜ್ಯವನ್ನು ನಡೆಸುತ್ತಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಅಲಿಖಿತ ಒಪ್ಪಂದವಿರುವಂತೆ ತೋರುತ್ತದೆ ಎಂದು ಲೇವಡಿ ಮಾಡಿದರು.
 
ಆಮ್ ಆದ್ಮಿ ಪಕ್ಷದ ಕಾರ್ಯ ಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇವಲ ಟಿಕೆಟ್ ಆಸೆಗಾಗಿ ಆಮ್ ಆದ್ಮಿ ಪಕ್ಷವನ್ನು ಸೇರಿದವರಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸ್ಪಷ್ಟಪಡಿಸಿದರು.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ