ಅನುಮಾನ; ಪತ್ನಿಯ ಮಾಜಿ ಪತಿ ತಲೆ ಕತ್ತರಿಸಿ ಮುಗಿಸಿಯೇ ಬಿಟ್ಟ

ಗುರುವಾರ, 8 ಸೆಪ್ಟಂಬರ್ 2016 (12:42 IST)
ತನ್ನ ಪತ್ನಿ ಜತೆ ದೈಹಿಕ ಸಂಬಂಧವನ್ನು ಮುಂದುವರೆಸಿದ್ದಾನೆ ಎಂಬ ಅನುಮಾನದಿಂದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಮಾಜಿ ಪತಿಯ ತಲೆ ಕತ್ತರಿಸಿ ಬರ್ಬರವಾಗಿ ಕೊಲೆಗೈದ ಘಟನೆ ನವದೆಹಲಿಯಲ್ಲಿ ನಡೆದಿದೆ. 

 
ಆರೋಪಿಯನ್ನು 35 ವರ್ಷದ ಮುಕೇಶ್ ಎಂದು ಗುರುತಿಸಲಾಗಿದ್ದು ಮಂಗೋಲ್ಪುರಿ ಪ್ರದೇಶದ ನಿವಾಸಿಯಾಗಿರುವ ಈತ ಗುರ್ಗಾಂವ್‌ನಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆತನ ಪತ್ನಿ ಪ್ರಿಯಾಂಕಾ ತನ್ನ ಮಾಜಿ ಪತಿ ರೋಹಿತ್‌ನ ಜತೆ ವಿಚ್ಛೇದನದ ಬಳಿಕವೂ ಸಂಪರ್ಕವನ್ನಿಟ್ಟುಕೊಂಡಿದ್ದಳು. ಆಕೆ ರೋಹಿತ್‌‌ನನ್ನು ಆಗಾಗ ಭೇಟಿಯಾಗುತ್ತಿದುದನ್ನು ಸಹಿಸದಾದ ಮುಕೇಶ್ ಪತ್ನಿಯ ಅಪ್ರಾಪ್ತ ಸಹೋದರನ ಜತೆ ಸೇರಿ ಆತನನ್ನು ಮುಗಿಸುವ ಯೋಜನೆ ರೂಪಿಸಿದ. ಅದರಂತೆ ಆತನ ತಲೆ ಕತ್ತರಿಸಿ ಹತ್ಯೆಗೈದ.
 
ಸೆಪ್ಟೆಂಬರ್ 6 ರಂದು ರೋಹಿತ್ ತಂದೆ ಅಶೋಕ್ ಕುಮಾರ್ ಮಗ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು. ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ ಪೊಲೀಸರು ಮುಕೇಶ್, ಆತನ ಮೈದುನ ಮತ್ತು ಇತರ ಇಬ್ಬರು ಆರೋಪಿಗಳಾದ ವಿಜಯ್ ಮತ್ತು ಅಶ್ರಫ್‌ನನ್ನು ಬಂಧಿಸಿದ್ದಾರೆ. 
 
ಆಗಸ್ಟ್ 6 ರಂದು ರೋಹಿತ್‌ನನ್ನು ಮನೆಗೆ ಆಹ್ವಾನಿಸಿ ಕಂಠಪೂರ್ತಿ ಮದ್ಯ ಕುಡಿಸಿ ತಾನು ಚಲಾಯಿಸುತ್ತಿದ್ದ ವಾಹನದಲ್ಲಿ ಕರೆದುಕೊಂಡು ಹೋಗಿ ದಾರಿ ಮಧ್ಯೆ ಹತ್ಯೆಗೈದು ದೇಹವನ್ನು ಸೀಮೆಎಣ್ಣೆ ಹಾಕಿ ಸುಟ್ಟಿ, ತಲೆಯನ್ನು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಹಾಕಿ ಮಣ್ಣಿನಡಿ ಮುಚ್ಚಿ ಹಾಕಿದ್ದಾಗಿ ಮುಕೇಶ್ ಬಾಯ್ಬಿಟ್ಟಿದ್ದಾನೆ. 
 
ಹುಗಿದು ಹಾಕಲಾಗಿದ್ದ ತಲೆಯನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ