ಸಚಿವ ಸ್ಥಾನಕ್ಕಾಗಿ ಬೇಡಿಕೆಯಿಟ್ಟಿಲ್ಲ, ಬ್ಲ್ಯಾಕ್‌ ಮಾಡೋಲ್ಲ: ಉದ್ಭವ್ ಠಾಕ್ರೆ

ಶುಕ್ರವಾರ, 8 ಜುಲೈ 2016 (16:58 IST)
ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಶಿವಸೇನೆಯ ಇಬ್ಬರು ನಾಯಕರಿಗೆ ರಾಜ್ಯ ಸಚಿವ ಸ್ಥಾನ ನೀಡಿರುವುದಕ್ಕೆ ಶಿವಸೇನೆ ಅಸಮಾಧಾನಗೊಂಡಿದೆ ಎನ್ನುವ ವರದಿಗಳನ್ನು ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ, ತಳ್ಳಿಹಾಕಿದ್ದಾರೆ.

ಸಚಿವ ಸ್ಥಾನ ನೀಡುವಂತೆ ಶಿವಸೇನೆ ಯಾವತ್ತೂ ಒತ್ತಾಯಿಸುವುದಿಲ್ಲ ಅಥವಾ ಸಚಿವ ಸ್ಥಾನಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುವುದೂ ಇಲ್ಲ ಎಂದು ಹೇಳಿದ್ದಾರೆ. 
 
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಮ್ಮ ಸಂಪುಟದಲ್ಲಿ 10 ಸ್ಥಾನಗಳನ್ನು ಹೊಸಬರಿಗೆ ನೀಡಿದ್ದಲ್ಲದೇ ಬಿಜೆಪಿಯ ರಾಮಶಿಂಧೆಯವರನ್ನು ಕ್ಯಾಬಿನೆಟ್ ಧರ್ಜೆಗೆ ಬಡ್ತಿ ನೀಡಿರುವುದರಿಂದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರುಹಾಜರಾಗಿದ್ದಾನೆ ಎನ್ನುವ ವರದಿಗಳಲ್ಲಿ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದರು. 
 
ನಾನು ಯಾಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹೋಗಲಿಲ್ಲ ಎಂದು ಅನಗತ್ಯ ಚಿಂತನೆ ಮಾಡುವ ಅಗತ್ಯವಿಲ್ಲ. ಶಿವಸೇನೆ ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ಅದರಂತೆ ಶಿವಸೇನೆಗೆ ಎರಡು ಸಚಿವ ಸ್ಥಾನಗಳನ್ನು ನೀಡಲಾಗಿದೆ ಎಂದರು.
 
ಶಿವಸೇನೆ ಮತ್ತು ಬಿಜೆಪಿ ಮೈತ್ರಿಯೊಂದಿಗೆ ಸರಕಾರ ಮುನ್ನಡೆಸಬಾರದು ಎಂದು ಬಯಸುವ ವಿಪಕ್ಷಗಳು ಇಂತಹ ವರದಿಗಳನ್ನು ಹರಡುತ್ತಿವೆ. ಇಂತಹ ವರದಿಗಳು ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿವೆ ಎಂದು ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ ತಿಳಿಸಿದ್ದಾರೆ.
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ