ಮಾಲೀಕನಿಗಾಗಿ ತನ್ನ ಪ್ರಾಣವರ್ಪಿಸಿದ ನಿಷ್ಠ ನಾಯಿ

ಮಂಗಳವಾರ, 7 ಜೂನ್ 2016 (09:05 IST)
ನಿಷ್ಠೆಗೆ ಮತ್ತೊಂದು ಅರ್ಥವೇ ನಾಯಿ. ತನಗೆ ಅನ್ನ ನೀಡಿದವರಿಗಾಗಿ ತನ್ನಿಂದಾದ ಎಂತಹ ತ್ಯಾಗ ಬೇಕಾದರೂ ಮಾಡಬಲ್ಲದು ಈ ಪ್ರಾಣಿ. ಮನುಷ್ಯನ ಅತ್ಯುತ್ತಮ ಸ್ನೇಹಿತ ಎನಿಸಿಕೊಂಡಿರುವ ನಾಯಿಯ ನಿಷ್ಠೆ ಮತ್ತು ಮಿತಿ ಇಲ್ಲದ ಪ್ರೀತಿಗೆ ಉದಾಹರಣೆ ಶಹಜಹಾನ್ಪುರದಲ್ಲಿ ನಡೆದಿರುವ ಈ ಘಟನೆ. 

ದುದುವಾ ರಾಷ್ಟ್ರೀಯ ಉದ್ಯಾನವನದ ಸಮೀಪದ ಗ್ರಾಮದಲ್ಲಿ ರೈತನೊಬ್ಬ ಸಾಕಿದ್ದ ನಾಯಿಯೊಂದು ತನ್ನ ಮಾಲೀಕನ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಬಲಿ ನೀಡಿದೆ. ಖುತಾರ್ ಪಟ್ಟಣದ ಬರತ್ಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. 
 
ಗುರುದೇವ್‌ ಎಂಬ ರೈತ ತನ್ನ ಮನೆಯ ಹೊರಗೆ ಮಲಗಿದ್ದ. ಆತನ ನಾಲ್ಕು ವರ್ಷದ ನಾಯಿ ಜಾಕಿ ಕೂಡ ಅಲ್ಲೇ ಪಕ್ಕದಲ್ಲಿ ಮಲಗಿತ್ತು. ಅಲ್ಲೇ ಸಮೀಪದಲ್ಲಿದ್ದ ಅರಣ್ಯದಿಂದ ಹುಲಿ ತಮ್ಮತ್ತ ಬರುತ್ತಿರುವುದನ್ನು ವಾಸನೆಯಿಂದ ಗ್ರಹಿಸಿದ ನಾಯಿ ಜಾಕಿ ತನ್ನ ಮಾಲೀಕನನ್ನು ಎಬ್ಬಿಸಿತು. ಅದನ್ನು ಎದುರಿಸಲು ಗುರುದೇವ್ ಡೊಣ್ಣೆ ಹುಡುಕುತ್ತಿದ್ದಾಗ ಹುಲಿ ಆತನ ಮೇಲೆ ದಾಳಿ ನಡೆಸಲು ಪ್ರಯತ್ನಿಸಿತು. ಆದರೆ ಅದಕ್ಕೆ ಆಸ್ಪದ ಕೊಡದ ನಾಯಿ ತನ್ನ ಜೀವ ನಿಲ್ಲದು ಎಂದು ಗೊತ್ತಿದ್ದರೂ ತನಗಿಂತ ಶಕ್ತಿಶಾಲಿಯಾದ ಹುಲಿಯ ವಿರುದ್ಧ ಸಮರಕ್ಕಿಳಿಯಿತು. ನಾಯಿಯನ್ನು ಗಂಭೀರವಾಗಿ ಗಾಯಗೊಳಿಸಿದ ಹುಲಿ ಅದನ್ನು ಅಲ್ಲಿಂದ ಎಳೆದೊಯ್ದಿತು. 
 
ದಿನ ಪೂರ್ತಿ ನಾಯಿಯನ್ನು ಹುಡುಕಿದ ಗುರುದೇವ್ ಮನೆಯವರಿಗೆ  ಮನೆಯಿಂದ ಸ್ವಲ್ಪ ದೂರದಲ್ಲಿ ಧೀರ ಜಾಕಿಯ ಶವ ಸಿಕ್ಕಿದೆ. ಆತನನ್ನು ಕಂಡು ಕಣ್ಣೀರಿಟ್ಟ ಕುಟುಂಬಸ್ಥರು, ಗ್ರಾಮಸ್ಥರೆಲ್ಲ ಸೇರಿ ಗೌರವಪೂರ್ವಕವಾಗಿ ಮಣ್ಣು ಮಾಡಿದ್ದಾರೆ.
 
ಮಕ್ಕಳು ತಂದು ಸಾಕಿದ್ದ ಬೀದಿನಾಯಿ, ಇಂದು ತನ್ನ ಜೀವವನ್ನು ಉಳಿಸಿತು ಎಂದು ಜಾಕಿಯನ್ನು ನೆನೆದು ಗುರುದೇವ್ ಕಣ್ಣೀರಿಡುತ್ತಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ