ನನ್ನನ್ನು ನೋಡಲು ಬರಬೇಡಿ: ಪಳನಿಗೆ ಶಶಿಕಲಾ ತಾಕೀತು

ಬುಧವಾರ, 22 ಫೆಬ್ರವರಿ 2017 (12:52 IST)
ತನ್ನನ್ನು ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬರಬೇಡಿ ಎಂದು, ತಮಿಳುನಾಡು ನೂತನ ಮುಖ್ಯಮಂತ್ರಿ ಪಳನಿ ಸ್ವಾಮಿಗೆ ಶಶಿಕಲಾ ನಟರಾಜನ್ ತಾಕೀತು ಮಾಡಿದ್ದಾರೆ, ಹೀಗಾಗಿ ಪಳನಿ ಸ್ವಾಮಿ ತಮ್ಮ ಬೆಂಗಳೂರು ಪ್ರವಾಸವನ್ನು ರದ್ದುಗೊಳಿಸಿದ್ದಾರೆ. 
ಕಳೆದ ವಾರ ಪದಗ್ರಹಣ ಮಾಡಿದ್ದ ಪಳನಿಸ್ವಾಮಿ ಮತ್ತು ಇತರ ಸಚಿವರು ಮುಂಬರುವ ಸೋಮವಾರ ಶಶಿಕಲಾ ಭೇಟಿಗೆ ದಿನ ನಿಗದಿ ಪಡಿಸಿದ್ದರು. ಆದರೆ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಶಿಕಲಾ ಬರಬೇಡಿ ಎಂದು ಅಪ್ಪಣೆ ಮಾಡಿದ್ದರಿಂದ ಭೇಟಿಯನ್ನು ಮೊಟಕುಗೊಳಿಸಿದ್ದಾರೆ. 
 
ಕಳೆದ ಸೋಮವಾರ ಶಶಿಕಲಾ ಸಂಬಂಧಿ ಮತ್ತು ಪಕ್ಷದ ಉಪಪ್ರಧಾನ ಕಾರ್ಯದರ್ಶಿ ದಿನಕರನ್ ಶಶಿಕಲಾ ಅವರನ್ನು ಭೇಟಿಯಾಗಿದ್ದರು. ಈ ಸಮಯದಲ್ಲಿ ಶಶಿಕಲಾ ಪಳನಿ ಮತ್ತು ಇತರ ಸಚಿವರಿಗೆ ತಮ್ಮನ್ನು ಭೇಟಿಯಾಗಲು ಬರುವುದು ಬೇಡ. ಬದಲಾಗಿ ಮಾಡಬೇಕಾದ ಕೆಲಸದ ಕಡೆ ಗಮನ ನೀಡಿ, ಮಾಜಿ ಸಿಎಂ ಜಯಲಲಿತಾ ಕನಸನ್ನು ನನಸು ಮಾಡಿ ಎಂಬ ಸಂದೇಶವನ್ನು ಕಳುಹಿಸಿದ್ದರು, ಎಂದು ಪಕ್ಷದ ಮೂಲಗಳು ತಿಳಿಸಿವೆ.
 
ಮಂಗಳವಾರ ಚಿತ್ರ ನಟಿ, ಅಣ್ಣಾಡಿಎಂಕೆ ವಕ್ತಾರೆ ಸಿ.ಆರ್‌.ಸರಸ್ವತಿ, ಮಾಜಿ ಸಚಿವೆ ಗೋಕುಲ ಇಂದಿರಾ ಸೇರಿದಂತೆ ಮಹಿಳಾ ನಾಯಕಿಯರು ಶಶಿಕಲಾ ಭೇಟಿಗೆ ಆಗಮಿಸಿದ್ದರು ಆದರೆ ಅವರಿಗೆ ಅನುಮತಿಯನ್ನು ನೀಡಿಲ್ಲ.
 

ವೆಬ್ದುನಿಯಾವನ್ನು ಓದಿ