ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ಬೆಂಗಾವಲು ವಾಹನಗಳ ಮೇಲೆ ದಾಳಿ

ಗುರುವಾರ, 26 ಮೇ 2016 (18:10 IST)
ಜಿಲ್ಲೆಯ ದುಮಾರಿಯಾ ಪಟ್ಟಣದ ಬಳಿ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿಯವರ ಬೆಂಗಾವಲು ವಾಹನಗಳ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿರುವ ಘಟನೆ ವರದಿಯಾಗಿದೆ 
 
ಆಕ್ರೋಶಗೊಂಡಿದ್ದ ಪ್ರತಿಭಟನಾಕಾರರು ಮಾಂಜಿಯವರ ಬೆಂಗಾವಲು ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೇ ಬೆಂಕಿ ಹಚ್ಚಿದ್ದಾರೆ. ಪೊಲೀಸರಿಗೆ ಸಂಬಂಧಿಸಿದ ಎರಡು ಬೈಕ್‌ಗಳಿಗೂ ಬೆಂಕಿ ಹಚ್ಚಿ ಉದ್ರಿಕ್ತ ವಾತಾವರಣ ಸೃಷ್ಟಿಸಿದ್ದಾರೆ.
 
ಆದಾಗ್ಯೂ ಮಾಜಿ ಮುಖ್ಯಮಂತ್ರಿ ಮಾಂಜಿ ಯಾವುದೇ ಗಾಯಗಳಿಲ್ಲದೇ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಪಂಚಾಯತ್ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದ ಸುದೇಶ್ ಪಾಸ್ವಾನ್ ಮತ್ತು ಸುನೀಲ್ ಪಾಸ್ವಾನ್ ಅವರನ್ನು ಕೆಲ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಸ್ಥಳದಲ್ಲಿ ಉದ್ರಿಕ್ತ ಸ್ಥಿತಿಯಿದೆ ಎನ್ನುವ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದ್ದರೂ ಮಾಂಜಿ ಸ್ಥಳಕ್ಕೆ ಭೇಟಿ ನೀಡಲು ಹಟಹಿಡಿದಿದ್ದರು ಎನ್ನಲಾಗಿದೆ.
 
ಪೊಲೀಸರು ಜನರನ್ನು ಚದುರಿಸಲು ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು. ಮಾಂಜಿಯವರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಲಾಯಿತು ಎಂದು ಪಕ್ಷದ ವಕ್ತಾರ ದಾನಿಶ್ ರಿಜ್ವಾನ್ ತಿಳಿಸಿದ್ದಾರೆ.
 
ಗಯಾ ಜಿಲ್ಲಾಧಿಕಾರಿ ಕುಮಾರ್ ರವಿ ಮಾತನಾಡಿ, ಮಾಂಜಿಯವರ ಬೆಂಗಾವಲು ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿರುವ ಘಟನೆ ಸತ್ಯಸಂಗತಿಯಾಗಿದೆ. ದುಮಾರಿಯಾ ಉದ್ರಿಕ್ತವಾಗಿದ್ದರಿಂದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ