ಬಡವನೆಂದು ಪರಿಗಣಿಸಿ ಕೇಜ್ರಿ ಪರ ಉಚಿತವಾಗಿ ವಾದಿಸುತ್ತೇನೆಂದ ಜೇಠ್ಮಲಾನಿ

ಮಂಗಳವಾರ, 4 ಏಪ್ರಿಲ್ 2017 (17:29 IST)
ಮಾನನಷ್ಟ ಮೊಕದ್ದಮೆಯ ವಕಾಲತ್ತಿಗಾಗಿ ರಾಮ್ ಜೇಠ್ಮಲಾನಿ ನೀಡಿರುವ 3.8 ಕೋಟಿ ರೂ. ಬಿಲ್ ಪೇಮೆಂಟ್`ಗಾಗಿ ಕೇಜ್ರಿವಾಲ್, ಲೆಫ್ಟಿನೆಂಟ್ ಗವರ್ನರ್`ಗೆ ಕಳುಹಿಸಿದ್ದ ವಿಷಯ ಭಾರೀ ಸುದ್ದಿಯಾಗಿತ್ತು. ಜನರ ತೆರಿಗೆ ಹಣವನ್ನ ವೈಯಕ್ತಿಕ ಮಾನನಷ್ಟ ಮೊಕದ್ದಮೆಯ ವಕಾಲತ್ತು ವಹಿಸಿರುವ ವಕೀಲರಿಗೆ ನೀಡುವ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ವಕೀಲ ರಾಮ್ ಜೇಠ್ಮಲಾನಿ, ನಾನು ಶ್ರೀಮಂತರಿಂದ ಹೆಚ್ಚು ಫೀ ಪಡೆಯುವ ವಿಚಾರ ಎಲ್ಲರಿಗೂ ಗೊತ್ತಿದೆ. ಒಂದೊಮ್ಮೆ ಸರ್ಕಾರ ನನ್ನ ಬಿಲ್ ಪಾವತಿಸದಿದ್ದರೆ ಕೇಜ್ರಿವಾಲ್`ಗೆ ಉಚಿತ ಸರ್ವಿಸ್ ನೀಡುವುದಾಗಿ ಹೇಳಿದ್ದಾರೆ. ಬಡ ಕಕ್ಷೀದಾರನೆಂದು ಪರಿಗಣಿಸಿ ಲೀಗಲ್ ಸರ್ವಿಸ್ ಒದಗಿಸುವುದಾಗಿ ಜೇಠ್ಮಲಾನಿ ಹೇಳಿದ್ದಾರೆ. ಅರುಣ್ ಜೇಟ್ಲಿ ಈ ವಿಷಯವನ್ನ ಪ್ರೇರೇಪಿಸಿದ್ದಾರೆ ಎಂದು ಜೇಠ್ಮಲಾನಿ ಆರೋಪಿಸಿದ್ದಾರೆ.

ದೆಹಲಿ ಕ್ರಿಕೆಟ್ ಸಂಸ್ಥೆಯಲ್ಲಿ ಅರುಣ್ ಜೇಟ್ಲಿ ಮತ್ತವರ ಕುಟುಂಬ ಅಕ್ರಮ ಎಸಗಿದೆ ಎಂದು ಆರೋಪಿಸಿದ್ದ ಅರವಿಂದ್ ಕೇಜ್ರಿವಾಲ್, ರಾಘವ್ ಚಡ್ಡಾ, ಕುಮಾರ್ ವಿಶ್ವಾಸ್, ಅಶುತೊಷ್, ಸಂಜಯ್ ಸಿಂಗ್, ದೀಪಕ್ ಬಜಪಾಯ್ ವಿರುದ್ಧ ಅರುಣ್ ಜೇಟ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿ, 10 ಕೋಟಿ ಪರಿಹಾರದ ಬೇಡಿಕೆ ಇಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ