ಗುರ್ಗಾಂವ್ ಜಲಾವೃತವಾಗಲು ಕೇಜ್ರಿವಾಲ್ ಕಾರಣ: ಕಟ್ಟರ್

ಶುಕ್ರವಾರ, 29 ಜುಲೈ 2016 (18:11 IST)
ಗುರುವಾರವಿಡಿ ಸುರಿದ ಭಾರಿ ಮಳೆಗೆ ಹರಿಯಾಣಾದ ಗುರ್‌ಗಾಂವ್ ಸಂಪೂರ್ಣವಾಗಿ ಜಲಾವೃತವಾಗಿದ್ದು ಸತತ 10 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ನಿನ್ನೆ ಸಂಜೆಯಿಂದ ಇಂದು ಬೆಳಗಿನವರೆಗೂ ಪರದಾಡಬೇಕಾಯಿತು.  ಈ ಅವ್ಯವಸ್ಥೆಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರೇ ಕಾರಣ ಎಂದು ಹರ್ಯಾಣಾದ ಮುಖ್ಯಮಂತ್ರಿ ಮನೋಹರ ಲಾಲ್ ಕಟ್ಟರ್ ಆರೋಪಿಸಿದ್ದಾರೆ.

ದೆಹಲಿ ಸರ್ಕಾರದ ಅಸಹಕಾರವೇ ಇದಕ್ಕೆಲ್ಲಾ ಕಾರಣ . ದೆಹಲಿಯ ನಜಾಫ್‍ಗಢ್ ಮೋರಿಯ ಮೂಲಕ ಗುರ್‍‍ಗಾಂವ್‍ನ ನೀರು ಹರಿದುಹೋಗಬೇಕಾಗಿತ್ತು. ಆದರೆ ಆ ಮೋರಿಯನ್ನು ದೆಹಲಿಯಲ್ಲಿ ಅರ್ಧ ಮುಚ್ಚಿರುವುದರಿಂದ ಗುರ್‍‍ಗಾಂವ್‍ನಲ್ಲಿ ನೀರು ಸ್ಥಗಿತಗೊಂಡು ಈ ಪರಿಯಲ್ಲಿ ಸಮಸ್ಯೆ ಉದ್ಭವಿಸಿದೆ ಎಂದು ಕಟ್ಟರ್ ಟ್ವಿಟರ್ ಮೂಲಕ ಕೇಜ್ರಿವಾಲ್ ವಿರುದ್ಧ ಕಿಡಿಕಾರಿದ್ದಾರೆ.

 Mr. @ArvindKejriwal should be asked this.Frustrated by non-cooperation by Delhi Govt,we have got it declared as NH.

    — Manohar Lal (@mlkhattar) July 28, 2016

ನಾಳೆ ನಾಗ್ಪುರಕ್ಕೆ ಹೋಗುವ ತಯಾರಿಯಲ್ಲಿರುವ ಅರವಿಂದ ಕೇಜ್ರಿವಾಲ್ ಕಟ್ಟರ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿಲ್ಲ.  ಕೇಂದ್ರದ ಜತೆಗಿನ ತೀವ್ರ ಜಟಾಪಟಿಯ ನಡುವೆ 12 ದಿನಗಳ ಬ್ರೇಕ್ ತೆಗೆದುಕೊಳ್ಳಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆಗಸ್ಟ್ 1 ರಿಂದ 10 ದಿನಗಳ ಕಾಲ ವಿಪಾಸ್ಸನ ಧ್ಯಾನ (ಭಾರತದ ಪುರಾತನ ಧ್ಯಾನತಂತ್ರದ ಒಂದು ಮಾದರಿ)ಕ್ಕೆ ಶರಣಾಗಲಿದ್ದಾರೆ. ಈ ಸಂದರ್ಭದಲ್ಲಿ ಕೇಜ್ರಿವಾಲ್ ವೃತ್ತಪತ್ರಿಕೆ, ದೂರದರ್ಶನ ಮತ್ತು ಇತರ ಎಲ್ಲ ಮಾಧ್ಯಮಗಳಿಂದ ದೂರವಿರಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸರ್ಕಾರವನ್ನು ಸಂಭಾಳಿಸಲಿದ್ದಾರೆ.

ಕಟ್ಟರ್ ಟ್ವೀಟ್‌ಗೆ ಪ್ರತ್ಯುತ್ತರ ನೀಡಿರುವ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ,ಗುರ್‍‍ಗಾಂವ್‍ನ್ನು ಗುರುಗ್ರಾಮ್ ಎಂದು ಹೆಸರು ಬದಲಿಸಿದ ಕೂಡಲೇ ಅಭಿವೃದ್ಧಿ ಎನಿಸುವುದಿಲ್ಲ. ಅದಕ್ಕೆ ಸರಿಯಾದ ಯೋಜನೆ ಮತ್ತು ನಿರ್ವಹಣೆ ಬೇಕು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ