Indore Murder case: ಗಂಡನನ್ನು ಕೊಂದ ಆರು ಮಂದಿ ಖತರ್ನಾಕ್ ಪತ್ನಿಯರು ಇವರೇ

Krishnaveni K

ಸೋಮವಾರ, 9 ಜೂನ್ 2025 (14:26 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಗೃಹಹಿಂಸೆ ಎನ್ನುವುದು ಕೇವಲ ಮಹಿಳೆಯರಿಗೆ ಮಾತ್ರ ಆಗುತ್ತಿಲ್ಲ. ಪುರುಷರೂ ಇದಕ್ಕೆ ಬಲಿಯಾಗುತ್ತಿದ್ದಾರೆ. ಇಂಧೋರ್ ನಲ್ಲಿ ಹನಿಮೂನ್ ಗೆಂದು ಗಂಡನನ್ನು ಕರೆದುಕೊಂಡು ಹೋಗಿ ಹೆಂಡತಿ ಕೊಲೆ ಮಾಡಿದ ಘಟನೆ ಎಲ್ಲರಿಗೂ ಶಾಕ್ ತಂದಿದೆ. ಈ ಹಿನ್ನಲೆಯಲ್ಲಿ ಗಂಡನ ಸಾವಿಗೆ ಕಾರಣರಾದ ಆರು ಮಂದಿ ಖತರ್ನಾಕ್ ಪತ್ನಿಯವರ ವಿವರ ಇಲ್ಲಿದೆ ನೋಡಿ.

ಸೋನಮ್ ರಘುವಂಶಿ: ಮೇ 10 ರಂದು ರಾಜ ರಘುವಂಶಿ ಜೊತೆ ಮದುವೆಯಾಗಿದ್ದ ಸೋನಮ್ ಹನಿಮೂನ್ ಗೆ ಹೋಗುವ ನೆಪ ಮಾಡಿ ಗಂಡನನ್ನು ಮೇಘಾಲಯಕ್ಕೆ ಕರೆದುಕೊಂಡು ಹೋಗಿದ್ದಳು. ಅಲ್ಲಿ ಕೆಲವು ಗೂಂಡಾಗಳಿಗೆ ಸುಪಾರಿ ಕೊಟ್ಟು ಗಂಡನ ಕತೆ ಮುಗಿಸಿದ್ದಳು. ಬಳಿಕ ಒಂದು ವಾರದಿಂದ ನಾಪತ್ತೆಯಾಗಿದ್ದಳು. ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.

ನಿಖಿತಾ: ಬೆಂಗಳೂರಿನ ಟೆಕಿ ಅತುಲ್ ಸುಭಾಷ್ ಕೇಸ್ ಇಡೀ ದೇಶದಲ್ಲೇ ಸಂಚಲನ ಮೂಡಿಸಿತ್ತು. ಪತ್ನಿ ನಿಖಿತಾ ಕಾಟ ತಾಳಲಾರದೇ ವಿಡಿಯೋ ಮಾಡಿ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದ. ಮಗನನ್ನು ಕರೆದುಕೊಂಡು ತವರು ಸೇರಿದ್ದ ನಿಖಿತಾ ಗಂಡನಿಗೆ ಮಗನನ್ನೂ ತೋರಿಸದೇ ಲಕ್ಷಾಂತರ ರೂಪಾಯಿ ಪೀಕುತ್ತಿದ್ದಳು ಎಂದು ಆಕೆಯ ಮೇಲೆ ಆರೋಪಿಸಿ ಪತಿ ವಿಡಿಯೋ ಮಾಡಿದ್ದ. ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಪ್ರಕರಣದ ಬಳಿಕ ಪುರುಷರು ಅನುಭವಿಸುತ್ತಿರುವ ಗೃಹಹಿಂಸೆ ಬಗ್ಗೆ ದೇಶದಾದ್ಯಂತ ಭಾರೀ ಚರ್ಚೆಯಾಗಿತ್ತು.

ಮುಸ್ಕಾನ್: ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತದೆಂದು ಮುಸ್ಕಾನ್ ತನ್ನ ಪತಿ ಸೌರಭ್ ತಿವಾರಿಯನ್ನು ಕೊಂದು ತನ್ನ ಮನೆಯ ಪಕ್ಕದಲ್ಲೇ ಡ್ರಮ್ ಒಂದರಲ್ಲಿ ಹೂತು ಹಾಕಿ ಮೇಲಿನಿಂದ ಸಿಮೆಂಟ್ ಹಾಕಿದ್ದಳು. ಬಳಿಕ ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ನನ್ನು ಪೊಲೀಸರು ಬಂಧಿಸಿದ್ದರು.

ಮಣಿಕಾ ಪಹ್ವಾ ಕೇಸ್: ದೆಹಲಿ ಮೂಲದ ಕೆಫೆ ಮಾಲಿಕ ಪುನೀತ್ ಖುರಾನ ತನ್ನ ಪತ್ನಿ ಮಣಿಕಾ ಪಹ್ವಾ ಕಾಟ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದ. ಪತ್ನಿ ಮತ್ತು ಆಕೆಯ ಮನೆಯವರು ಮುಂದಿಡುತ್ತಿದ್ದ ಬೇಡಿಕೆಗಳನ್ನು ಈಡೇರಿಸಲಾಗದೇ ಮತ್ತು ಆಕೆಯಿಂದಾಗುತ್ತಿದ್ದ ಮಾನಸಿಕ ಹಿಂಸೆಗಳನ್ನು ತಾಳಲಾರದೇ ಪುನೀತ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆತ್ಮಹತ್ಯೆಗೆ ಮುನ್ನ ವಿಡಿಯೋ ಮಾಡಿ ತನಗಾಗುತ್ತಿದ್ದ ಕಿರುಕುಳವನ್ನು ವಿವರಿಸಿದ್ದ.

ಪ್ರಗತಿ ಯಾದವ್ ಕೇಸ್: 22 ವರ್ಷದ ಪ್ರಗತಿ ಯಾದವ್ ಮದುವೆಯಾಗಿ ಎರಡೇ ವಾರಕ್ಕೆ ತನ್ನ ಗಂಡ ದಿಲೀಪ್ ನನ್ನು ಗೂಂಡಾಗಳಿಗೆ 2 ಲಕ್ಷ ರೂ. ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಳು. ಈಕೆ ಇದಕ್ಕೆ ಮೊದಲೇ ಅನುರಾಗ್ ಯಾದವ್ ಎಂಬಾತನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ತನ್ನ ಸಂಬಂಧಕ್ಕೆ ಅಡ್ಡಿಯಾಗುತ್ತಾನೆಂದು ಗಂಡನ ಕತೆ ಮುಗಿಸಿದ್ದಳು. ಇದೀಗ ಆಕೆ ಹಾಗೂ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

ಕಾರ್ಕಳದ ಪ್ರತಿಮಾ: ಕರ್ನಾಟಕದಲ್ಲೇ ಇಂತಹದ್ದೊಂದು ಬೆಚ್ಚಿಬೀಳಿಸುವ ಪ್ರಸಂಗ ನಡೆದಿತ್ತು. ಕಾರ್ಕಳದ ಪ್ರತಿಮಾ ಎರಡು ಮಕ್ಕಳ ತಾಯಿ. ಅದೇ ಊರಿನ ಉದ್ಯಮಿ ದಿಲೀಪ್ ಜೊತೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಳು. ಇದೇ ಕಾರಣಕ್ಕೆ ಗಂಡ ಬಾಲಕೃಷ್ಣ ಪೂಜಾರಿಗೆ ಸ್ಲೋ ಪಾಯಿಸನ್ ಕೊಡುತ್ತಾ ಬಂದಿದ್ದಳು. ಆದರೆ ಅದಕ್ಕೆ ಗಂಡ ಚಿಕಿತ್ಸೆ ಪಡೆದು ಗುಣಮುಖನಾಗಿ ಬಂದಾಗ ಮನೆಗೆ ಪ್ರಿಯಕರನನ್ನು ಕರೆಸಿ ನಡು ರಾತ್ರಿ ಗಂಡನ ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು. ಈ ಪ್ರಕರಣ ರಾಜ್ಯಾದ್ಯಂತ ಭಾರೀ ಸುದ್ದಿಯಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ