ಕಾಶ್ಮೀರಿ ಪಂಡಿತರು ಮರಳಲು ನಿರ್ಣಯ ಅಂಗೀಕಾರ

ಗುರುವಾರ, 19 ಜನವರಿ 2017 (15:05 IST)
ಕಣಿವೆ ನಾಡಿಂದ ವಲಸೆ ಹೋಗಿರುವ ಕಾಶ್ಮೀರಿ ಪಂಡಿತರು ಮತ್ತು ಇತರರು ಮರಳಿ ತಮ್ಮ ತವರಿಗೆ ಬರಲು ಪೂರಕ ವಾತಾವರಣ ನಿರ್ಮಿಸಲು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಅವಿರೋಧವಾಗಿ ನಿರ್ಣಯವನ್ನು ಅಂಗೀಕರಿಸಲಾಗಿದೆ. 

ಇಂದು ಮುಂಜಾನೆ ನಡೆದ ಕಲಾಪದಲ್ಲಿ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಕಾಶ್ಮೀರಿ ಪಂಡಿತರು ಮತ್ತು ಇತರ ವಲಸಿಗರು ಹಿಂತಿರುಗಲು ವಿಧಾನಸಭೆ ನಿರ್ಣಯ ಕೈಗೊಳ್ಳಬೇಕು ಎಂದು ಹೇಳಿದರು. 
 
"ದುರದೃಷ್ಟಕರ ಸನ್ನಿವೇಶಕ್ಕ ಸಿಲುಕಿ ಕಾಶ್ಮೀರಿ ಪಂಡಿತರು, ಸಿಖ್ ಸಮುದಾಯದ ಕೆಲವರು ಮತ್ತು ಮುಸ್ಲಿಮರು ಕಣಿವೆನಾಡನ್ನು ಬಿಟ್ಟು ಹೋಗಿ 27 ವರ್ಷಗಳಾಯಿತು. ಮತ್ತೀಗ ಪಕ್ಷ ರಾಜಕಾರಣವನ್ನು ಮೀರಿ ಅವರು ಹಿಂತಿರುಗಲು ಪೂರಕ ವಾತಾವರಣ ನರ್ಮಿಸುವ ನಿರ್ಣಯ ಅಂಗೀಕಾರವಾಗಬೇಕು," ಎಂದು ನ್ಯಾಷನಲ್ ಕಾನ್ಫರೆನ್ಸ್ ಕಾರ್ಯಕಾರಿ ಅಧ್ಯಕ್ಷರಾಗಿರುವ ಒಮರ್ ಒತ್ತಾಯಿಸಿದರು. 
 
ಪ್ರಶ್ನೋತ್ತರ ಅವಧಿ ಕೊನೆಗೊಳ್ಳುವ ವೇಳೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಅಬ್ದುಲ್ ರೆಹಮಾನ್ ಈ ನಿರ್ಣಯವನ್ನು ಅನುಮೋದಿಸಿದರು ಮತ್ತು ಸಭಾಪತಿ ಕವಿಂದರ್ ಗುಪ್ತಾ ಮಂಡಿಸಿದ ನಿರ್ಣಯ ಕೂಗುಮತದ ಮೂಲಕ ಅಂಗೀಕಾರವಾಯಿತು. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ