ಕನ್ಹಯ್ಯಾಕುಮಾರ್ ಭಗತ್‌ಸಿಂಗ್‌ರಂತೆ: ಬಿಜೆಪಿ ಸಂಸದ

ಶನಿವಾರ, 4 ನವೆಂಬರ್ 2017 (15:45 IST)
ಜವಾಹರಲಾಲ್ ನೆಹರು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್‌ರಂತೆ ಎಂದು ಬಿಜೆಪಿ ಸಂಸದ ಭೋಲಾ ಸಿಂಗ್ ಹೊಗಳಿದ್ದಾರೆ.
ಪ್ರಧಾನಿ ಮೋದಿ, ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಬಿಜೆಪಿ ಪಕ್ಷದ ಕಟ್ಟಾ ವಿರೋಧಿಯಾಗಿರುವ ಕನ್ಹಯ್ಯಾ ಕುಮಾರ್‌ನನ್ನು ಭಗತ್ ಸಿಂಗ್‌ಗೆ ಹೋಲಿಕೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.
 
ಹೇಳಿಕೆ ವಿವಾದದ ತಿರುವು ಪಡೆಯುತ್ತಿದ್ದರೂ ತಮ್ಮ ಹೇಳಿಕೆಗೆ ಬದ್ಧ ಎಂದಿರುವ ಬಿಜೆಪಿ ಸಂಸದ ಭೋಲಾ ಸಿಂಗ್, ಒಂದು ವೇಳೆ ಕನ್ಹಯ್ಯಾ ಕುಮಾರ್ ದೇಶದ್ರೋಹಿ ಎಂದು ಕೇಂದ್ರ ಸರಕಾರ ಪರಿಗಣಿಸಿದಲ್ಲಿ ಯಾಕೆ ಘೋಷಿಸುತ್ತಿಲ್ಲ ಎಂದು ತಮ್ಮದೇ ಪಕ್ಷದ ನಾಯಕರಿಗೆ ತಿರುಗೇಟು ನೀಡಿದ್ದಾರೆ.
 
ಬಿಜೆಪಿ ಹಿರಿಯ ನಾಯಕರಾಗಿದ್ದ ಕೈಲಾಶ್‌ಪತಿ ಮಿಶ್ರಾ ಪುಣ್ಯತಿಥಿ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಸಂಸದ ಭೋಲಾ ಸಿಂಗ್, ಕನ್ಹಯ್ಯಾಕುಮಾರ್‌ರನ್ನು ಭಗತ್ ಸಿಂಗ್‌ಗೆ ಹೋಲಿಸಿದಾಗ ಕಾರ್ಯಕ್ರಮದಲ್ಲಿದ್ದ ಕೆಲವರು ಸಂಸದರ ವಿರುದ್ಧ ಘೋಷಣೆಗಳನ್ನು ಆರಂಭಿಸಿದರು. ಇದರಿಂದ ಬೇಸರಗೊಂಡ ಸಂಸದ ಸಿಂಗ್ ಕಾರ್ಯಕ್ರಮದಿಂದ ತೆರಳಿದ್ದಾರೆ.
 
ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ. ಕನ್ಹಯ್ಯಾ ಕುಮಾರ್ ದೇಶದ್ರೋಹಿಯಾಗಿದ್ದಲ್ಲಿ ಘೋಷಿಸಲು ಇರುವ ಅಡ್ಡಿಯಾದರೂ ಏನು? ಎಂದು ಬಿಜೆಪಿ ಸಂಸದ ಭೋಲಾ ಸಿಂಗ್ ಪ್ರಶ್ನಿಸಿದ್ದಾರೆ. ಪಕ್ಷದ ವಿರುದ್ಧವಾಗಿ ಹಲವಾರು ಬಾರಿ ಹೇಳಿಕೆ ನೀಡಿದ ಖ್ಯಾತಿಯನ್ನು ಬಿಜೆಪಿ ಸಂಸದ ಭೋಲಾ ಸಿಂಗ್ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಪ್ರಧಾನಿ ಮೋದಿ ಉಪಸ್ಥಿತರಿದ್ದ ವೇದಿಕೆಯಲ್ಲಿಯೇ ಸ್ಮಾರ್ಟ್ ಸಿಟಿಯ ವಿರುದ್ಧ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ಭೋಲಾ ಸಿಂಗ್ ಭಾರಿ ವಿವಾದಕ್ಕೊಳಗಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ