ರಮಾನಾಥ್ ರೈ ಕೆಲ ಗುಂಪುಗಳ ಸಚಿವನಂತೆ ವರ್ತನೆ: ಸುರೇಶ್ ಕುಮಾರ್

ಬುಧವಾರ, 19 ಜುಲೈ 2017 (13:46 IST)
ಸಚಿವ ರಮಾನಾಥ್ ರೈ ಕರಾವಳಿ ಪ್ರದೇಶದ ಕೆಲ ಗುಂಪುಗಳ ಸಚಿವನಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಆರೋಪಿಸಿದ್ದಾರೆ.
 
ಕರಾವಳಿ ಪ್ರದೇಶದ ಕೋಮುಗಲಭೆಗಳಿಗೆ ಕಾಂಗ್ರೆಸ್ ಸರಕಾರವೇ ನೇರ ಹೊಣೆಯಾಗಿದೆ. ಒಂದು ಸಮುದಾಯವನ್ನು ಓಲೈಸುವ ಪ್ರಯತ್ನ ಮಾಡುತ್ತಿದೆ. ದುಷ್ಟಶಕ್ತಿಗಳು ಹಿಂದುಗಳ ಮೇಲೆ ಹಲ್ಲೆ ಮಾಡುತ್ತಿದ್ದರೂ ಸರಕಾರ ಮೌನವಾಗಿದೆ ಎಂದು ಟೀಕಿಸಿದರು.
 
ಹಿಂದು ಮುಖಂಡರ ಹತ್ಯೆಗಳ ಹಿಂದಿನ ಕೊಲೆಗಡುಕರನ್ನು ಸರಕಾರ ಬಂಧಿಸಿಲ್ಲ. ಕೆಟ್ಟವರನ್ನು ರಕ್ಷಿಸಿ ಒಳ್ಳೆಯವರನ್ನು ಶಿಕ್ಷಿಸುವುದೇ ಸರಕಾರದ ಮೂಲಮಂತ್ರವಾಗಿದೆ ಎಂದು ಆರೋಪಿಸಿದರು.
 
ಪರಪ್ಪನ ಅಗ್ರಹಾರ ಜೈಲಿನಲ್ಲಿ ಅವ್ಯವಹಾರ ನಡೆಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದ ಸರಕಾರ, ಸತ್ಯಸಂಗತಿಯನ್ನು ವರದಿ ಮಾಡಿದ ಡಿಐಜಿ ರೂಪಾ ಅವರನ್ನು ವರ್ಗಾವಣೆಗೊಳಿಸಿರುವುದು ನಾಚಿಕೆಗೇಡಿತನದ ಸಂಗತಿ ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಕಾಂಗ್ರೆಸ್ ಸರಕಾರದ ವಿರುದ್ಧ ಗುಡುಗಿದ್ದಾರೆ.   
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ