ಭೃಷ್ಟಾಚಾರ, ವಂಶಾಡಳಿತದ ವಿರುದ್ಧ ಮೋದಿ ಗುಡುಗು

ಮಂಗಳವಾರ, 14 ಜೂನ್ 2016 (15:35 IST)
2017ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಗೆಲುವನ್ನು ಸಾಧಿಸಲೇ ಬೇಕೆಂದು ಪಣ ತೊಟ್ಟಿರುವ ಬಿಜೆಪಿ ಈಗಿನಿಂದಲೇ ಪ್ರಚಾರ ಕಾರ್ಯ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಅಲಹಾಬಾದ್‌ನಲ್ಲಿ ತಮ್ಮ ಪಕ್ಷದ ಪರವಾಗಿ ಮತಯಾಚನೆಗಿಳಿದ ಪ್ರಧಾನಿ ನರೇಂದ್ರ ಮೋದಿ ವಂಶಾಡಳಿತ ಮತ್ತು ಭೃಷ್ಟಾಚಾರಕ್ಕೆ ಅಂತ್ಯ ನೀಡಿ ಅಭಿವೃದ್ಧಿಪರವಾದ ತಮ್ಮ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದ್ದಾರೆ.

ಆಡಳಿತಾರೂಢ ಸಮಾಜವಾದಿ, ವಿರೋಧ ಪಕ್ಷಗಳಾದ ಬಹುಜನ ಸಮಾಜವಾದಿ ಮತ್ತು ಕಾಂಗ್ರೆಸ್‌ ಗುರಿಯಾಗಿಸಿಕೊಂಡು ಅವರು ಈ ವಾಗ್ದಾಳಿಯನ್ನು ನಡೆಸಿದ್ದಾರೆ. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ಅತ್ಯುತ್ತಮ ಸಾಧನೆಯನ್ನು ಮಾಡಿತ್ತು. 80 ಸಂಸದೀಯ ಕ್ಷೇತ್ರಗಳಲ್ಲಿ ಬರೊಬ್ಬರಿ 73 ಬಿಜೆಪಿ ಪಾಲಾಗಿದ್ದವು.
 
ಅಪಾರ ಜನಸಾಗರವೇ ನೆರೆದಿದ್ದ ಬಿಜೆಪಿ ಪರಿವರ್ತನ್ ಮೆರವಣಿಗೆಯನ್ನು ಉದ್ದೇಶಿಸಿ ಮಾತನ್ನಾಡುತ್ತಿದ್ದ ಅವರು, ರಾಜ್ಯ ವಂಶಾಡಳಿತ, ಪಕ್ಷಪಾತ, ಜಾತೀಯತೆ ಮತ್ತು ಕೋಮುವಾದದ ಕಪಿಮುಷ್ಠಿಯಲ್ಲಿ ನರಳುತ್ತಿದೆ. ಎಲ್ಲ ಸಮಸ್ಯೆಗಳಿಗೂ ಪರಿಹಾರವಿದ್ದು, ಅಭಿವೃದ್ಧಿಯೇ ಆ ಪರಿಹಾರವಾಗಿದೆ ಎಂದು ಹೇಳಿದ್ದಾರೆ. 
 
ರಾಜ್ಯದಲ್ಲಿರುವುದು ಗೂಂಡಾ ರಾಜ್ಯ, ಇಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಅವರು ಆರೋಪಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ