ವಿದೇಶಿ ವಿನಿಮಯ ಅಕ್ರಮಕ್ಕೆ ಸಂಬಂಧಿಸಿದಂತೆ ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಪರಮಾಪ್ತೆ ಶಶಿಕಲಾ ನಟರಾಜನ್ ಮತ್ತು ಅವರ ಸಹೋದರ ಸಂಬಂಧಿ ಟಿಟಿವಿ ದಿನಕರನ್ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ವಜಾಗೊಳಿಸಲು ಮದ್ರಾಸ್ ಹೈಕೋರ್ಟ್ ಮಧುರೈ ಪೀಠ ನಿರಾಕರಿಸಿದೆ.
ದಿನಕರನ್, ಡಿಪ್ಪರ್ ಇನವೆಸ್ಟ್ಮೆಂಟ್ ಲಿಮಿಟೆಡ್ ಕಂಪನಿಗೆ 1 ಕೋಟಿ ಡಾಲರ್ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಜಾರಿ ನಿರ್ದೇಶನಾಲಯ ದೂರನ್ನು ದಾಖಲಿಸಿತ್ತು. ಈ ಹಣ ಶಶಿಕಲಾ ಗೆಳತಿ ಆರ್. ಸುಶೀಲಾ ಅವರ ಖಾತೆ ಮೂಲಕ ವರ್ಗಾವಣೆಯಾಗಿತ್ತು. ಬಳಿಕ ಬೇರೆ ವ್ಯಕ್ತಿಗೆ ಚೆಕ್ ಮೂಲಕ 25 ಕಂತುಗಳಲ್ಲಿ ಈ ಹಣವನ್ನು ಸಂದಾಯ ಮಾಡಲಾಗಿತ್ತು. ಈ ಹಣ ವರ್ಗಾವಣೆ ಪ್ರಕ್ರಿಯೆಯಲ್ಲಿ ವಿದೇಶಿ ವಿನಿಮಯ ನಿಯಮ ಉಲ್ಲಂಘನೆಯಾಗಿದೆ ಎಂಬುದು ಆರೋಪ.
ಕೆಳ ಹಂತದ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಸೂಕ್ತ ಸಾಕ್ಷ್ಯಗಳ ಕೊರತೆಯಿಂದ 1996ರಲ್ಲಿ ಶಶಿಕಲಾ ಮತ್ತು ದಿನಕರನ್ ಆರೋಪ ಸಾಬೀತಾಗಿರಲಿಲ್ಲ. ಹೀಗಾಗಿ ಅವರಿಬ್ಬರು ಖುಲಾಸೆಯಾಗಿದ್ದು, ಈ ತೀರ್ಪನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿತ್ತು.