ಗಂಗಾನದಿಯಲ್ಲಿ ತೇಲಿ ಬಂದ 500, 1,000 ನೋಟುಗಳು

ಶನಿವಾರ, 12 ನವೆಂಬರ್ 2016 (08:50 IST)
ಪ್ರಧಾನಿ ಮೋದಿ 500 ಮತ್ತು 1,000 ರೂಪಾಯಿ ಮುಖಬೆಲೆ ನೋಟುಗಳನ್ನು ರದ್ದುಗೊಳಿಸಿದ ಮೇಲೆ ಆ ನೋಟುಗಳು ಕೇವಲ ಕಾಗದದ ತುಂಡುಗಳಾಗಿ ಹೋಗಿವೆ. ಕಾಳಧನವನ್ನು ಬಚ್ಚಿಟ್ಟುಕೊಂಡಿದ್ದವರೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.  ಲೆಕ್ಕ ತೋರಿಸಲಾಗದ ಹಣವನ್ನು ಏನು ಮಾಡುವುದು ಎಂದು ಕಂಗಾಲಾಗಿರುವ ಕೆಲವರು ನೋಟುಗಳನ್ನು ಸುಟ್ಟು ಹಾಕಿದರೆ ಮತ್ತೆ ಕೆಲವರು ದೇವರ ಹುಂಡಿಯಲ್ಲಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಕೆಲ ದೇವಸ್ತಾನಗಳ ಹುಂಡಿಗಳಿಗೆ ಬೀಗವನ್ನು ಸಹ ಜಡಿಯಲಾಗಿದೆ. ಮೋದಿ ಈ ನಡೆಯನ್ನಿಟ್ಟಾಗಿನಿಂದ ಗೂಗಲ್ ಸರ್ಚ್‌ನಲ್ಲಿ ಅತಿ ಹೆಚ್ಚು ಹುಡುಕಲಾಗುತ್ತಿರುವ ಪ್ರಶ್ನೆ ಕಪ್ಪುಹಣವನ್ನು ಬಿಳಿ ಹಣವನ್ನಾಗಿಸುವುದು ಹೇಗೆ ಎಂಬುದು. 
ಇಷ್ಟೇ ಅಲ್ಲ , ಮತ್ತೀಗ ನದಿಗಳಲ್ಲಿ ಸಹ ಹಣ ತೇಲಿ ಬರುತ್ತಿದೆ. ಗಂಗಾನದಿಯಲ್ಲಿ ಬುಧವಾರ ದೋಣಿಯೊಂದರಲ್ಲಿ 500, 1,000 ರೂಪಾಯಿಗಳುಳ್ಳ ನೋಟುಗಳ ಕಂತೆ ಹರಿದು ಬಂದಿದೆ.  ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಜನರು ಅದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
 
ಇದೇ ರಾಜ್ಯದ ಬರೇಲಿಯಲ್ಲಿ ಬುಧವಾರ ದೊಡ್ಡ ಮುಖಬೆಲೆ ನೋಟುಗಳನ್ನು ಹರಿದು, ಬೆಂಕಿಗಾಹುತಿ ಮಾಡಿದ ಪ್ರಸಂಗ ವರದಿಯಾಗಿತ್ತು.
 
ಒಟ್ಟಿನಲ್ಲಿ ಸರ್ಕಾರಕ್ಕೆ ವಂಚಿಸಿ ಹಣ ಕೂಡಿಟ್ಟವರೀಗ ದಿಕ್ಕುತೋಚದೆ ಕಂಗಾಲಾಗಿದ್ದು ಈ ರೀತಿಯಲ್ಲಿ ಹಣವನ್ನು ನಾಶ ಮಾಡುತ್ತಿದ್ದಾರೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ