ದಿನಕ್ಕೆ 15 ಗಂಟೆ ದುಡಿಯುತ್ತಾರಂತೆ, ಸಂಬಳ ತೆಗೆದುಕೊಳ್ಳಲ್ವಂತೆ !

ಭಾನುವಾರ, 1 ಮೇ 2016 (15:19 IST)
ಇದು ನಂಬಲಸಾಧ್ಯವೆನ್ನಿಸಬಹುದು. ಆದರೂ ಸತ್ಯ. ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದದ ಸಿಇಓ ದಿನಕ್ಕೆ 15 ತಾಸು ಕೆಲಸ ಮಾಡುತ್ತಾರೆ. ಆದರೂ ಸಂಬಳವನ್ನು ತೆಗೆದುಕೊಳ್ಳುವುದಿಲ್ಲವಂತೆ. 

ಪತಂಜಲಿ ಆಯುರ್ವೇದದ ಬಹುದೊಡ್ಡ ಯಶಸ್ಸಿನ ಹಿಂದಿರುವ ವ್ಯಕ್ತಿಯಾದ ಆಚಾರ್ಯ ಬಾಲಕೃಷ್ಣ ಸಂಸ್ಥೆಯ 94%ರಷ್ಟು ಷೇರನ್ನು ಹೊಂದಿದ್ದಾರೆ. ಆದರೂ ಅವರು ಸಂಬಳವನ್ನು ಪಡೆಯುವುದಿಲ್ಲ. ಅವರು ಭಾನುವಾರ ಮತ್ತು ಇತರ ರಜಾದಿನಗಳು ಸೇರಿದಂತೆ ದಿನಕ್ಕೆ 15 ತಾಸು ಕೆಲಸ ಮಾಡುತ್ತಾರೆ ಎಂದು ರಾಷ್ಟ್ರೀಯ ಸುದ್ದಿ ಪತ್ರಿಕೆಯೊಂದು ವರದಿ ಮಾಡಿದೆ. 
 
ತಾವು ಈವರೆಗೂ ಒಂದೇ ಒಂದು ದಿನ ರಜೆ ಪಡೆದಿಲ್ಲ ಎಂದು ಸ್ವತಃ ಆಚಾರ್ಯರು ಸಹ ಒಪ್ಪಿಕೊಂಡಿದ್ದಾರೆ. ನಾವು ಏನೆಲ್ಲ ಉತ್ಪಾದನೆಯನ್ನು ಹೊರತಂದಿದ್ದರೂ ಗ್ರಾಹಕರ ಅಗತ್ಯತೆಯನ್ನು ಸದಾ ಮನಸ್ಸಿನಲ್ಲಿಟ್ಟುಕೊಂಡಿರುತ್ತೇವೆ. ಜನರು ನೆಲ್ಲಿಕಾಯಿ ಜ್ಯೂಸ್ ಸಹ ಕುಡಿಯುತ್ತಾರೆಂದು ಯಾರೂ ಸಹ ಬಗೆದಿರಲಿಲ್ಲ ಎಂದು ಅವರು ತಮ್ಮ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ.
 
ಅವರು ಐ-ಫೋನ್ ಬಳಸುತ್ತಾರೆ, ಆದರೆ ಕಚೇರಿಯಲ್ಲಿ ಕಂಪ್ಯೂಟರ್‌ನ್ನು ಇಟ್ಟುಕೊಂಡಿಲ್ಲ. ತುಂಬಾ ಸರಳ ಜೀವನ ನಡೆಸುವ ಅವರು ಕುರ್ತಾ ಮತ್ತು ಧೋತಿಯನ್ನುಡುತ್ತಾರೆ. ಹೆಚ್ಚಿನ ಬಾರಿ ಮುದ್ರಿತ ಪ್ರತಿಗಳನ್ನು ಓದುವುದಕ್ಕೆ ಆದ್ಯತೆ ನೀಡುತ್ತಾರೆ. ಹೆಚ್ಚಾಗಿ ಶುದ್ಧ ಹಿಂದಿಯಲ್ಲಿ ಮಾತನಾಡುತ್ತಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.   
 

ವೆಬ್ದುನಿಯಾವನ್ನು ಓದಿ