ಝಾಕೀರ್ ನಾಯಕ್ ವಿರುದ್ಧ ಸಂಪೂರ್ಣ ತನಿಖೆಗೆ ಆದೇಶ: ರಾಜನಾಥ್ ಸಿಂಗ್

ಶುಕ್ರವಾರ, 8 ಜುಲೈ 2016 (16:43 IST)
ಇಸ್ಲಾಂ ಧರ್ಮ ಪ್ರಚಾರಕ ಝಾಕೀರ್ ನಾಯಕ್ ದ್ವೇಷ ಭಾಷಣದಲ್ಲಿ ತೊಡಗಿದ್ದಾರೆ ಎನ್ನುವ ಆರೋಪಗಳ ಕುರಿತಂತೆ ಪ್ರತಿಕ್ರಿಯೆ ನೀಡಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಝಾಕೀರ್ ಭಾಷಣದ ಸಿಡಿಗಳ ಪರಿಶೀಲನೆ ನಡೆಸುತ್ತಿದ್ದು, ಭಯೋತ್ಪಾದನೆಯೊಂದಿಗೆ ಯಾವತ್ತೂ ಸರಕಾರ ರಾಜಿಯಾಗುವುದಿಲ್ಲ ಎಂದು ಗುಡುಗಿದ್ದಾರೆ.
 
ಝಾಕೀರ್ ಮಾಡಿದ ಭಾಷಣಗಳ ಸಿಡಿಗಳನ್ನು ಪರಿಶೀಲನೆ ನಡೆಸಿ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ಆದೇಶ ನೀಡಲಾಗಿದ್ದು. ಒಂದು ವೇಳೆ, ದ್ವೇಷ ಭಾಷಣ ಮಾಡಿರುವುದು ನಿಜವಾಗಿದ್ದಲ್ಲಿ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
 
ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ದಾಳಿ ನಡೆಸಿದ ಉಗ್ರರು ಝಾಕೀರ್ ಅವರ ಭಾಷಣದಿಂದ ಪ್ರೇರಿತರಾಗಿದ್ದರು ಎನ್ನುವ ವರದಿಗಳ ಆಧಾರದ ಹಿನ್ನೆಲೆಯಲ್ಲಿ, ಮಹಾರಾಷ್ಟ್ರ ಸರಕಾರ ಕೂಡಾ ತನಿಖೆಗೆ ಆದೇಶಿಸಿದೆ.
 
ಝಾಕೀರ್ ನಾಯಕ್ ಭಾಷಣಗಳ ಬಗ್ಗೆ ತನಿಖೆಗಾಗಿ ತನಿಖಾ ತಂಡ ರಚಿಸಿ ವರದಿಯನ್ನು ಸಲ್ಲಿಸುವಂತೆ ಮುಂಬೈ ಪೊಲೀಸ್ ಆಯುಕ್ತರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಆದೇಶಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ