ನುಂಗಂಬಾಕಂ ರೈಲು ನಿಲ್ದಾಣದಲ್ಲಿ ಟೆಕ್ಕಿ ಸ್ವಾತಿ ಕೊಲೆ ಪ್ರಕರಣ: ಆರೋಪಿ ಬಂಧನ

ಶನಿವಾರ, 2 ಜುಲೈ 2016 (09:32 IST)
ಚೆನ್ನೈನ ನುಂಗಂಬಾಕಂ ರೈಲು ನಿಲ್ದಾಣದಲ್ಲಿ ಜೂನ್ 24 ರಂದು ನಡೆದ ಟೆಕ್ಕಿ ಸ್ವಾತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

 
ಬಂಧಿತನನ್ನು ತಿರುನಲ್ವೇಲಿ ಜಿಲ್ಲೆಯ ಸೆಂಗೋಟೈ ತಾಲ್ಲೂಕಿನ ಮೀನಾಕ್ಷಿಪುರಂ ನಿವಾಸಿ ರಾಮ್ ಕುಮಾರ್ (24)ಎಂದು ಗುರುತಿಸಲಾಗಿದ್ದು ಕೃತ್ಯಕ್ಕೆ ಒನ್ ವೇ ಲವ್ ಕಾರಣ ಎಂದು ತಿಳಿದು ಬಂದಿದೆ. 
 
ಪೊಲೀಸರ ಬಂಧನದ ವೇಳೆ ಆರೋಪಿ ರಾಂಕುಮಾರ್‌  ಕುತ್ತಿಗೆಯನ್ನು ಬ್ಲೇಡ್‌ನಿಂದ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಆತನನ್ನು ನೆಲ್ಲೈ ಆಸ್ಪತ್ರೆಗೆ ಸಾಗಿಸಲಾಗಿದ್ದು ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ. 
 
ಆರೋಪಿ ರಾಮ್ ಕುಮಾರ್ ಸರ್ಕಾರಿ ಕಾಲೇಜಿನ ಇಂಜಿನಿಯರಿಂಗ್ ಪದವೀಧರನಾಗಿದ್ದು ಸ್ವಾತಿ ಮತ್ತು ಆಕೆಯ ಪೋಷಕರು ವಾಸವಾಗಿದ್ದ ಮನೆ ಎದುರು ವಾಸವಾಗಿದ್ದ ಎಂದು ತಿಳಿದು ಬಂದಿದೆ. ಕಳೆದ 3 ತಿಂಗಳಿಂದ ಸ್ವಾತಿಯನ್ನು ಪ್ರೀತಿಸುತ್ತಿದ್ದ. ಆದರೆ ಆಕೆ ಆತನ ಪ್ರೀತಿಯನ್ನು ಒಪ್ಪಿಕೊಂಡಿರಲಿಲ್ಲ. ಈ ಕಾರಣದಿಂದಲೇ ಆತ ಕೊಲೆಗೈದಿದ್ದಾನೆ ಎಂದು ಹೇಳಲಾಗುತ್ತಿದೆ.
 
ದೇಶಾದಾದ್ಯಂತ ಸಂಚಲನ ಮೂಡಿಸಿದ್ದ ಈ ಪ್ರಕರಣದ ಆರೋಪಿಯನ್ನು ಬಂಧಿಸಲು 8 ವಿಶೇಷ ತಂಡಗಳನ್ನು ರಚಿಸಲಾಗಿತ್ತು.
 
ಮಹೀಂದ್ರಾ ಸಿಟಿಯಲ್ಲಿರುವ ಇನ್ಫೋಸಿಸ್‌ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಚೂಲೈಮೇಡು ನಿವಾಸಿ ಎಸ್‌.ಸ್ವಾತಿ ಎಂದಿನಂತೆ ಆಫೀಸ್‌ಗೆ ತೆರಳಲು ನಂಗಂಬಾಕಂ ರೈಲ್ವೆ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಒಂದೆರಡು ನಿಮಿಷ ಆಕೆಯ ಜತೆ ಮಾತಿನ ಚಕಮಕಿ ನಡೆಸಿದ ದುಷ್ಕರ್ಮಿ ಬಳಿಕ ಏಕಾಏಕಿ ಮಚ್ಚಿನಿಂದ ಕೊಚ್ಚಿ ಪರಾರಿಯಾಗಿದ್ದ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ