ನೋಟು ನಿಷೇಧ ತಂದ ಸಾವು

ಶನಿವಾರ, 12 ನವೆಂಬರ್ 2016 (07:43 IST)
ಕೇಂದ್ರ ಸರ್ಕಾರ 500 ಮತ್ತು 1,000 ರೂಪಾಯಿ ನೋಟುಗಳನ್ನು ರದ್ದುಗೊಳಿಸಿದ ಬಳಿಕ ದೇಶಾದ್ಯಂತ ಎಲ್ಲ ಬ್ಯಾಂಕ್, ಅಂಚೆ ಕಚೇರಿ ಮತ್ತು ಎಟಿಎಂಗಳ ಮುಂದೆ ಜನಸಾಗರವೇ ಕಂಡುಬರುತ್ತಿದೆ. ಸರತಿ ಸಾಲಲ್ಲಿ ನಿಂತಿದ್ದ ಕೆಲವರು ಪ್ರಾಣವನ್ನೇ ಕಳೆದುಕೊಂಡಿರುವುದು ನಡೆದಿದೆ. 

ರದ್ದು ಗೊಂಡಿರುವ ನೋಟುಗಳ ವಿನಿಮಯಕ್ಕೆ ಬಂದಿದ್ದ ವೇಳೆ ಸಂಭವಿಸಿದ ಪ್ರತ್ಯೇಕ ಅವಘಡಗಳಲ್ಲಿ ಮೂವರು ಮೃತಪಟ್ಟಿದ್ದಾರೆ. ಮುಂಬೈನಲ್ಲಿ ಒಬ್ಬರು ಸಾವನ್ನಪ್ಪಿದ್ದರೆ, ಕೇರಳಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.
 
ಮುಂಬೈನ ನಿವಾಸಿ ವಿಶ್ವಾಸ್ ವರ್ತಕ್(73) ಮುಲುಂದ್‌ನ ಹರಿಓಂ ನಗರದ ಬ್ಯಾಕ್ ಶಾಖೆಯೊಂದರ ಮುಂದೆ ಹಣ ವಿನಿಮಯ ಮಾಡಿಕೊಳ್ಳಲು ಸರತಿ ಸಾಲಲ್ಲಿ ನಿಂತಿದ್ದರು. ಈ ಸಂದರ್ಭದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಅರ್ಧ ಗಂಟೆಯಿಂದ ಕ್ಯೂನಲ್ಲಿದ್ದ ಅವರು ತೀವ್ರ ಬಳಲಿಕೆಯಿಂದ ಕುಸಿದು ಬಿದ್ದರು ಎಂದು ಸ್ಥಳದಲ್ಲಿದ್ದವರು ಹೇಳಿದ್ದಾರೆ.
 
ಏತನ್ಮಧ್ಯೆ, ಕೇರಳದಲ್ಲಿ ಕೂಡ ಹಣ ವಿನಿಮಯಕ್ಕೆ ಬಂದಿದ್ದ ಇಬ್ಬರು ಸಾವನ್ನಪ್ಪಿದ ವರದಿಯಾಗಿದೆ. ಕೇರಳದ ತಲಚೇರಿ ಮತ್ತು ಆಳಪುರಿಯಲ್ಲಿ ಘಟನೆ ನಡೆದಿದೆ. ಆಳಪುರಿಯಲ್ಲಿ ಬ್ಯಾಂಕ್ ಒಂದರ ಮುಂದೆ ಮುಕ್ಕಾಲು ಗಂಟೆ ಸರತಿ ಸಾಲಲ್ಲಿ ನಿಂತಿದ್ದ ವೃದ್ಧರೊಬ್ಬರು ಕುಸಿದು ಬಿದ್ದು ಮೃತ ಪಟ್ಟಿದ್ದಾರೆ. ತಲಚೇರಿಯಲ್ಲಿ ಉನ್ನಿ(48) ಎಂಬುವವರು  ಎರಡನೇ ಮಹಡಿಯಿಂದ ಕೆಳಕ್ಕೆ ಬಿದ್ದು ದುರ್ಮರಣವನ್ನಪ್ಪಿದ್ದಾರೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ