ಪ್ರೀತಿ ನಿರಾಕರಣೆ: ಭಗ್ನಪ್ರೇಮಿಗಳು ಮಾಡಿದ್ದೇನು ಗೊತ್ತಾ?

ಬುಧವಾರ, 29 ಜೂನ್ 2016 (12:06 IST)
ಅವರಿಬ್ಬರು ಆಕೆಯನ್ನು ಪ್ರೀತಿಸಿದಳು. ಆದರಾಕೆ ಅವರ ಪ್ರೀತಿಯನ್ನು ನಿರಾಕರಿಸಿದ್ದಾಳೆ. ಈ ಕಾರಣಕ್ಕೆ ಸಿಟ್ಟಿಗೆದ್ದ ಇಬ್ಬರು ಸೇರಿಕೊಂಡು ಏನು ಮಾಡಿದರು ಗೊತ್ತೇ? ತಿಳಿಯಲು ಮುಂದೆ ಓದಿ.

ತಮ್ಮ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಭಗ್ನಪ್ರೇಮಿಗಳಿಬ್ಬರು ಸೇರಿ ಅಮಾಯಕ ಯುವತಿಯನ್ನು ಕೊಲೆಗೈಯ್ಯಲೆತ್ನಿಸಿದ ಘಟನೆ ತಿರುಪತಿಯಲ್ಲಿ ನಡೆದಿದೆ. 
 
ತಿರುಪತಿ ನಿವಾಸಿ ಚಂದ್ರಿಕಾಳನ್ನು ನವೀನ್ ಕುಮಾರ್ ಎಂಬ ಯುವಕ ಪ್ರೀತಿಸು ಎಂದು ಕಾಡುತ್ತಿದ್ದ. ಆತನ ಸ್ನೇಹಿತ ಯಶವಂತ ಸಹ ಆಕೆಯ ಮುಂದೆ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಆದರೆ ಚಂದ್ರಿಕಾ ಅವರನ್ನು ಕ್ಯಾರೇ ಎನ್ನುತ್ತಿರಲಿಲ್ಲ. ಹೀಗಾಗಿ ಸಿಟ್ಟಿಗೆದ್ದ ಅವರಿಬ್ಬರು ಆಕೆಯನ್ನು ಕೊಲ್ಲುವ ಸಂಚು ರೂಪಿಸಿದ್ದಾರೆ. ಜೂನ್ 1 ರಂದು ತನ್ನ ಸ್ನೇಹಿತರ ಜತೆಯಲ್ಲಿ ಸ್ಕೂಟಿಯಲ್ಲಿ ಬರುತ್ತಿದ್ದಾಗ ಮದ್ಯದ ಅಮಲಿನಲ್ಲಿದ್ದ ಅವರಿಬ್ಬರು ಬೈಕ್‌ಲ್ಲಿ ಬಂದು ಜೋರಾಗಿ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಘಟನೆ ನಡೆದು ಒಂದು ತಿಂಗಳಾದರೂ ಆಕೆ ಇನ್ನೂ ಚೇತರಿಸಿಕೊಂಡಿಲ್ಲ. ಆಕೆಯ ಬೆನ್ನುಮೂಳೆಗೆ ಗಾಯವಾಗಿದ್ದು 6 ತಿಂಗಳುಗಳ ಕಾಲ ಆಕೆ ಹಾಸಿಗೆಯಲ್ಲೇ ಇರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಜೂನ್ 28 ರಂದು ಎನ್ಐಎಫ್‌ಟಿ ಬೆಂಗಳೂರಿನಲ್ಲಿ ತನ್ನ ಪದವಿ ಶಿಕ್ಷಣವನ್ನು ಪ್ರಾರಂಭಿಸಬೇಕಾಗಿದ್ದ ಆಕೆ ಈಗ ಎದ್ದು ನಡೆಯಲಾಗದ ಸ್ಥಿತಿಗೆ ತಲುಪಿದ್ದಾಳೆ. 
 
ಮೊದಲು ಇದೊಂದು ಅಪಘಾತ ಎಂದು ಭಾವಿಸಲಾಗಿತ್ತು. ಆದರೆ ವಿಚಾರಣೆ ಬಳಿಕ ಸತ್ಯ ಬಯಲಾಗಿದ್ದು ಆರೋಪಿಗಳಿಬ್ಬರನ್ನು ಬಂಧಿಸಿರುವ ಪೊಲೀಸರು ಅವರಿಬ್ಬರ ವಿರುದ್ಧ ನಿರ್ಭಯಾ ಕಾಯಿದೆಯಡಿ ಪ್ರಕರಣವನ್ನು ದಾಖಲಿಸಿದ್ದಾರೆ. 
 
ಕಡಪಾ ಜಿಲ್ಲೆಯ ನವೀನ್ ತಾನಾಗಿಯೇ ಪೊಲೀಸರಿಗೆ ಶರಣಾದರೆ, ಯಶವಂತನನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ