ತನ್ನ ಪತಿಯ ಸಾವಿನ ಬಳಿಕ ಆರ್ಥಿಕ ಸಮಸ್ಯೆಯಿಂದ ಬಲುತ್ತಿದ್ದ 25 ವರ್ಷದ ಸಾವಿತ್ರಿ ದುರ್ನಲೆ ತನ್ನ 6 ವರ್ಷದ ಮಗನ ಕುತ್ತಿಗೆ ಹಿಸುಕಿ ಕೊಲೆಗೈದು ಬಳಿಕ ಶತಾಬ್ದಿ ಆಸ್ಪತ್ರೆಗೆ ಕರೆತಂದು ಮಗನ ಆರೋಗ್ಯದಲ್ಲಿ ವ್ಯತ್ಯಾಸವಾಗಿದೆ ಎಂದು ವೈದ್ಯರ ಬಳಿ ನಾಟಕವಾಡಿದ್ದಾಳೆ. ಆದರೆ ಮಗು ಈಗಾಗಲೇ ಸತ್ತಿದೆ ಎಂದು ವೈದ್ಯರು ಘೋಷಿಸಿದ್ದಾರೆ. ಜತೆಗೆ ಅದರದು ಅಸಹಜ ಸಾವು ಎಂದು ವರದಿ ನೀಡಿದ್ದಾರೆ.
ಕರ್ನಾಟಕದ ಗುಲಬರ್ಗಾ ಮೂಲದ ಮಹಿಳೆ ಕೂಲಿಕಾರ್ಮಿಕನ ಜತೆ ಮದುವೆಯಾಗಿದ್ದಳು. ಆತ ಕಳೆದ ನಾಲ್ಕು ವರ್ಷದ ಹಿಂದೆ ಸಾವನ್ನಪ್ಪಿದ್ದ. ವಾಸಿಸಲು ಮನೆಯೂ ಇಲ್ಲದ ಅವಳು ಮಗನನ್ನು ಸಾಕಲು ಹೆಣಗಾಡುತ್ತಿದ್ದಳು. ತಿಂಗಳಿಗೆ 4,000 ದುಡಿಯುತ್ತಿದ್ದಳಾದರೂ ಸದಾ ಅನಾರೋಗ್ಯದಿಂದ ಬಳಲುತ್ತಿದ್ದ ಮಗನ ಔಷಧಕ್ಕೆ ಆ ಹಣ ಸಾಕಾಗುತ್ತಿರಲಿಲ್ಲ. ಹೀಗಾಗಿ ಮಗನನ್ನು ಸಾಯಿಸಿರುವುದಾಗಿ ಆಕೆ ತಪ್ಪೊಪ್ಪಿಕೊಂಡಿದ್ದಾಳೆ.