ಅಯೋಧ್ಯೆಯಲ್ಲಿ ರಾಮಮಂದಿರ ವಿರೋಧಿಸುವವರ ರುಂಡ ಕತ್ತರಿಸುತ್ತೇವೆ: ಬಿಜೆಪಿ ಶಾಸಕ

ಸೋಮವಾರ, 10 ಏಪ್ರಿಲ್ 2017 (18:55 IST)
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ತಡೆಯೊಡ್ಡುವವರ ರುಂಡವನ್ನು ಕತ್ತರಿಸಿ ಹಾಕಲಾಗುವುದು ಎಂದು ಸ್ಥಳೀಯ ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಗುಡುಗಿದ್ದಾರೆ.
 
ಹೈದ್ರಾಬಾದ್ ನಗರದ ಗೋಶಾಮಹಲ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ರಾಜಾ ಸಿಂಗ್, ರಾಮನವಮಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ಮಾಡಿದ ದ್ವೇಷದ ಭಾಷಣದ ವಿಡಿಯೋ ಇದೀಗ ವೈರಲ್ ಆಗಿದೆ. 
 
ತಮ್ಮ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ರಾಮಮಂದಿರ ನಿರ್ಮಾಣಕ್ಕಾಗಿ ಜೀವ ಕೊಡಲು ಸಿದ್ದ. ರಾಮಮಂದಿರ ನಿರ್ಮಾಣ ವಿರೋಧಿಸುವವರನ್ನು ಹತ್ಯೆಗೈಯಲು ಸಿದ್ದ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
 
ದೇಶವನ್ನು ನಾಶಗೊಳಿಸಬೇಕು ಎನ್ನುವ ಸಿದ್ದಾಂತವಿರುವವರಿಗೆ ತಕ್ಕ ಪಾಛಠ ಕಲಿಸಲು ಸಿದ್ದ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿಯೇ ಸಿದ್ದ ಎಂದು ಘೋಷಿಸಿದರು.
 
ಬಿಜೆಪಿ ಶಾಸಕ ಟಿ.ರಾಜಾ ಸಿಂಗ್ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಬಿಜೆಪಿ ಅಧಿಕಾರವಿರುವ ರಾಜ್ಯಗಳಲ್ಲಿ ಅಲ್ಪಸಂಖ್ಯಾತರನ್ನು ಶೋಷಿಸಲಾಗುತ್ತಿದೆ ಎನ್ನುವುದಕ್ಕೆ  ಬಿಜೆಪಿ ಶಾಸಕನ ಹೇಳಿಕೆ ಸಾಕ್ಷಿಯಾಗಿದೆ ಎಂದು ತಿಳಿಸಿದೆ.
 
ಹೈದ್ರಾಬಾದ್ ಬಿಜೆಪಿ ಘಟಕದ ಅಧ್ಯಕ್ಷೆ ಶಾಯಿನಾ ಎನ್‌ಸಿ ಮಾತನಾಡಿ, ಪ್ರತಿಯೊಬ್ಬರ ಸಮ್ಮತಿಯ ಮೇರೆಗೆ ರಾಮಮಂದಿರ ನಿರ್ಮಾಣ ಮಾಡಲಾಗುವುದು. ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡಾ ಇದೇ ಅಭಿಪ್ರಾಯವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ