ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ರಾಜಕೀಯ ಪ್ರವೇಶವನ್ನು ಅಂತಿಮಗೊಳಿಸಲಾಗಿದ್ದು, ಜೆಡಿಯು ಶೀಘ್ರದಲ್ಲೇ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಲಿದೆ ಎಂದು ರಾಜ್ಯ ಸಚಿವ ಶರ್ವನ್ ಕುಮಾರ್ ಮಂಗಳವಾರ ಹೇಳಿದ್ದಾರೆ.
ನಿಶಾಂತ್ ಅವರಿಗೆ ಪಕ್ಷದಲ್ಲಿ "ದೊಡ್ಡ ಜವಾಬ್ದಾರಿ" ನೀಡಲಾಗುವುದು ಎಂದು ಜೆಡಿಯು ಹಿರಿಯ ನಾಯಕ ಹೇಳಿದ್ದಾರೆ.
ಇದೀಗ ನಿಶಾಂತ್ ಕುಮಾರ್ ಸಕ್ರಿಯ ರಾಜಕೀಯಕ್ಕೆ ಸೇರುತ್ತಾರೆ ಎಂಬುದು ಸ್ಪಷ್ಟವಾಗಿದೆ. ಪಕ್ಷವು ಒಂದು ಅಥವಾ ಎರಡು ದಿನಗಳಲ್ಲಿ ಔಪಚಾರಿಕ ಘೋಷಣೆ ಮಾಡಲಿದೆ. ಪಕ್ಷದ ಕಾರ್ಯಕರ್ತರು ಹಲವಾರು ವರ್ಷಗಳಿಂದ ನಿಶಾಂತ್ ರಾಜಕೀಯಕ್ಕೆ ಎಂಟ್ರಿ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಈಗ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಹೋಳಿ ಮುನ್ನಾ ನಿರ್ಧಾರದಿಂದ ಉತ್ಸುಕರಾಗಿದ್ದಾರೆ ಎಂದು ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಅವರಿಗೆ ಪಕ್ಷದಲ್ಲಿ ದೊಡ್ಡ ಜವಾಬ್ದಾರಿ ನೀಡಲಾಗುವುದು, ಯಾವ ಜವಾಬ್ದಾರಿಯನ್ನು ಪಡೆಯಲಿದ್ದಾರೆ ಎಂಬುದು ಒಂದೆರೆಡು ದಿನದಲ್ಲಿ ನಿರ್ಧಾರವಾಗಲಿದೆ ಎಂದು ಸಚಿವರು ಹೇಳಿದರು.
ನಿಶಾಂತ್ ಅವರನ್ನು ರಾಜ್ಯಸಭೆಗೆ ಕಳುಹಿಸಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಕುಮಾರ್, ಏನು ಬೇಕಾದರೂ ಆಗಬಹುದು. ದಶಕಕ್ಕೂ ಹೆಚ್ಚು ಕಾಲ ರಾಜ್ಯ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಕುಮಾರ್ ಅವರು ಸಿಎಂಗೆ ಅತ್ಯಂತ ಆಪ್ತರು.