ಭಾರತ ಹಲವು ಸಂಸ್ಕೃತಿ, ಧರ್ಮಗಳ ನೆಲೆ. ಕಾಲಾನಂತರದಲ್ಲಿ ಇಲ್ಲಿಗೆ ಬಂದವರೆಲ್ಲರೂ ಇಲ್ಲಿನ ನೆಲದ ಪ್ರಭಾವದಿಂದ ಇಲ್ಲಿಯವರೇ ಆಗಿ ಹೋಗಿದ್ದು, ಆಗುತ್ತಿರುವುದು ನಿತ್ಯ ಸತ್ಯ. ಹಾಗೆ ಭಾರತದಲ್ಲಿ ಕಾಲಿಟ್ಟ ಇಸ್ಲಾಂ ಧರ್ಮ ಕೂಡ ತನ್ನ ಆದ್ಯಾತ್ಮಿಕ ನೆಲೆಯನ್ನು ಇಲ್ಲಿ ಹರಡಿದ್ದು ವಿಶೇಷ.
ಎಲ್ಲ ಧರ್ಮಗಳಲ್ಲಿ ಬದಲಾವಣೆಯ ಗಾಳಿ ಬೀಸುವಂತೆ ಇಸ್ಲಾಮ್ ಧರ್ಮದಲ್ಲಿ ಬೀಸಿದ ಪರಿಣಾಮವಾಗಿ ಹುಟ್ಟಿದ ಪಂಥವೇ ಸೂಫಿ. ಭಾರತದಲ್ಲಿ ಕೇವಲ ಎರಡೇ ಪ್ರಖ್ಯಾತ ಸೂಫಿ ದರ್ಗಾಗಳಿದ್ದು ಮೊದಲನೆಯದು ಖ್ವಾಜಾ-ಮೊಯಿನುದ್ದಿನ್ ಚಿಸ್ತಿ ದರ್ಗಾ. ಇದು ರಾಜಸ್ತಾನದ ಅಜ್ಮೇರ್ ನಗರದಲ್ಲಿದೆ. ಇನ್ನೊಂದು ಖ್ವಾಜಾ- ಗರಿಬ್ಉದ್ದಿನ್ ನವಾಜ್ ದರ್ಗಾ ಕರ್ನಾಟಕದ ಗುಲಬರ್ಗಾದಲ್ಲಿದೆ.
ಹಜರತ್ ಮೊಯಿನುದ್ದಿನ್ ಚಿಸ್ತಿ, ಚಿಸ್ತಿ ಸೂಫಿ ಸಂಪ್ರದಾಯದ ಸ್ಥಾಪಕ ಎಂದು ಪರಿಗಣಿತವಾಗಿದ್ದು, ಭಾರತ ಮತ್ತು ಪಾಕಿಸ್ತಾನಗಳಲ್ಲಿ ಅತಿ ಪ್ರಮುಖ ಸೂಫಿ ಸಂಪ್ರದಾಯದ ಪವಿತ್ರ ಕ್ಷೇತ್ರಗಳಲ್ಲಿ ಒಂದು ಖ್ಯಾತಿ ಪಡೆದಿದೆ. ಕ್ರಿಶ 1190 ರಿಂದ 1232 ರವರೆಗೆ ಮೊಯಿನುದ್ದಿನ್ ಇಲ್ಲಿ ವಾಸವಾಗಿದ್ದನು ಎಂದು ಪ್ರತೀತಿ ಇದೆ.
WD
ಇಸ್ಲಾಮ್ ಧರ್ಮ ಪ್ರಚಾರದಲ್ಲಿ ಸೂಫಿ ಸಂಪ್ರದಾಯ ತನ್ನ ಸಾಮಾಜಿಕ ಸೇವೆ ಮತ್ತು ಆದ್ಯಾತ್ಮಿಕ ಬಲದಿಂದ ಜನಮಾನಸದಲ್ಲಿ ನೆಲೆಯೂರುವಂತೆ ಮಾಡಿದರು. ಮೊಯಿನುದ್ದಿನ್ ನಿದನಾನಂತರ ಇಲ್ಲಿ ಅವರ ಸಮಾಧಿ ನಿರ್ಮಿಸಲಾಗಿದ್ದು ಇಂದಿಗೂ ಎರಡು ದೇಶಗಳಿಂದ ಸಾವಿರಾರು ಇಸ್ಲಾಮ್ ಅನುಯಾಯಿಗಳು ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಇಲ್ಲಿನ ಮಸಿದಿಯು ಮೊಘಲ್ ಚಕ್ರವರ್ತಿ ಶಹಾಜಹಾನ್ ಕಾಲದಿಂದ ನಿರ್ಮಾಣವಾಗಿದೆ.
WD
ಮೊಯಿನುದ್ದಿನ್ ಅವರ ನಿದನಾನಂತರ ಸಾಮಾನ್ಯವಾದ ಗೋರಿಯನ್ನು ನಿರ್ಮಿಸಲಾಗಿತ್ತು. ಮೊಘಲರ ಆಡಳಿತಾವಧಿಯಲ್ಲಿ ಸೂಫಿ ಸಂತರ ದರ್ಗಾ ಕಾಲಕ್ರಮೇಣ ಬದಲಾವಣೆಗೆ ಒಳಗಾಗಿ ಇಂದು ಭವ್ಯ ಮಸೀದಿಗಳ ಸಂಕೀರ್ಣವಾಗಿ ರೂಪುಗೊಂಡಿದೆ.
ಉರುಸ್ ಎಂದು ಕರೆಯಲಾಗುವ ಚಿಸ್ತಿ ಅವರ ವಾರ್ಷಿಕ ಪುಣ್ಯ ತಿಥಿಯಂದು ಇಲ್ಲಿಗೆ ಇತರ ಧರ್ಮಾನುಯಾಯಿಗಳ ಸಹಿತ ಲಕ್ಷದ ಲೆಕ್ಕದಲ್ಲಿ ಇಸ್ಲಾಂ ಅನುಯಾಯಿಗಳು ಬರುತ್ತಾರೆ. ಇಲ್ಲಿಗೆ ಬಂದವರು ಬರಿಗೈಯಿಂದ ಹೋಗುವುದೇ ಇಲ್ಲ ಎಂಬ ಬಲವಾದ ನಂಬಿಕೆ ಇದ್ದು. ಬಂದವರ ಬೇಡಿಕೆ, ಹರಕೆ ಪೂರ್ಣಗೊಳ್ಳುತ್ತವೆ. ಬೇಡಿಕೆ ಈಡೇರಿದ ನಂತರ ಭಕ್ತರು ಹರಕೆಯ ರೂಪದಲ್ಲಿ "ಚದ್ದರ್" ಅರ್ಪಿಸುವುದು ವಾಡಿಕೆ. ಇಲ್ಲಿಗೆ ಬರುವ ಭಕ್ತರಿಗೆ ಅಗತ್ಯ ಮಾಹಿತಿ ಮತ್ತು ಸಹಾಯ ಮಾಡುವ ಕಾರ್ಯಕರ್ತರಿದ್ದು ಅವರನ್ನು "ಖಧಿಮ್" ಎಂದು ಕರೆಯುತ್ತಾರೆ.
WD
ವರ್ಷದ ಯಾವುದೇ ದಿನಗಳಲ್ಲಿ ಇಲ್ಲಿ ಬೇಟಿ ನೀಡಬಹುದಾಗಿದೆ, ಅಜ್ಮೇರ್ ನಗರಕ್ಕೆ ದೇಶದ ಬಹುತೇಕ ಪ್ರಮುಖ ರೈಲು ನಿಲ್ದಾಣಗಳಿಂದ ರೈಲು ಸೇವೆ ಇದೆ. ಬಸ್ ಮೂಲಕ ಕೂಡ ಅಜ್ಮೇರಗೆ ತಲುಪಬಹುದಾಗಿದೆ. ಜೈಪುರ್, ಜೋಧಪುರ, ದೆಹಲಿಯಿಂದ ಬಸ್ ಸೌಕರ್ಯ ಇದೆ.