ಶ್ರೇಷ್ಠ ಕ್ಷಮೆ - ಜೈನ ಕ್ಷಮಾವಾಣಿ ಪರ್ವ

ಭಿಕಾ ಶರ್ಮಾ
WD
ಧಾರ್ಮಿಕ ಯಾತ್ರೆಯ ಈ ಸರಣಿಯಲ್ಲಿ ನಾವು ನಿಮ್ಮನ್ನು ವಿವಿಧ ಜೈನ ದೇವಾಲಯಗಳಿಗೆ ಕರೆದೊಯ್ಯುತ್ತೇವೆ. ಜೈನ ಧರ್ಮದ ಅನುಯಾಯಿಗಳು ಪರ್ಯುಶನ್ ಹಬ್ಬವನ್ನು ಅತ್ಯಂತ ಶ್ರದ್ಧೆ ಮತ್ತು ಉತ್ಸಾಹದಿಂದ ಆಚರಿಸುತ್ತಾರೆ. ಜೈನ ಧರ್ಮ ಅನುಯಾಯಿಗಳಲ್ಲಿ ಶ್ವೇತಾಂಬರರು ಮತ್ತು ದಿಗಂಬರರು ಎಂಬ ಎರಡು ಪಂಗಡಗಳಿವೆ. ಶ್ವೇತಾಂಬರರು ಆಚರಿಸುವ ಈ ಪರ್ಯುಶನ್ ಹಬ್ಬವನ್ನು ಎಂಟು ದಿನಗಳ ಕಾಲ ಆಚರಿಸಲಾಗುತ್ತದೆ. ಇದಾದ ಬಳಿಕ ದಿಗಂಬರ ಜೈನ ಸಮುದಾಯವು ಈ ಹಬ್ಬವನ್ನು ನಂತರದ ಹತ್ತು ದಿನಗಳ ಕಾಲ ಆಚರಿಸುತ್ತಾರೆ. ಈ ಪರ್ಯುಶನ್ ಹಬ್ಬವನ್ನು ದಸ್‌ಲಕ್ಷಣ್ ಎಂದೂ ಕರೆಯಲಾಗುತ್ತದೆ.
WD


ದಿವಾಲಿ, ಈದ್ ಅಥವಾ ಕ್ರಿಸ್‌ಮಸ್ ಆಚರಣೆಯಷ್ಟು ವಿಜೃಂಭಣೆಯಿಂದ ಪರ್ಯುಶನ್ ಹಬ್ಬವನ್ನು ಆಚರಿಸದಿದ್ದರೂ, ಜೈನ ಸಮುದಾಯದಲ್ಲಿ ಈ ಹಬ್ಬಕ್ಕೆ ಸಾಕಷ್ಟು ಪ್ರಾಮುಖ್ಯತೆ ಇದೆ, ಮತ್ತು ಸಮಾಜದ ಮೇಲೆ ಇದರ ಪ್ರತಿಫಲನವನ್ನು ಸುಲಭವಾಗಿ ಕಾಣಬಹುದಾಗಿದೆ. ಇಂಧೋರಿನ ಜೈನ ದೇವಾಲಯಗಳಲ್ಲಿ ಈ ಹಬ್ಬದ ಸಡಗರವನ್ನು ಕಾಣಬಹುದಾಗಿತ್ತು. ಸಾವಿರಾರು ಜೈನ ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ಭಗವಾನ್ ಮಹಾವೀರನ ಆಶೀರ್ವಾದ ಪಡೆದರು. ಈ ಹಬ್ಬದ ವೇಳೆ ದೇವಾಲಯಗಳನ್ನು ಸುಂದರವಾಗಿ ಅಲಂಕರಿಸಿದ್ದು, ದೇವಾಲಯದ ಸೌಂದರ್ಯ ಕಣ್ಣಲ್ಲಿ ತುಂಬಿಕೊಳ್ಳುವಂತಿತ್ತು.

WD
ಪರ್ಯುಶನ್ ಹಬ್ಬಾಚರಣೆಯ ಪ್ರಮುಖ ಉದ್ದೇಶವೆಂದರೆ, ವಿವಿಧ ಮಾರ್ಗಗಳ ಮೂಲಕ ಆತ್ಮ ಪರಿಶುದ್ಧತೆಯ ಸಾಧನೆ. ಇದಕ್ಕಾಗಿ ಪರಿಸರದ ಪರಿಶುದ್ಧತೆಯೂ ಅತ್ಯಗತ್ಯ.

ಪರ್ಯುಶನ್ ಆಚರಣೆ ವೇಳೆ, ಪ್ರಾರ್ಥನೆ, ಪೂಜೆ, ತ್ಯಾಗ, ಅಹಿಂಸೆ ಮತ್ತು ಉಪವಾಸ ಅತ್ಯಂತ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತವೆ. ಇವು ಜೈನಧರ್ಮದ ಮೂಲತತ್ವಗಳೂ ಆಗಿವೆ. ಈ ಹಬ್ಬದ ಆಚರಣೆಯ ವೇಳೆ ಜನರು ತಮ್ಮ ದೈನಂದಿನ ವ್ಯವಹಾರದಿಂದ ದೂರವೇ ಇರುತ್ತಾರೆ. ಜೀವನದಲ್ಲಿ ತಾಳ್ಮೆಯ ಮಹತ್ವ ಮತ್ತು ವಿವೇಕದ ಪ್ರಾಮುಖ್ಯತೆಯನ್ನು ಅರಿತುಕೊಳ್ಳಲು ಹೆಚ್ಚಿನ ಒತ್ತು ನೀಡಲಾಗುತ್ತದೆ.
WD


ಪರ್ಯುಶನ್ ಪರ್ವದ ಕೊನೆಯಲ್ಲಿ ಕ್ಷಮಾವಾಣಿ ಪರ್ವವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಜೈನ ಅನುಯಾಯಿಗಳು ಹಿಂದಿನ ವರ್ಷದಲ್ಲಿ ತಾವು ತಿಳಿದೋ ಇಲ್ಲ ತಿಳಿಯದೆಯೋ ಇತರರ ಭಾವನೆಗಳನ್ನು ನೋಯಿಸಿರುವ ಕ್ರಿಯೆಗಾಗಿ ಕ್ಷಮೆ ಯಾಚಿಸುತ್ತಾರೆ. ತಮ್ಮೆಲ್ಲ ಕೆಟ್ಟ ನಡತೆಗೆ ಕ್ಷಮೆ ಯಾಚಿಸುವವರಿಗಿಂತಲೂ, ಇಂತಹ ನಡತೆಯನ್ನು ಕ್ಷಮಿಸುವುದು ಯಾವಾಗಲೂ ಉನ್ನತವಾಗಿರುತ್ತದೆ ಎಂದು ನಂಬಲಾಗಿದೆ.