ವಜ್ರ ವೈಢೂರ್ಯಗಳಿಂದ ತುಂಬಿ ತುಳುಕುತ್ತಿದ್ದ ಹಂಪಿ ಸಾಮ್ರಾಜ್ಯ

ಶುಕ್ರವಾರ, 15 ಜುಲೈ 2016 (17:51 IST)
ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿ ವೈಭವದಿಂದ ಮೆರೆದ ಹಂಪೆಯಲ್ಲಿನ ಪ್ರತಿಯೊಂದು ಕಲ್ಲು, ಕಲ್ಲುಗಳೂ ಕೂಡ ಹಿಂದಿನ ಗತವೈಭವವನ್ನು ಸಾರಿ ಹೇಳುತ್ತವೆ. ಗುರು ವಿದ್ಯಾರಣ್ಯರ ನಿರ್ದೇಶನದ ಮೇರೆಗೆ ಹರಿಹರ ಮತ್ತು ಬುಕ್ಕ ಕ್ರಿ.ಶ.1336ರಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ್ದರು. ಹಂಪೆ ಅದರ ರಾಜಧಾನಿಯಾಗಿತ್ತು. ವಿರೂಪಾಕ್ಷ ಅವರ ಆರಾಧ್ಯ ದೈವ.
ಯುನೆಸ್ಕೊ ಹಂಪೆಯನ್ನು ವಿಶ್ವಪರಂಪರೆಯ ಪಟ್ಟಿಗೆ ಸೇರಿಸಿ ಅದರ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ. ಹಂಪೆ ಇಂದು ವಿಶ್ವವಿಖ್ಯಾತ ಪ್ರವಾಸಿ ತಾಣ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಸುಮಾರು 26 ಚದರ ಕಿ.ಮೀ.ವಿಸ್ತಾರಕ್ಕೆ ವಿಸ್ತರಿಸಿಕೊಂಡಿರುವ ಹಂಪೆಯ ಅವಶೇಷಗಳನ್ನು ವೀಕ್ಷಿಸಲು ಎರಡು ದಿನಗಳು ಬೇಕು. 
 
ವಿರೂಪಾಕ್ಷ ದೇವಾಲಯ: ಹಂಪೆಯ ಪ್ರಸಿದ್ಧ ದೇವಾಲಯವಾಗಿರುವ ಇದನ್ನು ಪಂಪಾವತಿ ದೇವಾಲಯ ಎಂದೂ ಕರೆಯುವ ವಾಡಿಕೆ ಇದೆ. ವಿರೂಪಾಕ್ಷ ವಿಜಯನಗರ ಅರಸರ ಕುಲದೈವ. ಮೂಲಗುಡಿ ಹೊಯ್ಸಳ ಬಲ್ಲಾಳನ ಕಾಲದಲ್ಲಿ 11ನೇ ಶತಮಾನದಲ್ಲಿ ರಚನೆಯಾಯಿತು. 16ನೇ ಶತಮಾನದ ವೇಳೆಗೆ ಇದಕ್ಕೆ ಅನೇಕ ಭಾಗಗಳು ಸೇರ್ಪಡೆಯಾದವು.
ವಿರೂಪಾಕ್ಷ ದೇವಾಲಯದ ಮುಂಭಾಗ 732 ಮೀ.ಉದ್ದ ಹಾಗೂ 28ಮೀ.ಅಗಲದ ಹಂಪೆ ಬಜಾರ್ ಇದೆ. ಇದು ವಿಜಯನಗರದ ಅತಿ ದೊಡ್ಡ ಬಜಾರ್. ಇಲ್ಲಿ ಮುತ್ತು ರತ್ನ ವಜ್ರವೈಢೂರ್ಯಗಳನ್ನು ಮಾರಾಟ ಮಾಡಲಾಗುತ್ತಿತ್ತು ಎಂದು ಕೃಷ್ಣದೇವರಾಯನ ಕಾಲದಲ್ಲಿ ಹಂಪೆಗೆ ಭೇಟಿ ನೀಡಿದ ಪೋರ್ಚುಗೀಸ್ ಪ್ರವಾಸಿಗ ಡೊಮಿಂಗೋ ಪೇಯಿಸ್ ದಾಖಲಿಸಿದ್ದಾನೆ. ಈಗಲೂ ಇಲ್ಲಿ ಅಂಗಡಿ ಸಾಲುಗಳಿವೆ. ಹಂಪೆ ಬಜಾರ್‌ನ ಪೂರ್ವ ತುದಿಯಲ್ಲಿ ವಿರೂಪಾಕ್ಷ ಗುಡಿಯ ಕಡೆಗೆ ಮುಖಮಾಡಿ ಮಲಗಿರುವ ಬೃಹತ್ ನಂದಿ ವಿಗ್ರಹ ಇದೆ.
 
ಕೋದಂಡರಾಮ ದೇವಾಲಯ:ಹಂಪೆ ಬಜಾರ್‌ನ ಪೂರ್ವ ತುದಿಯ ಉತ್ತರಕ್ಕೆ ನೈಸರ್ಗಿಕ ಬಂಡೆಯಲ್ಲಿ ಕೆತ್ತಿಸಲಾದ ರಾಮ, ಸೀತೆ ಲಕ್ಷ್ಮಣರ 15 ಅಡಿ ಎತ್ತರದ ವಿಗ್ರಹಗಳು ವಿಸ್ಮಯವನ್ನುಂಟು ಮಾಡುತ್ತವೆ. ಕೋದಂಡರಾಮ ದೇವಾಲಯದ ಸಮೀಪದಲ್ಲೇ ಯಂತ್ರೋದ್ಧಾರಕ ಆಂಜನೇಯ ಗುಡಿ ಕೂಡ ಇದೆ.
 
ಅಚ್ಯುತರಾಯ ದೇವಸ್ಥಾನ: ಕೋದಂಡರಾಮಯ್ಯ ದೇವಾಲಯದಿಂದ ಮೆಟ್ಟಿಲು ಮಾರ್ಗವಾಗಿ ಸ್ವಲ್ಪ ದೂರ ಪೂರ್ವಕ್ಕೆ ಹೋಗಿ ದಕ್ಷಿಣಕ್ಕೆ ತಿರುಗಿದರೆ ಅಚ್ಯುತರಾಯ ದೇವಸ್ಥಾನ ಇದೆ. ಇದಕ್ಕೆ ಎರಡು ಪ್ರಾಕಾರ ಗೋಡೆಗಳು. ದೇವಾಲಯದ ಎದುರಿನ ಅಂಗಡಿ ಸಾಲುಗಳನ್ನು ಸೂಳೆ ಬಜಾರ್ ಅಥವಾ ರಾಜನರ್ತಕಿಯರ ಬೀದಿ ಎಂದು ಕರೆಯುತ್ತಾರೆ.
ವಿಜಯವಿಠಲ ದೇವಾಲಯ: ಹಂಪೆಯ ಅತ್ಯುತ್ತಮ ಕಟ್ಟಡಗಳಲ್ಲೊಂದು. ಪ್ರೌಢ ದೇವರಾಯನ ಕಾಲದಲ್ಲಿ ಪ್ರಾರಂಭಗೊಂಡ ಈ ದೇವಾಲಯದ ಕಾಮಗಾರಿ ಕೃಷ್ಣದೇವರಾಯ, ಅಚ್ಯುತರಾಯ ಮತ್ತು ಸದಾವಶಿವ ನಗರ ಕಾಲದಲ್ಲೂ ಮುಂದುವರಿಯಿತು. 1565ರಲ್ಲಿ ವಿಜಯನಗರ ಸಾಮ್ರಾಜ್ಯ ಪತನಗೊಂಡಿದ್ದರಿಂದ ದೇವಾಲಯದ ಕಾಮಗಾರಿ ಸ್ಥಗಿತಗೊಂಡು ಕೆಲವು ಭಾಗಗಳು ಅಪೂರ್ಣವಾಗಿ ಉಳಿದಿದೆ.
 
ಹಜಾರರಾಮ ದೇವಾಲಯ: ಇದು ಕೋಟೆಯೊಳಗೆ, ರಾಜನ ದರ್ಬಾರ್ ಸಭಾಂಗಣದಿಂದ ಉತ್ತರಕ್ಕಿದೆ. ಹಂಪೆಯಲ್ಲಿ ಅಳಿದುಳಿದಿರುವ ಐದು ಪ್ರಮುಖ ದೇವಾಲಯಗಳಲ್ಲೊಂದು. ದೇವಾಲಯದ ಗೋಡೆಗಳ ಮೇಲೆ ರಾಮಾಯಣ, ಮಹಾಭಾರತದ ದೃಶ್ಯಗಳು ಹಾಗೂ ವೈಷ್ಣವ ದೇವತೆಗಳ ಶಿಲ್ಪಗಳು ಕಂಡು ಬರುತ್ತವೆ.
ರಾಣಿಯರ ಸ್ನಾನ ಗೃಹ: ಚಂದ್ರಶೇಖರ ದೇವಸ್ಥಾನದಿಂದ ಪಶ್ಚಿಮಕ್ಕೆ ರಸ್ತೆ ಬದಿಯಲ್ಲಿದ್ದ ಹುಲ್ಲು ಹಾಸಿನ ಮಧ್ಯೆ ಕಾಣುವ ಚೌಕಾಕಾರದ ಕಟ್ಟಡವನ್ನು ರಾಣಿಯರ ಸ್ನಾನಗೃಹ ಎಂದು ಕರೆಯುತ್ತಾರೆ. ಕಟ್ಟಡದ ಸುತ್ತಲೂ ಕಂದಕವಿದ್ದು, ಮಧ್ಯೆ 15ಕಿ.ಮೀ. ಸುತ್ತಳತೆ ಹಾಗೂ 1.8ಮೀ. ಆಳದ ಕೊಳ ಇದೆ. ರಾಣಿಯರ ಸ್ನಾನಗೃಹದಿಂದ ಪಶ್ಚಿಮಕ್ಕೆ ಒಂದು ಫರ್ಲಾಂಗ್ ದೂರದಲ್ಲಿರುವ ರಸ್ತೆಯ ಎಡಕ್ಕೆ ಕಿರಿದಾದ ಇಬ್ಬದಿಗಳಲ್ಲೂ ಕಲ್ಲಿನ ತಟ್ಟೆಗಳನ್ನು ಜೋಡಿಸಲಾಗಿದೆ. 
 
ಹೀಗೆ ಹಂಪೆಯಲ್ಲಿ ಅರಮನೆ ಆವರಣ, ದಣ್ಣಾಯಕನ ಆವರಣ, ರಾಣಿಯರ ಅಂತಃಪುರ ಆನೆಲಾಯ,ನೆಲಮಾಳಿಗೆ ದೇವಾಲಯ, ಬಾಲಕೃಷ್ಣ ದೇವಾಲಯ, ವಿಜಯವಿಠಲ ದೇವಾಲಯಗಳನ್ನು ನೋಡಬಹುದಾಗಿದೆ.
 
ತಲುಪುವ ಮಾರ್ಗ: ಹಂಪೆಗೆ ಬೆಂಗಳೂರಿನಿಂದ 325ಕಿ.ಮೀ., ಹೊಸಪೇಟೆಯಿಂದ ಹಂಪೆಗೆ 13ಕಿ.ಮೀ. ದೂರ. ಇಲ್ಲಿಂದ ಸಾಕಷ್ಟು ಬಸ್‌ಗಳು ಓಡಾಡುತ್ತವೆ. ಇಲ್ಲಿ ಉಳಿದುಕೊಳ್ಳಲು ಪ್ರವಾಸೋದ್ಯಮ ಹೋಟೆಲ್ ಇದೆ.

 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ