ಬಿಲ್ವಪ್ರಿಯ ಪರಶಿವನಿಗೆ ಜಾಗರಣೆ ಪೂಜೆ - ಶಿವರಾತ್ರಿ ಹಬ್ಬದ ವಿಶೇಷ

ಗುರುವಾರ, 9 ಫೆಬ್ರವರಿ 2017 (18:44 IST)
ಮಹಾಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು. ಈ ಹಬ್ಬವನ್ನು ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಫೆಬ್ರುವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಶಿವರಾತ್ರಿ ಹಬ್ಬ ಆಚರಿಸಲಾಗುತ್ತದೆ. 
 
ಇಡೀ ದಿನ ಉಪವಾಸ, ಜಾಗರಣೆಗಳನ್ನು ಮಾಡಿ, ನಾಲ್ಕು ಯಾಮಗಳಲ್ಲೂ ಶಿವ ಪೂಜೆಯನ್ನು ಮಾಡುವ ಮೂಲಕ ಆಚರಿಸಲಾಗುತ್ತದೆ. ಶಿವನಿಗೆ ಬಿಲ್ವ ಪತ್ರೆಗಳನ್ನು ಅರ್ಪಿಸಿ ಪೂಜೆ ಸಲ್ಲಿಸುತ್ತಾರೆ. ಉತ್ತರ ಭಾರತ ಹಾಗೂ ನೇಪಾಳದಲ್ಲಿ ಶಿವನ ಆರಾಧಕರು ಭಂಗ ಮತ್ತು ಲಸ್ಸಿಯನ್ನು ಕುಡಿಯುತ್ತಾರೆ (ಮಹಾರಾಷ್ಟ್ರದಲ್ಲಿ ಇದನ್ನು ಕಡ್ಡಾಯವಾಗಿ ಕುಡಿದು ಹಬ್ಬವನ್ನು ಆಚರಿಸುತ್ತಾರೆ, ಇದು ಅಮಲು ಪದಾರ್ಥವಾಗಿದೆ) ಇದು ಶಿವನಿಗೆ ತುಂಬಾ ಪ್ರೀತಿಯೆಂದು ಹೇಳುತ್ತಾರೆ. ಮಹಾಶಿವರಾತ್ರಿ ಹಬ್ಬದ ಆಚರಣೆ ಕುರಿತಂತೆ ಅನೇಕ ದಂತಕಥೆಗಳನ್ನು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
 
ಸಮುದ್ರ ಮಂಥನ: 
ದೇವತೆಗಳ ಮತ್ತು ರಾಕ್ಷಸರ ಮಧ್ಯೆ ನಡೆದ ಸಮುದ್ರ ಮಂಥನದ ಸಂದರ್ಭದಲ್ಲಿ ಸಮುದ್ರದಿಂದ ಹಾಲಾಹಲ ಹೊರಬಂದು ಸೃಷ್ಟಿಯನ್ನು ಅಲ್ಲೋಲ ಕಲ್ಲೋಲ ಮಾಡುವ ಸಾಧ್ಯತೆಗಳನ್ನು ಕಂಡು ದೇವತೆಗಳು ವಿಷ್ಣುವಿನ ಮೊರೆ ಹೋಗಿ ಇಂತಹ ಭಯಾನಕ ವಿಷದಿಂದ ಪಾರುಮಾಡಲು ಬೇಡಿಕೊಂಡರು. ವಿಷ್ಣು ದೇವತೆಗಳ ಸಂಕಷ್ಟವನ್ನು ಆಲಿಸಿ ಶಿವನನ್ನು ಭೇಟಿಯಾಗುವಂತೆ ಸಲಹೆ ನೀಡಿದರು. ನಂತರ ದೇವತೆಗಳು ಶಿವನ ಬಳಿಗೆ ತೆರಳಿ ತಮ್ಮ ಕಷ್ಟವನ್ನು ಹೇಳಿಕೊಂಡರು. ದೇವತೆಗಳ ಕಷ್ಟವನ್ನು ಅರಿತ ಶಿವ ಹಾಲಾಹಲ ಕುಡಿದು ಅದು ಹೊರಗೆ ಬರದಂತೆ ಹಾವಿನಿಂದ ಸುತ್ತಿಕೊಂಡನೆಂದು ಹೇಳಲಾಗುತ್ತದೆ. ಆದುದರಿಂದ ಶಿವನ ಕಂಠ ನೀಲಿಯಾಗಿರುತ್ತದೆ. (ಶಿವನನ್ನು ನೀಲಕಂಠನೆಂದು ಕರೆಯುತ್ತಾರೆ)
 
ಜಲಪ್ರಳಯ: 
 
ಜಗತ್ತು ಪ್ರಳಯದ ಬಿಕ್ಕಟ್ಟು ಎದುರಿಸುವ ಸಂದರ್ಭದಲ್ಲಿ ಪಾರ್ವತಿ ಜಗತ್ತನ್ನು ಉಳಿಸಲು ಜೀವಂತ ಆತ್ಮಗಳನ್ನು ಪೂಜಿಸಿದ್ದಲ್ಲದೇ ಕಷ್ಟದಿಂದ ಪಾರು ಮಾಡುವಂತೆ ಶಿವನನ್ನು ಬೇಡಿಕೊಂಡಳು. ಪಾರ್ವತಿಯ ಬೇಡಿಕೆಯನ್ನು ಶಿವನು ಪೂರ್ತಿಗೊಳಿಸಿದನು. ಶಿವನು ಪ್ರಳಯದಿಂದ ಜೀವಸಂಕುಲವನ್ನು ಪಾರು ಮಾಡಿದ ರಾತ್ರಿಯನ್ನು ಮಹಾ ಶಿವರಾತ್ರಿ ಎಂದು ಪಾರ್ವತಿ ಹೆಸರಿಟ್ಟಿರುವುದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಪ್ರಳಯದಿಂದ ತಡೆದ ನಂತರ ಪಾರ್ವತಿ ನಿಮಗೆ ಯಾವ ದಿನದ ಪೂಜೆ ಇಷ್ಟವಾಯಿತು ಎಂದು ಕೇಳಿದಾಗ, ಮಾಘ ತಿಂಗಳಿನ 14ರ ರಾತ್ರಿ ನನ್ನ ಇಷ್ಟದ ರಾತ್ರಿಯಾಗಿದ್ದು, ಅದನ್ನು ಶಿವರಾತ್ರಿ ಎಂದು ಕರೆಯಲಾಗುತ್ತದೆ ಎಂದು ಶಿವನು ಹೇಳಿದನು. ಶಿವನು ಹೇಳಿದ ಶಿವರಾತ್ರಿಯ ಬಗ್ಗೆ ಪಾರ್ವತಿ ತನ್ನ ಗೆಳತಿಯರಿಗೆ ಪ್ರಚುರಪಡಿಸಿದಳು. ತನ್ಮೂಲಕ ಶಿವರಾತ್ರಿಯ ಬಗ್ಗೆ ಎಲ್ಲೆಡೆ ಪ್ರಚಾರ ಮಾಡಲಾಯಿತು. 
 
ಬೇಡರ ಕಣ್ಣಪ್ಪ: 
 
ಒಂದು ದಿನ ಕಣ್ಣಪ್ಪನೆಂಬ ಬೇಟೆಗಾರ ಬಿಲ್ವ ಪತ್ರೆ ಮರದ ಮೇಲೆ ಕುಳಿತು, ದಿನವಿಡೀ ಉಪವಾಸವಿದ್ದು, ಅಕಸ್ಮಿಕವಾಗಿ ಶಿವರಾತ್ರಿಯಂದು ಬಿಲ್ವದ ಎಲೆಗಳನ್ನು ಕೆಳಗಿದ್ದ ಶಿವಲಿಂಗಕ್ಕೆ ಹಾಕುತ್ತಿದ್ದನು. ಈ ಮೂಲಕ ಶಿವಪೂಜೆ ನಡೆಸಿದನು. ಆತನ ಭಕ್ತಿಗೆ ಮಾರುಹೋದ ಶಿವನು ಆತನ ಎಲ್ಲ ಪಾಪ ಕರ್ಮಗಳನ್ನು ಕ್ಷಮಿಸಿ ಮುಕ್ತಿ ದೊರಕಿಸಿದನು. ಆದ್ದರಿಂದ ಶಿವನ ಪೂಜೆಯಲ್ಲಿ ಬಿಲ್ವಪತ್ರೆ ಪ್ರಮುಖ ಪಾತ್ರವಹಿಸುತ್ತದೆ ಎಂದು ಶಿವಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.
 
ಒಂದಾನೊಂದು ಕಾಲದಲ್ಲಿ ಇಕ್ಷ್ವಾಕು ರಾಜವಂಶದ ರಾಜ ಚಿತ್ರಭಾನು ಜಂಬೂದ್ವೀಪವನ್ನು ಆಳುತ್ತಿದ್ದನು. ಶಿವರಾತ್ರಿ ನಿಮಿತ್ತ ರಾಜನು ಪತ್ನಿ ಸಮೇತನಾಗಿ ಉಪವಾಸವನ್ನು ಆಚರಿಸಿದ್ದನು. ರಾಜನನ್ನು ಭೇಟಿಯಾಗಲು ಋಷಿಗಳಾದ ಅಷ್ಟಾವಕ್ರ ರಾಜಧಾನಿಗೆ ಆಗಮಿಸಿದರು.
 
ಋಷಿಗಳು ರಾಜ ಉಪವಾಸವಿರುವುದಕ್ಕೆ ಕಾರಣಗಳೇನು ಎಂದು ಪ್ರಶ್ನಿಸಿದರು. ಆಗ ರಾಜನು ನನಗೆ ಹಿಂದಿನ ಜನ್ಮದ ಬಗ್ಗೆ ತುಂಬಾ ವಿವರವಾಗಿ ನೆನಪಿದೆ ಎಂದು ಹೇಳಿದರು.
 
ರಾಜಾ ಚಿತ್ರಭಾನು ತನ್ನ ಹಿಂದಿನ ಜನ್ಮದ ವೃತ್ತಾಂತ ಕುರಿತಂತೆ ವಿವರವಾಗಿ ಋಷಿಗಳಿಗೆ ತಿಳಿಸಲು ಆರಂಭಿಸಿದನು. ಹಿಂದಿನ ಜನ್ಮದಲ್ಲಿ ವಾರಾಣಸಿಯಲ್ಲಿ ಬೇಟೆಗಾರನಾಗಿದ್ದೆ. ನನ್ನ ಹೆಸರು ಸುಸ್ವರ ಎಂದಾಗಿತ್ತು. ನನ್ನದು ಬೇಟೆಗಾರನ ವೃತ್ತಿಯಾಗಿತ್ತು. ಪಶುಪಕ್ಷಿಗಳನ್ನು ಬೇಟೆಯಾಡಿ ಅವುಗಳನ್ನು ಮಾರುವುದೆ ನನ್ನ ಕಸುಬಾಗಿತ್ತು. ಒಂದು ದಿನ ಅರಣ್ಯದಲ್ಲಿ ಬೇಟೆಗಾಗಿ ಹುಡುಕುತ್ತಿರುವಾಗ ರಾತ್ರಿಯವರೆಗೂ ಯಾವುದೇ ಪಶು-ಪಕ್ಷಿಗಳು ದೊರೆಯದೆ ಘೋರಾರಣ್ಯದೊಳಗೆ ರಾತ್ರಿಯನ್ನು ಕಳೆಯಬೇಕಾಗಿ ಬಂತು. ಬಿಲ್ವ ಪತ್ರೆಯ ಮರವನ್ನು ಹತ್ತಿ ರಾತ್ರಿಯನ್ನು ಕಳೆಯಲು ನಿರ್ಧರಿಸಿದೆ. ಅಂದು ಜಿಂಕೆ ಎದುರಿಗೆ ಬಂದರೂ ಜಿಂಕೆಯ ದುಃಖಿತ ಪರಿವಾರವನ್ನು ನೋಡಿ ಹತ್ಯೆ ಮಾಡಲು ಮನಸ್ಸಾಗಲಿಲ್ಲ. ಹಸಿವು ನೀರಡಿಕೆಯಿಂದ ಬಳಲಿದ್ದರಿಂದ ರಾತ್ರಿಯಿಡಿ ನಿದ್ರೆ ಬಾರದೆ ಜಾಗರಣೆ ಮಾಡಿದೆ. ಮನೆಯಲ್ಲಿ ಪತ್ನಿ ಮತ್ತು ಮಕ್ಕಳು ಹಸಿವಿನಿಂದ ಬಳಲಿ ತನ್ನ ಆಗಮನವನ್ನು ನೆನೆದು ಕಣ್ಣೀರು ಸುರಿಸುತ್ತಾ ಇರುವುದನ್ನು ಜ್ಞಾಪಿಸಿಕೊಂಡು, ತಾನೂ ಕಣ್ಣೀರುಗೆರೆಯುತ್ತಾ ನಿದ್ರೆ ಬಾರದೆ ಬಿಲ್ವಪತ್ರೆಗಳನ್ನು ಒಂದೊಂದಾಗಿ ಗಿಡದಿಂದ ಕೆಳಗೆ ಹಾಕುತ್ತಾ ರಾತ್ರಿಯನ್ನು ಕಳೆದಿರುವುದಾಗಿ ತಿಳಿಸಿದನು.
 
ಮರುದಿನ ಒಂದಷ್ಟು ಅಹಾರವನ್ನು ತನ್ನ ಕುಟುಂಬಕ್ಕಾಗಿ ತಗೆದುಕೊಂಡು ಹೋಗಿದ್ದು, ಊಟ ಮಾಡಲು ಕುಳಿತಿರುವಾಗ ಅಪರಿಚಿತನೊಬ್ಬನು ಹಸಿವಿನಿಂದ ಬಳಲಿದ್ದು, ಅಹಾರವನ್ನು ನೀಡುವಂತೆ ಬೇಡಿದನು. ತಾನು ತಂದ ಅಹಾರದಲ್ಲಿ ಸಮನಾಗಿ ಅಪರಿಚಿತನಿಗೆ ಮೊದಲು ಹಂಚಿ ನಂತರ ಉಳಿದ ಅಹಾರವನ್ನು ಸೇವಿಸಿದ್ದೆವು ಎಂದು ಆತ ವಿವರಿಸಿದ.
 
ಸುಸ್ವರನು ಸತ್ತಾಗ ಶಿವನು ಕಳುಹಿಸಿದ ಇಬ್ಬರು ಸಂದೇಶಕಾರರನ್ನು ನೋಡಿದನು. ಸುಸ್ವರನ ಆತ್ಮವನ್ನು ಶಿವನ ಬಳಿಗೆ ಕರೆದೊಯ್ಯಲು ಸಂದೇಶಕಾರರು ಬಂದಿದ್ದರು. ಅಂದು ರಾತ್ರಿ ತನಗರಿವಿಲ್ಲದಂತೆ ಶಿವಪೂಜೆಯ ಕಾರ್ಯ ನೇರವೇರಿರುವುದು ಗಮನಕ್ಕೆ ಬಂತು. ಸಂದೇಶಕಾರರು ಬೇಟೆಗಾರ ಸುಸ್ವರನಿಗೆ ಹೇಳಿದರು- "ಅಂದು ರಾತ್ರಿ ನೀನು ಅರಿವಿಲ್ಲದೇ ಬಿಲ್ವಪತ್ರೆ ಮರದ ಮೇಲೆ ಹತ್ತಿ, ಕೆಳಗೆ ಹಾಕಿದ ಬಿಲ್ವಪತ್ರೆಗಳು ಮರದ ಅಡಿಯಲ್ಲಿದ್ದ ಶಿವಲಿಂಗದ ಅರ್ಚನೆಗೈದಿದ್ದು, ನೀನು ಹಾಕಿದ ಕಣ್ಣೀರು ಲಿಂಗವನ್ನು ಶುದ್ದಿಗೊಳಿಸಿದೆ. ಅಂದೇ ನೀನು ಉಪವಾಸ ವ್ರತ ಆಚರಿಸಿದ್ದರಿಂದ ಶಿವನು ಪ್ರಸನ್ನರಾಗಿ ತಮ್ಮನ್ನು ಕಳುಹಿಸಿದ್ದಾರೆ" ಎಂದು ಹೇಳಿದರು. 
 
ರಾಜಾ ಚಿತ್ರಭಾನು ಅಷ್ಟಾವಕ್ರ ಋಷಿಗಳಿಗೆ ತನ್ನ ಹಿಂದಿನ ಜನ್ಮದ ವೃತ್ತಾಂತವನ್ನು ಹೇಳಿ, ಶಿವನ ಸ್ಮರಣೆಯಿಂದ ನಾನು ರಾಜನಾಗಿ ಜನ್ಮತಾಳಿದ್ದೇನೆ ಎಂದು ವಿವರಿಸಿದನು.
 
ಹೀಗೆ, ಶಿವಪೂಜೆಗೆ ಬಿಲ್ವಪತ್ರೆ ಅತ್ಯಂತ ಮಹತ್ವದ್ದೆಂದು ಭಾವಿಸಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ