ಧಾರಾವಾಹಿಗಳಲ್ಲಿ ಬಾಲ 'ಕಾರ್ಮಿಕ'ರು: ಸರಕಾರ ಕ್ರಮ

ಗುರುವಾರ, 11 ಜೂನ್ 2009 (20:27 IST)
ಧಾರಾವಾಹಿಗಳಲ್ಲಿ ನಟಿಸಲು ಮಕ್ಕಳನ್ನು ಕಳುಹಿಸುವ ಪೋಷಕರಿಗೆ ಇದು ಎಚ್ಚರಿಕೆಯ ಕರೆಗಂಟೆ. ಜೈ ಶ್ರೀಕೃಷ್ಣ, ಬಾಲಿಕಾ ವಧು ಮುಂತಾದ ಟೆಲಿ ಧಾರಾವಾಹಿಗಳಲ್ಲಿ ಮಕ್ಕಳನ್ನು ದುಡಿಸಿಕೊಂಡ ಚಿತ್ರ ನಿರ್ಮಾಪಕರ ಮೇಲೆ ಕ್ರಮ ಕೈಗೊಳ್ಳಲು ಮಹಾರಾಷ್ಟ್ರ ಸರಕಾರ ನಿರ್ಣಯ ಕೈಗೊಂಡಿದೆ.

ಬಾಲ ಕಾರ್ಮಿಕ ಕಾಯ್ದೆಯ ಅನುಸಾರ ಕಳೆದ ಡಿಸೆಂಬರ್ ತಿಂಗಳಲ್ಲಿ ಕಾರ್ಮಿಕ ಸಚಿವಾಲಯವು ಈ ಧಾರಾವಾಹಿಗಳ ನಿರ್ಮಾಪಕರಿಗೆ ಶೋಕಾಸ್ ನೋಟೀಸ್ ಜಾರಿಗೊಳಿಸಿ, ಈ ಬಾಲ ಕಾರ್ಮಿಕರ (ನಟರ) ದುಡಿತದ ಅವಧಿ ಮತ್ತು ಪರಿಸ್ಥಿತಿಯ ಬಗ್ಗೆ ತಿಳಿಸುವಂತೆ ಕೋರಿತ್ತು. ಆದರೆ ಯಾವುದೇ ಉತ್ತರ ದೊರೆತಿರಲಿಲ್ಲ.

ಸುದ್ದಿಗಾರರಿಗೆ ಗುರುವಾರ ಈ ವಿಷಯ ತಿಳಿಸಿದ ಕಾರ್ಮಿಕ ಸಚಿವ ನವಾಬ್ ಮಲಿಕ್, ಒಂದೆರಡು ದಿನಗಳಲ್ಲೇ ಈ ಧಾರಾವಾಹಿ ನಿರ್ಮಾಪಕರ ವಿರುದ್ಧ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದಾವೆ ಹೂಡಲಾಗುತ್ತದೆ ಎಂದಿದ್ದಾರೆ.

ಮಹಾರಾಷ್ಟ್ರ ಸರಕಾರದ ಕೆಂಗಣ್ಣಿಗೆ ಗುರಿಯಾಗಿರುವವರಲ್ಲಿ ಜನಪ್ರಿಯ ಧಾರಾವಾಹಿಗಳಾದ ಜೈ ಶ್ರೀಕೃಷ್ಣ, ಉತ್ತಾರಣ್, ಬಾಲಿಕಾ ವಧು, ಛೋಟೇ ಮಿಂಯಾ, ಚಕ್ ದೇ ಬಚ್ಚೇ, ಛೋಟೇ ಪ್ಯಾಕೆಟ್ ಬಡಾ ಧಮಾಕಾ ಮತ್ತು ಮಾಯ್ಕಾ ಸೀರಿಯಲ್‌ಗಳ ನಿರ್ಮಾಪಕರು ಸೇರಿದ್ದಾರೆ.

ವೆಬ್ದುನಿಯಾವನ್ನು ಓದಿ