ಇನ್ನೂ ಚೆನ್ನಾಗಿ ಮಾಡ್ತೀನಿ ಎಂದರೆ ತಪ್ಪಾ? ನಿರ್ಮಾಪಕರ ಆರೋಪಗಳಿಗೆ ಅನಿರುದ್ಧ್ ಪ್ರತಿಕ್ರಿಯೆ

ಶನಿವಾರ, 20 ಆಗಸ್ಟ್ 2022 (17:01 IST)
ಬೆಂಗಳೂರು: ನಿರ್ಮಾಪಕ, ನಿರ್ದೇಶಕ ಆರೂರು ಜಗದೀಶ್ ಅವರ ಆರೋಪಗಳಿಗೆ ನಟ ಅನಿರುದ್ಧ್ ಜತ್ಕಾರ್ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ್ದಾರೆ.

ವೈಯಕ್ತಿಕವಾಗಿ ನನಗೆ ಜೊತೆ ಜೊತೆಯಲಿ ಧಾರವಾಹಿ ತುಂಬಾ ಕೊಟ್ಟಿದೆ. ಜೊತೆ ಜೊತೆಯಲಿ ನನ್ನಿಂದ ಅಂತ ನಾನು ಯಾವತ್ತೂ ಭಾವಿಸಿಲ್ಲ. ನನ್ನಲ್ಲಿ ದುರಹಂಕಾರ ಇದ್ದಿದ್ದರೆ ನನ್ನ ಅಭಿನಯದಲ್ಲೂ ಕಾಣ್ತಿತ್ತು. ನನ್ನನ್ನು ಅನೇಕರು ಹತ್ತಿರದಿಂದ ನೋಡಿದ್ದರೆ ಈ ಮಾತನ್ನು ಒಪ್ಪಲು ಸಾಧ್ಯವಿಲ್ಲ. ಈ ಪಾತ್ರಕ್ಕೋಸ್ಕರ ನಾನು ತೂಕ ಕಡಿಮೆ ಮಾಡಿದ್ದೆ. ಇದಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದೇನೆ.

ನಾನು ಕ್ಯಾರಾವ್ಯಾನ್ ಇಲ್ಲದೇ ಶೂಟಿಂಗ್ ಮಾಡ್ತಿರಲಿಲ್ಲ ಅಂತಾರೆ. ನಾನು ಮಧ್ಯಮ ವರ್ಗದಿಂದ ಬಂದವನು, ರಂಗಭೂಮಿಯಿಂದ ಬಂದವನು. ಹಾಗಿದ್ದರೂ ನಾನು ಕ್ಯಾರಾವ್ಯಾನ್ ಡಿಮ್ಯಾಂಡ್ ಮಾಡಲ್ಲ ಅಂತ ಸಹಕಲಾವಿದರೊಬ್ಬರೇ ಹೇಳಿದ್ದು ಇದೆ. ಆಸುಪಾಸು ಮನೆ ಇಲ್ಲದೇ ಇದ್ದಾಗ ಕ್ಯಾರಾವ್ಯಾನ್ ಬೇಕು ಎಂದು ಕೇಳಿದ್ದೆ. ನಾನು ಹೊರಗಡೆ ಮಾಡಬಹುದು. ಆದರೆ ಹೆಣ್ಣು ಮಕ್ಕಳು ಏನು ಮಾಡಬೇಕು? ಹಾಗಾಗಿ ಕ್ಯಾರಾವ್ಯಾನ್ ಬೇಕು ಅಂತ ಡಿಮ್ಯಾಂಡ್ ಮಾಡಿದ್ದೆ. ಇದರಿಂದಾಗಿ ಬೇರೆ ಕಲಾವಿದರಿಗೂ ಅನುಕೂಲವಾಯ್ತು.

ನಾನು ಸ್ಟಾರ್ ಹೋಟೆಲ್ ಊಟ ಬೇಕು ಎಂದು ಡಿಮ್ಯಾಂಡ್ ಮಾಡಿದ್ದೆ ಎಂದಿದ್ದರು. ಆದರೆ ನಾನು ಈವತ್ತೂ ಬೆಂಗಳೂರಿನಲ್ಲಿ ಶೂಟಿಂಗ್ ಮಾಡುವಾಗ ನಮ್ಮ ತಾಯಿಯೇ ನನಗೆ ಊಟ, ತಿಂಡಿ, ಹಣ್ಣು, ಟೀ, ನೀರು ಸಹಿತ ಪ್ಯಾಕ್ ಮಾಡಿಕೊಡ್ತಾರೆ. ಇವತ್ತಿನವರೆಗೆ ನಾನು ಒಂದು ಹನಿ ನೀರೂ ನಾನು ಪ್ರೊಡಕ್ಷನ್ ಕಡೆಯಿಂದ ತೆಗೆದುಕೊಂಡಿಲ್ಲ.

ಸಂಭಾವನೆ ವಿಚಾರವಾಗಿ ಅವರು ಆಪಾದನೆ ಮಾಡಿದ್ದಕ್ಕೆ ಅವರ ಮಕ್ಕಳ ಮೇಲೆ ಆಣೆ ಮಾಡಿ ಹೇಳಿ ನಾನು ಮೊದಲೇ ಹೇಳಿದ್ದೆ ನೀವು ಎಷ್ಟು ಹೇಳಿದ್ದೀರೋ ಅಷ್ಟು ಕೊಟ್ಟರೆ ಮಾತ್ರ ನಾನು ಮಾಡ್ತೀನಿ ಎಂದು ಹೇಳಿದ್ದೆ. ಅದನ್ನು ಖಚಿತಪಡಿಸಿಕೊಂಡೇ ಶೂಟಿಂಗ್ ಗೆ ಬಂದಿದ್ದೆ.

ಶುರುವಿನಲ್ಲಿ ನಾನು ಮಾನಿಟರ್ ನೋಡ್ತಿದ್ದುದು ನಿಜ. ಅವರೇ ನನಗೆ ಮಾನಿಟರ್ ನೋಡಿ ಇನ್ನಷ್ಟು ಚೆನ್ನಾಗಿ ಮಾಡಿ ಎಂದಿದ್ದೂ ಇದೆ. ಆದರೆ ನಂತರ ನನಗೆ ಮಾನಿಟರ್ ತೋರಿಸ್ತಿರಲಿಲ್ಲ. ನಾನೂ ಸರಿ ಅಂತ ಮುಂದೆ ಹೋದೆ. ನನ್ನ ಸೀನ್ ಚೆನ್ನಾಗಿ ಆಗಬೇಕು ಎಂದು ಬಯಸೋದೇ ತಪ್ಪಾ?

ನನ್ನಿಂದಾಗಿ ಯಾರನ್ನು ಕೆಲಸದಿಂದ ಕಿತ್ತು ಹಾಕಿದ್ದಾರೆ ಎಂದು ಹೇಳಲಿ. ಈ ಹಿಂದೆ ಹೀರೋಯಿನ್ ಮೇಘಾ ಶೆಟ್ಟಿ ಅವರನ್ನು ತೆಗೆದು ಹಾಕಲು ಹೊರಟಾಗಲೂ ನಾನೇ ಮಾತನಾಡಿ ಹಾಗೆ ಮಾಡಬೇಡಿ ಎಂದಿದ್ದೆ. ಇನ್ನೊಂದಿಬ್ಬರು ಕಲಾವಿದರನ್ನು ತೆಗೆದು ಹಾಕುವಾಗಲೂ ನಾನೇ ಹೇಳಿದ್ದೆ.

ನಾನು ಈಗಲೂ ಜೊತೆ ಜೊತೆಯಲಿ ನನ್ನ ಕುಟುಂಬ ಎಂದೇ ಅಂದುಕೊಂಡಿದ್ದೇನೆ. ನನ್ನ ಮನೆಯಲ್ಲಿ ನನ್ನ ಮಕ್ಕಳು ಸಹಿತ ಬೇಡ, ಇನ್ಮುಂದೆ ಈ ಸೀರಿಯಲ್ ಬೇಡ ಅಂತಿದ್ದಾರೆ. ಆದರೆ ನನಗೆ ಪ್ರೇಕ್ಷಕರೊಂದಿಗೆ ಕಮಿಟ್ ಮೆಂಟ್ ಇದೆಯಲ್ಲಾ? ಹೀಗಾಗಿ ಮತ್ತೆ ಕರೆದರೆ ನನ್ನ ಪಾಲಿನ ಶೂಟಿಂಗ್ ಕಷ್ಟವಾದರೂ ಮಾಡಿ ಮುಗಿಸಿಕೊಡುತ್ತೇನೆ ಎಂದಿದ್ದಾರೆ ಅನಿರುದ್ಧ್.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ