ಮೊಬೈಲ್ ಕಳೆದುಕೊಂಡ ಬೇಸರದಲ್ಲಿ ಕಳ್ಳರಿಗೆ ಕೈ ಮುಗಿದು ಮನವಿ ಮಾಡಿದ ‘ಜೊತೆ ಜೊತೆಯಲಿ’ ನಟ

ಸೋಮವಾರ, 21 ಡಿಸೆಂಬರ್ 2020 (10:39 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜೊತೆ ಜೊತೆಯಲಿ ಧಾರವಾಹಿಯಲ್ಲಿ ಸುಬ್ಬು ಸಿರಿಮನೆ ಪಾತ್ರ ಮಾಡುತ್ತಿರುವ ನಟ ಶಿವಾಜಿ ರಾವ್ ಜಾಧವ್ ತಮ್ಮ ಮೊಬೈಲ್ ಕಳ್ಳತನವಾದ ಬಗ್ಗೆ ಬೇಸರ ಹಂಚಿಕೊಂಡಿದ್ದಾರೆ.


ತಮ್ಮ ಮೊಬೈಲ್ ಕಳ್ಳತನವಾದ ಬಗ್ಗೆ ಫೇಸ್ ಬುಕ್ ವಿಡಿಯೋದಲ್ಲಿ ಅಳಲು ತೋಡಿಕೊಂಡಿರುವ ಸುಬ್ಬ ಸಿರಮನೆ, ಕಳ್ಳರಿಗೆ ಕೈ ಮುಗಿದು ಮನವಿ ಮಾಡಿದ್ದಾರೆ. ಈ ಬಗ್ಗೆ ಅವರು ಹೇಳಿಕೊಂಡಿದ್ದು ಹೀಗೆ. ‘ಮೊನ್ನೆ ರಾತ್ರಿ ಶೂಟಿಂಗ್ ಮುಗಿಸಿ ಮನೆಗೆ ಹೋಗುವಾಗ ರಾತ್ರಿ 9 ಗಂಟೆಯಾಗಿತ್ತು. ಅಲ್ಲಿಂದ ಮನೆಗೆ ದೂರ. ಹೀಗಾಗಿ ಓಲಾ ಕ್ಯಾಬ್ ಬುಕ್ ಮಾಡಿ ಕೈಯಲ್ಲಿ ಮೊಬೈಲ್ ಹಿಡಿದು ನಿಂತಿದ್ದೆ. ಇನ್ನೇನು ಕಾರು ಹತ್ತಿರದಲ್ಲೇ ಇತ್ತು. ಆಗ ಒಬ್ಬ ಮಹಿಳೆ ಹತ್ತಿರ ಬಂದು ಸಾರ್ ನೀವು ತುಂಬಾ ಚೆನ್ನಾಗಿ ಆಕ್ಟ್ ಮಾಡ್ತೀರಿ ಎಂದೆಲ್ಲಾ ಮಾತನಾಡುತ್ತಿದ್ದಳು. ಇದೇ ವೇಳೆ ಇನ್ನೊಬ್ಬ ಯುವಕ ನಿಧಾನವಾಗಿ ನಡೆದು ಬಂದು ನನ್ನ ಕೈಯಲ್ಲಿದ್ದ ಮೊಬೈಲ್ ಕಸಿದು ಪರಾರಿಯಾದ. ನಾನು ಏನು ಮಾಡಲಿ ಹೇಳಿ? ನನ್ನ ಹೆಂಡತಿಯ ನಂಬರ್ ಕೂಡಾ ನನಗೆ ನೆನಪಿರಲಿಲ್ಲ. ಮೊಮ್ಮಗಳಿಗೆ ಫೋನ್ ಮಾಡ್ತೇನೆ ಎಂದು ಪ್ರಾಮಿಸ್ ಮಾಡಿದ್ದೆ. ಅದೂ ಆಗಲಿಲ್ಲ. ನಂಗೆ ತುಂಬಾ ಬೇಸರವಾಯ್ತು. ಮೊಬೈಲ್ ಇಲ್ಲದೇ ಟ್ಯಾಕ್ಸಿ ಬುಕ್ ಮಾಡುವುದು ಹೇಗೆ? ಮನೆಗೆ ಹೋಗುವುದು ಹೇಗೆ ಹೇಳಿ? ನಾನು ಕಳ್ಳರಿಗೆ ಮನವಿ ಮಾಡುತ್ತೇನೆ, ಬೇಕಿಂದ್ರೆ ಭಿಕ್ಷೆ ಬೇಡಿ. ಕಲಾವಿದರ ಮೊಬೈಲ್ ನ್ನೇ ಕಸೀತಿರಲ್ಲಾ? ನಮ್ಮ ಜೀವನದ ಭಾಗವೇ ಆಗಿರುವ ಮೊಬೈಲ್ ಕಸಿದುಕೊಂಡು ಹೋದ್ರೆ ನಾವು ಏನು ಮಾಡಬೇಕು ಹೇಳಿ? ಬಸವನಗುಡಿ, ಗಾಂಧಿಬಜಾರ್ ಮುಂತಾದೆಡೆಗೆ ಮೊಬೈಲ್ ಕಳ್ಳರ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ನಾನು ಮಾತ್ರವಲ್ಲ, ಹಲವರು ದೂರುತ್ತಿದ್ದಾರೆ. ಹೀಗಾಗಿ ಇಲ್ಲಿನ ವ್ಯಾಪ್ತಿಯಲ್ಲಿ ಬರುವ ಪೊಲೀಸರು ದಯವಿಟ್ಟು ಇಂತಹ ಮೊಬೈಲ್ ಕಳ್ಳರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಬೇಸರದಿಂದಲೇ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ