ರವಿಚಂದ್ರನ್ ವಿರುದ್ಧ ಮತ್ತೆ ತೊಡೆ ತಟ್ಟಿದ ಗಂಡುಗಲಿ!

PR
ಕನಸುಗಾರ ವಿ. ರವಿಚಂದ್ರನ್ ಅವರನ್ನು ನಿರ್ಮಾಪಕ ಗಂಡುಗಲಿ ಮಂಜು ಒಂದು ಕಡೆಯಿಂದ ಹೊಗಳುತ್ತಲೇ ಟೀಕಿಸುತ್ತಿದ್ದಾರೆ. ಒಂದು ಕಡೆಯಿಂದ ಚಿವುಟುತ್ತಾ, ಇನ್ನೊಂದು ಕಡೆ ತೊಟ್ಟಿಲಲ್ಲಿಟ್ಟು ತೂಗುವ ಯತ್ನದಲ್ಲಿದ್ದಾರೆ. ಸದ್ಯಕ್ಕೆ ಈ ವಿವಾದ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ರವಿಚಂದ್ರನ್ ಬಗ್ಗೆ ಹೀಗೆ ದೂರುತ್ತಿರುವುದು ನಾನೇನು ಮೊದಲಲ್ಲ. ಈ ಹಿಂದೆ ಹಲವರು ಇದೇ ರೀತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೇಕಿದ್ದರೆ ನಾರಿಯ ಸೀರೆ ಕದ್ದ, ಮಲ್ಲಿಕಾರ್ಜುನ ಮುಂತಾದ ಚಿತ್ರಗಳ ನಿರ್ಮಾಪಕರನ್ನೇ ಕೇಳಿ ನೋಡಿ. ಇದಕ್ಕಿಂತ ಹೆಚ್ಚು ನಾನೇನೂ ಹೇಳಿಲ್ಲ. ಹೇಳುವುದೂ ಇಲ್ಲ. ಅವರು ದೊಡ್ಡವರು ಅಂತ ಹೇಳಿದ್ದಾರೆ ಮಂಜು.

ತನ್ನ ಆರೋಪಕ್ಕೆ ರವಿಚಂದ್ರನ್ ತಿರುಗೇಟು ನೀಡಿರುವುದಕ್ಕೆ ನೇರವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದರೂ, ಒಂದು ಹಂತದಲ್ಲಿ ತೀಕ್ಷ್ಣವಾದ ಟೀಕೆ ಅವರಿಂದ ಬಂತು. ನಾನೊಬ್ಬ ಹಿರಿಯ ನಿರ್ಮಾಪಕ. ರವಿಚಂದ್ರನ್ ಹಿರಿಯ ನಟ, ನಿರ್ಮಾಪಕ ಮತ್ತು ತಂತ್ರಜ್ಞ. ಇದೆಲ್ಲ ಗೊತ್ತಿದ್ದೇ ರವಿಚಂದ್ರನ್ 'ಕಳ್ಳ ಮಳ್ಳ ಸುಳ್ಳ'ದ ಪ್ರಚಾರದಲ್ಲಿ ಭಾಗವಹಿಸಬೇಕಿತ್ತು ಅಂತ ನೇರವಾಗಿ ಹೇಳಿದ್ದೆ. ಇದರಲ್ಲೇನು ತಪ್ಪಿದೆ? ನಾನೇನೂ ಆರೋಪಗಳನ್ನು ಮಾಡಿಲ್ಲ ಎಂದರು.

ಪ್ರಚಾರಕ್ಕೆ ಕರೆಯುವಾಗ ಮುಂಚಿತವಾಗಿ ತಿಳಿಸಬೇಕೇ ಹೊರತು, ಅರ್ಧಗಂಟೆಗೆ ಮೊದಲು ಕರೆ ಮಾಡುವುದಲ್ಲ. ಮಂಜು ಮೊದಲೇ ಹೇಳಿರುತ್ತಿದ್ದರೆ ಪತ್ರಿಕಾಗೋಷ್ಠಿಗೆ ಬರುತ್ತಿದ್ದೆ ಎಂದು ರವಿಚಂದ್ರನ್ ಹೇಳಿದ್ದರು.

ಆದರೆ ಇದನ್ನು ತಳ್ಳಿ ಹಾಕಿರುವ ಮಂಜು, ಪ್ರಚಾರಕ್ಕೆ ಬರಬೇಕೆಂದು ಮುಂಚೆಯೇ ಹೇಳಿದ್ದೆ. ಒಂದು ದಿನದ ಮಟ್ಟಿಗೆ ಕಾರ್ಯಕ್ರಮ ಮುಂದೂಡುವಂತೆ ಅವರೇ ಕೇಳಿಕೊಂಡಿದ್ದರು. ಆದರೂ ಕೊಟ್ಟ ಮಾತಿನಂತೆ ಬರದಿರುವುದು ನೋವು ತಂದಿದೆ. ಇದು ನಡೆದಿರುವ ಸಂಗತಿ ಅನ್ನೋದು ಮಂಜು ಪ್ರತಿವಾದ.

ಇಷ್ಟೆಲ್ಲ ಮಾತನಾಡಿದರೂ, ಗಂಡುಗಲಿ ಮಂಜು ಅವರಿಗೆ ರವಿಚಂದ್ರನ್ ಮೇಲೆ ಕೋಪವಿಲ್ಲವಂತೆ. ತನ್ನ ಮುಂದಿನ ಸಿನಿಮಾಗಳಲ್ಲಿ ಖಂಡಿತಾ ಅವರನ್ನು ಹಾಕಿಕೊಳ್ಳುತ್ತಾರೆ. ಅವರೀಗ ಬಯಸುತ್ತಿರುವುದು, ಇನ್ನೊಬ್ಬ ನಿರ್ಮಾಪಕನ ಸಮಸ್ಯೆಯನ್ನು ರವಿಚಂದ್ರನ್ ಹೇಗೆ ಅರ್ಥ ಮಾಡಿಕೊಂಡಿದ್ದಾರೆ ಎಂಬುದರ ಕುರಿತ ವಿವರಣೆ.

ರವಿಚಂದ್ರನ್ ಪ್ರಚಾರಕ್ಕೆ ಬರುತ್ತಿದ್ದರೆ ಸಿನಿಮಾದ ಕಥೆ ಬೇರೆಯೇ ಇರುತ್ತಿತ್ತು. ಆದರೂ ಸೋತಿಲ್ಲ. ಕಳ್ಳ ಮಳ್ಳ ಸುಳ್ಳ ಲಾಭ ತಂದಿದೆ. ಇಡೀ ಚಿತ್ರತಂಡವನ್ನು ರಾಜ್ಯ ಸುತ್ತಿಸಬೇಕೆಂದಿದ್ದೆ. ಪತ್ರಿಕಾಗೋಷ್ಠಿಗೇ ಬರದೇ ಇರುವ ರವಿಚಂದ್ರನ್, ಅದಕ್ಕೆ ಬರುತ್ತಾರೆಯೇ? ಪ್ರಚಾರ ಕಾರ್ಯಕ್ಕೆ ನಾನು ಹೇಗೆ ಯೋಜನೆ ಸಿದ್ಧಪಡಿಸಲಿ ಎಂದು ತನ್ನ ಅಳಲು ತೋಡಿಕೊಂಡಿದ್ದಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ