ಕನ್ನಡ ಸಿನಿಮಾ ಚೆನ್ನಾಗಿದ್ರೂ ಯಶಸ್ವಿಯಾಗುವುದು ಕಷ್ಟ. ಅಂಥದರಲ್ಲಿ ನನಗೆ ಅವಕಾಶಗಳ ಮೇಲೆ ಅವಕಾಶ ಸಿಗುತ್ತಿರುವುದು, ನಟಿಸಿದ ಚಿತ್ರಗಳೆಲ್ಲವೂ ಒಂದರ ಮೇಲೊಂದರಂತೆ ಹಿಟ್ ಆಗುತ್ತಿರುವುದರಿಂದ ತುಂಬಾ ಖುಷಿಯಾಗುತ್ತಿದೆ ಎಂದು ಕನ್ನಡದಲ್ಲೇ ಹೇಳಿದ್ದಾರೆ ಲಕ್ಕಿ ಸ್ಟಾರ್ ರಮ್ಯಾ.
ಸಿದ್ಲಿಂಗು ಚಿತ್ರದಲ್ಲಿ ಟೀಚರ್ ಪಾತ್ರ ನಿರ್ವಹಿಸಿತ್ತಿರುವ ರಮ್ಯಾ ಬಾಯಲ್ಲಿ ಬರೋದೆಲ್ಲಾ ಪೋಲಿ ಹುಡುಗಿಯರು ಹೊಡೆಯೊ ದ್ವಂದ್ವಾರ್ಥದ ಕಡ್ಲೆಕಾಯಿ ಡೈಲಾಗ್ಗಳು. ಅಲ್ಲದೆ ಚಿತ್ರದಲ್ಲಿ ಅಂಥಾ ಅರ್ಥಗಳನ್ನೇ ಸೂಚಿಸುವ ಡೈಲಾಗ್ಗಳನ್ನು ಹಾಕಿ ಪ್ರೇಕ್ಷಕರನ್ನು ಮುಸಿ ಮುಸಿ ನಗುವಂತಾ ಪ್ರಯತ್ನಕ್ಕೆ ಕೈಹಾಕಿದ್ದಾರೆ ಸಿದ್ಲಿಂಗು ನಿರ್ದೇಶಕ ವಿಜಯ ಪ್ರಸಾದ್.
ಅದಕ್ಕೆ ಸರಿಹೊಂದುವ ನಟ ಲೂಸ್ ಮಾದ ಯೋಗೇಶ್. ಇಲ್ಲಿ ಪಾತ್ರಕ್ಕೂ ಡೈಲಾಗ್ಗೂ ಸಂಬಂಧವಿಲ್ಲದಿರುವುದು ಟೀಚರ್ ರಮ್ಯಾ ಅವರದು ಎಂಬುದು ಚರ್ಚಾ ವಿಷಯ. ಹಾಗಾಗಿ ಈ ಕುರಿತು ಅವರೇ ಮಾತು ಆರಂಭಿಸಿ ಅದೇನು ದ್ವಂದ್ವಾರ್ಥದ ಡೈಲಾಗ್ಗಳಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಎಲ್ಲಾ ಚಿತ್ರಗಳಲ್ಲೂ ವಿಭಿನ್ನ ಪಾತ್ರಗಳು ಇರಬೇಕೆಂದು ಬಯಸುವವಳು ನಾನು. ಇದುವರೆಗೂ ಮಾಡದ ಪಾತ್ರ ಇದಾಗಿರುವುದರಿಂದ ಇಂತಹಾ ಅವಕಾಶವನ್ನು ಖುಷಿಯಿಂದಲೇ ಒಪ್ಪಿಕೊಂಡಿದ್ದೇನೆ ಅಷ್ಟೆ ಎಂದು ಮಾತಿಗೆ ಫುಲ್ಸ್ಟಾಪ್ ಹಾಕಿದ್ದಾರೆ.
ರಾಜಕೀಯ ಕಾರ್ಯಗಳು ಹೇಗೆ ನಡೀತಿದೆ ಎಂದು ಕೇಳೋಣ ಅಂದ್ರೆ, ತುಂಬಾ ಬ್ಯುಸಿ ಇರೋ ರೀತಿಯಲ್ಲಿ ಹೋಗ್ಬಿಟ್ರು!