ಐಂದ್ರಿತಾ, ನಿಧಿ ಬಿಕಿನಿ ಹಾಕ್ಲಿ, ನಂಗೇನು?: ರಾಗಿಣಿ

SUJENDRA
ಗ್ಲಾಮರ್ ಬೊಂಬೆ ರಾಗಿಣಿ ದ್ವಿವೇದಿ ದಿಢೀರನೆ ಕದನ ವಿರಾಮ ಘೋಷಿಸಿದ್ದಾರೆ. ಐಂದ್ರಿತಾ ರೇ ಮತ್ತು ನಿಧಿ ಸುಬ್ಬಯ್ಯ ಸಿಸಿಎಲ್ ಕ್ಯಾಲೆಂಡರಿಗಾಗಿ ಬಿಕಿನಿ ಹಾಕಿರುವ ಬಗ್ಗೆ ತಾನೇನೂ ಹೇಳಿಯೇ ಇಲ್ಲ, ಎಲ್ಲವೂ ಮಾಧ್ಯಮಗಳಿಂದ ಆಗಿರುವ ಆವಾಂತರ; ಅವರು ಬಿಕಿನಿ ಹಾಕಿದರೆ ನನಗೇನಿದೆ ಸಮಸ್ಯೆ ಎಂದು ಇಡೀ ಪ್ರಸಂಗದಿಂದಲೇ ನುಣುಚಿಕೊಳ್ಳಲು ಯತ್ನಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಹೇಳಿಕೆಯೊಂದು ತೀರಾ ತಾರಕಕ್ಕೇರುತ್ತಿದೆ ಅನ್ನೋದು ಗೊತ್ತಾಗುತ್ತಿದ್ದಂತೆ ಮಾಧ್ಯಮಗಳತ್ತ ಬೆರಳು ತೋರಿಸಿ ಪಲಾಯನ ಮಾಡುವುದು ಹೊಸತೇನಲ್ಲ. ಅದನ್ನೇ ರಾಗಿಣಿ ಕೂಡ ಮಾಡಿದ್ದಾರೆ. ನನ್ನ ಸಹ ಕಲಾವಿದರ ಬಗ್ಗೆ ಹೀಗೆಲ್ಲ ಹೇಳುತ್ತೀನಾ, ಎಲ್ಲವೂ ತಪ್ಪು ಕಲ್ಪನೆ ಅಂತ ಹೇಳಿದ್ದಾರೆ.

ಸಿಸಿಎಲ್ ಕ್ಯಾಲೆಂಡರಿಗಾಗಿ ನಿಧಿ ಮತ್ತು ಐಂದ್ರಿತಾ ಬಿಕಿನಿ ಫೋಟೋ ಶೂಟ್‌ನಲ್ಲಿ ಭಾಗವಹಿಸಿದ್ದರು. ಈ ಫೋಟೋಗಳು ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿಸುತ್ತಿದ್ದಂತೆ, ಇತ್ತ ರಾಗಿಣಿ ಉರಿದು ಬಿದ್ದಿದ್ದರು. ಇವರಿಗೇನು ಬಂತು ರೋಗ ಎಂಬಂತೆ ಮಾತನಾಡಿದ್ದರು. ಆದರೆ ಈಗ ಅವರು ಹೇಳುತ್ತಿರುವುದೇ ಬೇರೆ. ಅದೇನು ಅನ್ನೋದನ್ನು ಅವರ ಮಾತುಗಳಲ್ಲೇ ಓದಿ:

"ಆದಿತ್ಯ ನಾಯಕರಾಗಿರುವ ವಿಲನ್ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಪತ್ರಕರ್ತರು ಸಿಸಿಎಲ್ ಕ್ಯಾಲೆಂಡರ್ ಬಗ್ಗೆ ಪ್ರಶ್ನಿಸಿದ್ದರು. ನೀವು ಯಾಕೆ ಕ್ಯಾಲೆಂಡರಿಗೆ ಪೋಸ್ ಕೊಟ್ಟಿಲ್ಲ ಎಂದು ಕೇಳಿದ್ದರು. ನನಗೆ ಬೇರೆ ಅತ್ಯುತ್ತಮ ಆಫರುಗಳು ಇರುವಾಗ ಫೋಟೋ ಶೂಟ್‌ಗಾಗಿ ಬಿಕಿನಿ ಹಾಕುವ ಅಗತ್ಯವಿಲ್ಲ ಎಂದಷ್ಟೇ ನಾನು ಹೇಳಿದ್ದೆ"

"ಆದರೆ ನನ್ನ ಹೇಳಿಕೆ ಕೆಲವು ಮಾಧ್ಯಮಗಳಲ್ಲಿ ಹೇಗೆ ತಪ್ಪಾಗಿ ಪ್ರಕಟವಾಯಿತು ಗೊತ್ತಾಗಿಲ್ಲ. ಮಾಧ್ಯಮದಲ್ಲಿ ಬಂದಿರುವ ನನ್ನ ಹೇಳಿಕೆ ಕೊಂಚ ಗಂಭೀರವಾಗಿದೆ ಅಂತ ನನಗೆ ಯಾರೋ ಹೇಳಿದರು. ನನಗಂತೂ ನನ್ನ ಹಿರಿಯ ಕಲಾವಿದರ ಬಗ್ಗೆ ಅಪಾರ ಗೌರವವಿದೆ. ಐಂದ್ರಿತಾ ನನ್ನ ಆತ್ಮೀಯ ಗೆಳತಿ. ಆಕೆಯನ್ನು ನಾನು ಈ ರೀತಿಯಾಗಿ ಟೀಕಿಸುತ್ತೇನಾ?"

"ನಿಧಿ ಬಗ್ಗೆ ನನಗೆ ಹೆಚ್ಚೇನೂ ಗೊತ್ತಿಲ್ಲ. ಆಕೆ ನನಗೆ ಅಷ್ಟೇನೂ ಪರಿಚಿತಳಲ್ಲ. ಆದರೂ ಬಿಕಿನಿ ಹಾಕಿಕೊಂಡು ಪೋಸ್ ಕೊಟ್ಟಿರುವುದಕ್ಕೆ ಒಬ್ಬ ಕಲಾವಿದೆಯಾಗಿ ನಾನು ಟೀಕಿಸಲಾರೆ. ಯಾರ ಮನಸಿಗೂ ನೋವಾಗುವಂತಹ ಯಾವುದೇ ಹೇಳಿಕೆಯನ್ನು ನಾನು ನೀಡಿಲ್ಲ ಎಂದಷ್ಟೇ ಹೇಳಬಲ್ಲೆ"

ನೋಡಿದ್ರಲ್ಲ, ಇದು ಬದಲಾಗಿರುವ ರಾಗಿಣಿ ವರಸೆ. ತುಪ್ಪ ಬೇಕಾ ತುಪ್ಪದಂತಹ ಐಟಂ ಸಾಂಗುಗಳನ್ನು ಮಾಡಿಕೊಂಡಿರಲಿ, ನಮ್ಮ ಉಸಾಬರಿ ಬೇಡ ಅಂತ ಮೊನ್ನೆಯಷ್ಟೇ ಐಂದ್ರಿತಾ ತಿರುಗೇಟು ನೀಡಿದ ನಂತರ ರಾಗಿಣಿ ಹೀಗೆ ಬದಲಾಗಿದ್ದಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ