ರಮ್ಯಾ ನಾಯಕಿಯಾಗುವ ಹೊತ್ತಿನಲ್ಲಿ ಶಾಲೆಗೆ ಹೋಗುತ್ತಿದ್ದ ಹುಡುಗ ಲೂಸ್ ಮಾದ ಯೋಗೀಶ್. ಆಕೆಯ ನಟನೆಯನ್ನು ನೋಡಿಕೊಂಡು, ನೆಚ್ಚಿಕೊಂಡು, ಆರಾಧಿಸಿಕೊಂಡು ಬಂದವನು. ಅದ್ಹೇಗೋ ನಾಯಕನಾದ ಮೇಲೆ ಅದೇ ತನ್ನ ಆರಾಧ್ಯ ದೇವತೆಯ ಜತೆ ನಟಿಸುವ ಅವಕಾಶ. ಸ್ವತಃ ಅಪ್ಪ ಸಿದ್ದರಾಜು ನಿರ್ಮಾಪಕ ಬೇರೆ. ಹಾಗಾಗಿ ಯೋಗಿ ನಿರೀಕ್ಷೆಗಳು ಬೆಟ್ಟದಷ್ಟಿವೆ.
ಅತ್ತ ರಮ್ಯಾ ಕೂಡ ಇದರಿಂದ ಹೊರತಲ್ಲ. ಚಿತ್ರದಲ್ಲಿನ ಡಬ್ಬಲ್ ಮೀನಿಂಗ್ ಸಂಭಾಷಣೆಗಳು ತನಗೆ ಇಷ್ಟವಾಗಿಲ್ಲ ಎಂದು ಹೇಳಿರುವ ಹೊರತಾಗಿಯೂ, ಅವರಿಗೆ ಸಿನಿಮಾ ಇಷ್ಟವಾಗಿದೆ. ಚಿತ್ರದ ಕಥೆ ಏನೋ ಡಿಫರೆಂಟಾಗಿದೆ ಅಂದಿದ್ದಾರೆ. ಅಲ್ಲದೆ, ತನಗೆ ಯಾವ ದಿಕ್ಕಿನಿಂದಲೂ ಮ್ಯಾಚ್ ಆಗದ ಹೀರೋ ಜತೆ ನಟಿಸಿರುವುದು ಮತ್ತು ಶಿಕ್ಷಕಿಯಂತಹ ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿರುವುದಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತದೆ ಅನ್ನೋದನ್ನು ತಿಳಿದುಕೊಳ್ಳಲು ಅವರೂ ಕಾತರದಿಂದಿದ್ದಾರೆ.
ಸಿದ್ಲಿಂಗುವಿನಲ್ಲಿ ರಮ್ಯಾರದ್ದು ಮಂಗಳಾ ಟೀಚರ್ ಪಾತ್ರ. ಇಂತಹ ಪಾತ್ರ ತನ್ನ ಸಿನಿ ಜೀವನದಲ್ಲಿ ನನಗೆ ಸಿಕ್ಕಿಯೇ ಇಲ್ಲ ಎಂದಿದ್ದಾರೆ. ಆದರೆ ಆ ಗಂಭೀರ ಪಾತ್ರ ಡಬ್ಬಲ್ ಮೀನಿಂಗ್ ಮಾತುಗಳನ್ನು ಆಡುವುದರ ಹಿಂದಿನ ಕಾರಣ ಏನು ಅನ್ನೋದನ್ನು ಅವರೂ ಬಹಿರಂಗಪಡಿಸಿಲ್ಲ.
ಇನ್ನು ಸಿದ್ಲಿಂಗು ನಿರ್ದೇಶಕ ವಿಜಯ ಪ್ರಸಾದ್. ಅವರೇನು ಪೋಲಿ ಚಿತ್ರಗಳನ್ನು ಮಾಡಿಕೊಂಡು ಬಂದವರಲ್ಲ. ಸಿಲ್ಲಿ ಲಲ್ಲಿ ಧಾರಾವಾಹಿ ನಿರ್ದೇಶನದ ಜತೆಗೆ ಕಿವಿಗೆ ಹೂ ಇಟ್ಟುಕೊಂಡು ವಾರ್ತೆ ಓದಿ ಜನಮನ ಗೆದ್ದವರು. ಏನೋ ಹೊಸ ಪ್ರಯೋಗ ಮಾಡಬೇಕೆಂದು ಬೆಳ್ಳಿತೆರೆಯತ್ತ ಬಂದಿದ್ದಾರೆ. ಜಾಹೀರಾತುಗಳು, ಪ್ರೋಮೋಗಳು ವಿಭಿನ್ನವಾಗಿ ಗಮನ ಸೆಳೆದಿರುವುದರಿಂದ ಮತ್ತು ಲೂಸ್ ಮಾದ ಅಭಿಮಾನಿಗಳನ್ನು ಆಕರ್ಷಿಸಿರುವುದರಿಂದ ಸಿದ್ಲಿಂಗು ಒಂದು ಹಂತದವರೆಗೆ ಯಶಸ್ವಿಯಾಗಿದೆ. ಇನ್ನೇನಿದ್ದರೂ ಪ್ರೇಕ್ಷಕರ ಕೃಪೆ.
ಸಿದ್ಲಿಂಗು ಚಿತ್ರದ ಕೆಲವು ಸಂಭಾಷಣೆಗಳು ಹೀಗಿವೆ, ಓದಿಕೊಳ್ಳಿ:
* ನಾವು ಇಲ್ಲಿ ಯಾಕೆ ಬಂದಿದ್ದೇವೆ ಅಂತ ಗೊತ್ತಾ? ನಮ್ಮ ಹತ್ರಾನೂ ಕಡ್ಲೆ ಕಾಯಿ ಬೀಜ ಇದೆ ಅಂತ ತೋರಿಸೋದಿಕ್ಕೆ..! * ನಾನು ಸೂಜಿ, ಮೇಡಂ ದಾರ. ಇನ್ನೂ ಹೊಲಿಗೆ ಹಾಕಿಲ್ಲ...! * 'ಬಂದ್ರೆ ಬೆಟ್ಟ ಹೋದ್ರೆ...', 'ಅದೇನ್ ಹೇಳಿ ಸಾರ್...', 'ಅದೇ...' * 'ಆಕೆ ನಮ್ಮನೆಗೆ ಕೆಲ್ಸಕ್ಕೆ ಬರ್ತಿದ್ಳು.. ಕೊನೆಗೆ ಅವಳನ್ನೇ ಮದುವೆಯಾದೆ', 'ಅಯ್ಯೋ ಸಾರ್.. ನೀವು ಅವರನ್ನೂ ಬಿಟ್ಟಿಲ್ವ?'