ಪೂಜಾ ಗಾಂಧಿ ದಂಡುಪಾಳ್ಯ ವಿವಾದ 'ಬೆನ್ನು' ಬಿಡುತ್ತಿಲ್ಲ!

SUJENDRA
ಚಿತ್ರಗಳಿಗೆ ಒಂದಿಷ್ಟು ವಿವಾದಗಳಿದ್ದರೆ ಅದೂ ಪ್ರಚಾರವೇ ಆಗುತ್ತದೆ ಅನ್ನೋದು ಒಂದು ಹಂತದವರೆಗೆ ಏನೋ ಸರಿ. ಆದರೆ 'ಸತ್ಯಾನಂದ' ಚಿತ್ರ ಮಾಡಿ, ಸಿಕ್ಕಾಪಟ್ಟೆ ಪ್ರಚಾರದ ಆಸೆಗೆ ಬಿದ್ದ ಮದನ್ ಪಟೇಲ್ ಕಥೆ ಏನಾಯ್ತು ಅನ್ನೋದನ್ನು ನಾವೇ ನೋಡಿದ್ದೀವಿ. ಈಗ 'ದಂಡುಪಾಳ್ಯ'ದ ಸರದಿಯೇ?

ಶ್ರೀನಿವಾಸರಾಜು ನಿರ್ದೇಶನದ ಸತ್ಯಕತೆಯ 'ದಂಡುಪಾಳ್ಯ'ಕ್ಕೆ ಆರಂಭದಿಂದಲೇ ವಿಘ್ನಗಳು. ಮೊದಲು ಪೂಜಾ ಗಾಂಧಿಯ ಅರೆಬೆತ್ತಲೆಗೆ ಒಂದಷ್ಟು ಮಹಿಳಾ ಸಂಘಟನೆಗಳು ಪ್ರತಿರೋಧ ವ್ಯಕ್ತಪಡಿಸಿದವು. ಅಲ್ಲಲ್ಲಿ ಪ್ರತಿಭಟನೆಗಳನ್ನೂ ನಡೆಸಿದವು. ಆದರೆ ಇದು ಪ್ರಚಾರಕ್ಕಾಯ್ತು ಅಂತ ಚಿತ್ರತಂಡ ಸುಮ್ಮನಾಯ್ತು.

ನಂತರ ಮೈಸೂರಿನ ಪತ್ರಕರ್ತರೊಬ್ಬರು, ಕೃತಿಚೌರ್ಯದ ಆರೋಪವನ್ನು ನಿರ್ದೇಶಕರ ಮೇಲೆ ಹೊರಿಸಿದರು. ಆಗಲೂ ಚಿತ್ರತಂಡ ಜಾಸ್ತಿ ತಲೆ ಕೆಡಿಸಿಕೊಳ್ಳಲಿಲ್ಲ. ಇರಲಿ, ರಾಜ್ಯದ ಮೂಲೆ ಮೂಲೆಗಳಲ್ಲೂ ಪ್ರಚಾರವಾಗಲಿ ಅಂದುಕೊಂಡರು. ಆದರೆ ಈಗ ಚಿತ್ರತಂಡಕ್ಕೆ ನಿಜಕ್ಕೂ ಗಂಡಾಂತರ. ಕಾರಣ, ಸ್ವತಃ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ!

ಹೆಸರು ಬದಲಾಯಿಸಿ...
ಹೀಗೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು 'ದಂಡುಪಾಳ್ಯ' ನಿರ್ಮಾಪಕರಿಗೆ ನೊಟೀಸ್ ನೀಡಿದೆ. ಕಾರಣ, ದಂಡುಪಾಳ್ಯ ಊರಿನವರು ನೀಡಿರುವ ದೂರು.

ಈ ಚಿತ್ರದಲ್ಲಿ ಹೆಣ್ಣನ್ನು ಪೂಜಾ ಗಾಂಧಿಯ ರೂಪದಲ್ಲಿ ಕೀಳಾಗಿ ತೋರಿಸಲಾಗಿದೆ ಎಂದು ಆರೋಪಿಸಿ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆದಿದೆ. ದಂಡುಪಾಳ್ಯ ಗ್ರಾಮಸ್ಥರೂ ಪ್ರತಿಭಟಿಸಿದ್ದಾರೆ. ಗುಲ್ಬರ್ಗಾದ ಬಹುಜನ ಹೋರಾಟ ಸಮಿತಿಯ ಮಹಿಳಾ ಘಟಕ ಕೂಡ ಚಿತ್ರವನ್ನು ವಿರೋಧಿಸಿ ಬೀದಿಗಿಳಿದಿದೆ. ಸ್ವತಃ ಗುಲ್ಬರ್ಗಾ ಜಿಲ್ಲಾಧಿಕಾರಿ ಈ ಸಂಬಂಧ ಪತ್ರ ಬರೆದಿದ್ದಾರೆ. ಹಾಗಾಗಿ ಮುಂದೆ ಸಮಸ್ಯೆ ಬೇಡವೆಂದು ಈಗಲೇ ಹೆಸರು ಬದಲಾಯಿಸುವಂತೆ ಚಿತ್ರತಂಡಕ್ಕೆ ಸೂಚಿಸಿದ್ದೇವೆ ಎಂದು ಮಂಡಳಿ ಕಾರ್ಯದರ್ಶಿ ಥಾಮಸ್ ಡಿಸೋಜಾ ಹೇಳಿದ್ದಾರೆ.

ಇಲ್ಲ, ಮಾಡೋದಿಲ್ಲ...
ವಾಣಿಜ್ಯ ಮಂಡಳಿ ನೊಟೀಸ್ ನೀಡಿರುವುದು ಹೌದು. ಆದರೆ ನಾವು ಮಾತ್ರ ಚಿತ್ರದ ಹೆಸರನ್ನು ಈ ಹಂತದಲ್ಲಿ ಬದಲಾಯಿಸುವುದಿಲ್ಲ. ಚಿತ್ರ ಹೇಗಿದೆ, ಅದರಲ್ಲಿ ಏನಿದೆ ಅನ್ನೋದನ್ನು ನೋಡದೆಯೇ ಇಂತಹ ನಿರ್ಧಾರಕ್ಕೆ ಬರುವುದು ಸರಿಯಲ್ಲ ಎನ್ನುತ್ತಿದ್ದಾರೆ ನಿರ್ದೇಶಕ ಶ್ರೀನಿವಾಸರಾಜು.

ಅಷ್ಟಕ್ಕೂ ಹುಬ್ಬಳ್ಳಿ, ಕಲಾಸಿಪಾಳ್ಯ, ಮಂಡ್ಯ, ಮೆಜೆಸ್ಟಿಕ್ ಮುಂತಾದ ಚಿತ್ರಗಳಿರುವಾಗ ದಂಡುಪಾಳ್ಯ ಬಂದರೆ ಏನು ತಪ್ಪು ಅನ್ನೋದು ನಿರ್ದೇಶಕರ ಪ್ರಶ್ನೆ.

ವೆಬ್ದುನಿಯಾವನ್ನು ಓದಿ