ಆಟೊ ರಾಜ: ಗಣೇಶ್ ಅದೃಷ್ಟ ಪರೀಕ್ಷೆಗೆ ಇನ್ನೊಂದು..!

ಮಂಗಳವಾರ, 23 ಏಪ್ರಿಲ್ 2013 (14:10 IST)
PR
PR
ಗೋಲ್ಡನ್ ಸ್ಟಾರ್ ಗಣೇಶ್ ಮುಟ್ಟಿದ್ದೆಲ್ಲವೂ ಮಣ್ಣಾಗುತ್ತಿರುವ ಹೊತ್ತಿನಲ್ಲೂ ನಿರ್ಮಾಪಕರು ಕೈ ಬಿಟ್ಟಿಲ್ಲ ಅನ್ನೋದಕ್ಕೆ ಅವರಲ್ಲಿರುವ ಮೂರು ಪ್ರಮುಖ ಚಿತ್ರಗಳೇ ಸಾಕ್ಷಿ. ಮೊದಲನೆಯದ್ದು ಆಟೊ ರಾಜ, ಇನ್ನೆರಡು ಚಿತ್ರಗಳು ಸಕ್ಕರೆ ಮತ್ತು ಶ್ರಾವಣಿ ಸುಬ್ರಮಣ್ಯ!

ಬಹುಶಃ ಈ ಮೂರು ಚಿತ್ರಗಳು ಗಣೇಶ್ ಮುಂದಿನ ಸಿನಿ ಬದುಕನ್ನು ಸಂಪೂರ್ಣವಾಗಿ ನಿರ್ಧರಿಸಬಹುದು. ಇಷ್ಟು ಚಿತ್ರಗಳಲ್ಲಿ ಒಂದಾದರೂ ಗೆಲ್ಲದಿದ್ದರೆ ಗಣೇಶ್ ಅಸ್ತಿತ್ವವೇ ಬಣ್ಣದ ಲೋಕದಲ್ಲಿ ಅಸ್ಪಷ್ಟವಾಗಬಹುದು.

ಅಂದ ಹಾಗೆ, ಇದರಲ್ಲಿ ಮೊದಲನೆ ಚಿತ್ರ, ಅಂದರೆ 'ಆಟೊ ರಾಜ' ಮೇ 24ರಂದು ಬಿಡುಗಡೆಯಾಗುತ್ತಿದೆ. 'ಕಳ್ಳ ಮಳ್ಳ ಸುಳ್ಳ' ಖ್ಯಾತಿಯ ಉದಯ ಪ್ರಕಾಶ್ ನಿರ್ದೇಶನದ ಈ ಚಿತ್ರದಲ್ಲಿ ಗಣೇಶ್‌ಗೆ ಭಾಮಾ ಮತ್ತು ದೀಪಿಕಾ ಕಾಮಯ್ಯ ನಾಯಕಿಯರು. ಅರ್ಜುನ್ ಜನ್ಯ ಸಂಗೀತ, ಮಂಜುನಾಥ ನಾಯಕ್ ಛಾಯಾಗ್ರಹಣವಿದೆ.

ಮೇ 24ರ ಹೊತ್ತಿಗೆ ಐಪಿಎಲ್ ಮತ್ತು ಚುನಾವಣಾ ಜ್ವರ ಬಹುತೇಕ ಇಳಿದಿರುತ್ತದೆ. ಈ ಹೊತ್ತಿನಲ್ಲಿ ಬಿಡುಗಡೆ ಮಾಡಿದರೆ ನಷ್ಟವಾಗದು ಎಂದು ಲೆಕ್ಕಾಚಾರ ಹಾಕಿರುವ ಚಿತ್ರತಂಡ, ಅದೇ ಹೊತ್ತಿಗೆ ಗಣೇಶ್ ಕೆರಿಯರ್ ಗ್ರಾಫನ್ನೂ ಗಂಭೀರವಾಗಿ ಪರಿಗಣಿಸುತ್ತಿದೆ. ಯಾಕೆಂದರೆ ಅವರು ನಾಯಕನಾಗಿ ನಟಿಸಿ ಕಳೆದ ವರ್ಷ ಬಿಡುಗಡೆಯಾಗಿದ್ದ ಮುಂಜಾನೆ, ರೋಮಿಯೊ ಮತ್ತು ಮಿ.420 ಎಂಬ ಮೂರೂ ಚಿತ್ರಗಳು ಫ್ಲಾಪ್ ಆಗಿದ್ದವು.

'ಆಟೊ ರಾಜ' ಚಿತ್ರದಲ್ಲಿ ಶಂಕರ್ ನಾಗ್ ನೆನಪಿಸುವ ಪ್ರಯತ್ನ ಸಾಕಷ್ಟು ಬಾರಿ ನಡೆದಿದೆ. ಅದೇ ಹೆಸರು, ಹಲವೆಡೆ ಶಂಕರ್ ಫೋಟೊ ಬಳಕೆ, ಅವರಂತೆ ನಟಿಸಬೇಕು ಎಂಬ ಷರತ್ತು ಸೇರಿದಂತೆ ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗಿತ್ತು. ಆರಂಭದಲ್ಲಿ ಚಿತ್ರಕ್ಕೆ ಅಜಯ್ ನಾಯಕರೆಂದು ಹೇಳಲಾಯ್ತು. ಆ ಜಾಗಕ್ಕೆ ಗಣೇಶ್ ಬಂದ ಮೇಲೆ, ಎರಡನೇ ನಾಯಕಿ ಚೈತ್ರ ಚಂದ್ರನಾಥ್ ಎಂದು ಘೋಷಣೆಯಾಯ್ತು. ಅದೂ ನಂತರ ಬದಲಾವಣೆಗೊಂಡು ಆ ಜಾಗಕ್ಕೆ ದೀಪಿಕಾ ಕಾಮಯ್ಯ ಬಂದಿದ್ದಾರೆ.

ಒಂದು ವರ್ಷಕ್ಕೂ ಹೆಚ್ಚು ಕಾಲ ಜೀಕುತ್ತಾ ಸಾಗಿದ ಚಿತ್ರ ಈಗ ಬಿಡುಗಡೆಗೆ ರೆಡಿಯಾಗಿದೆ. ಇನ್ನೊಂದು ಗೆಲುವು ಖಚಿತ ಮತ್ತು ಗಣೇಶ್‌ಗೆ ಮರುಜನ್ಮ ನೀಡಿಯೇ ಸಿದ್ಧ ಎಂಬ ಭರವಸೆಯಲ್ಲಿದ್ದಾರೆ ನಿರ್ದೇಶಕ ಉದಯ್ ಪ್ರಕಾಶ್.

ವೆಬ್ದುನಿಯಾವನ್ನು ಓದಿ