ಈ ವಾರ ಮುಂಜಾನೆ, ಸಂಕ್ರಾಂತಿ, ಪುನೀತ್ ತೆರೆಗೆ

SUJENDRA
ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿರುವ 'ಮುಂಜಾನೆ', ಗುರುರಾಜ್ ಜಗ್ಗೇಶ್‌ರ 'ಸಂಕ್ರಾಂತಿ' ಹಾಗೂ ದಿಲೀಪ್ ಪೈ ನಾಯಕತ್ವದ 'ಪುನೀತ್' ಎಂಬ ಮೂರು ಕನ್ನಡ ಸಿನಿಮಾಗಳು ಈ ವಾರ ತೆರೆಗೆ ಬರುತ್ತಿವೆ.

ಹಳೆಯ ಸ್ಟಾಕು ಮುಗಿಯಲಿ ಎಂಬಂತೆ ಬರುತ್ತಿರುವ ಚಿತ್ರಗಳು ಸಂಕ್ರಾಂತಿ ಮತ್ತು ಪುನೀತ್. ಇವೆರಡೂ ಚಿತ್ರಗಳ ಶೂಟಿಂಗ್ ಮುಗಿದು ತುಂಬಾ ಕಾಲವಾಗಿತ್ತು. ಕೊನೆಗೂ ಈ ಎರಡು ಚಿತ್ರಗಳು ಮಾರ್ಚ್ 2ರ ಶುಕ್ರವಾರ ಬಿಡುಗಡೆಯಾಗುತ್ತಿವೆ.

ಜಗ್ಗೇಶ್ ಪುತ್ರ ಗುರುರಾಜ್ ನಾಯಕನಾಗಿರುವ, ನೇಹಾ ಪಾಟೀಲ್ ನಾಯಕಿಯಾಗಿರುವ ಚಿತ್ರ 'ಸಂಕ್ರಾಂತಿ'. ಇತ್ತೀಚಿನ ದಿನಗಳಲ್ಲಿ ನಾಪತ್ತೆಯಾಗಿದ್ದ ಮುಸ್ಸಂಜೆ ಮಹೇಶ್ ಇದರ ನಿರ್ದೇಶಕ. 'ಇನಿಯ'ನ ಸೋಲಿನಿಂದ ಪಾಠ ಕಲಿತು ಹೊಸ ಸಬ್ಜೆಕ್ಟ್ ಆರಿಸಿಕೊಂಡಿದ್ದೇನೆ ಎಂದು ಹೇಳುತ್ತಿದ್ದಾರೆ. ವಿ. ಶ್ರೀಧರ್ ಅವರ ಸಂಗೀತ ಚಿತ್ರಕ್ಕಿದೆಯಂತೆ. ಗುರುರಾಜ್ ಭವಿಷ್ಯವೂ ಈ ಚಿತ್ರದ ಮೇಲೆ ನಿಂತಿದೆ.

ಇನ್ನು ಪುನೀತ್ ಎಂಬ ಚಿತ್ರ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹೆಸರಿನ ಲಾಭವನ್ನು ಪಡೆಯಲು ಹುಟ್ಟಿಕೊಂಡ ಚಿತ್ರ. ಈ ಚಿತ್ರದ ನಾಯಕ ಪುನೀತ್ ಅಭಿಮಾನಿಯಂತೆ. ನೀಲ್ ಕಮಲ್ ನಿರ್ದೇಶನದ 'ಪುನೀತ್' ಚಿತ್ರದಲ್ಲಿ ದಿಲೀಪ್ ಪೈ ನಾಯಕ.

ಇವೆಲ್ಲಕ್ಕಿಂತಲೂ ಹೆಚ್ಚಾಗಿ ಈ ವಾರ ಗಣೇಶ್ ನಾಯಕರಾಗಿರುವ ಮುಂಜಾನೆ ಬಿಡುಗಡೆಯಾಗುತ್ತಿದೆ. ಎಸ್. ನಾರಾಯಣ್-ಗಣೇಶ್ ಕಾಂಬಿನೇಷನ್ ಮೂರನೇ ಚಿತ್ರವಿದು. ಈ ಹಿಂದಿನ ಎರಡೂ ಚಿತ್ರಗಳು (ಚೆಲುವಿನ ಚಿತ್ತಾರ, ಶೈಲೂ) ಹಿಟ್ ಆಗಿದ್ದವು. ನಾರಾಯಣ್ ಹೋಮ್ ಬ್ಯಾನರ್ ನಿರ್ಮಾಣದ ಈ ಚಿತ್ರಕ್ಕೆ ಸಂಗೀತವೂ ಅವರದ್ದೇ. ಕಥೆಯೂ ಸ್ವಂತದ್ದು ಎಂದು ಹೇಳಿಕೊಂಡಿದ್ದಾರೆ.

ಈಗಾಗಲೇ ಹಾಡುಗಳು ಒಂದು ಹಂತದವರೆಗೆ ಗಮನ ಸೆಳೆದಿವೆ. ಭಗ್ನಪ್ರೇಮಿ ಮನುಮೂರ್ತಿಯಾಗಿ ಗಣೇಶ್ ಕಾಣಿಸಿಕೊಂಡಿದ್ದಾರೆ ಎಂಬ ಚಿಕ್ಕ ಸುಳಿವೊಂದನ್ನಷ್ಟೇ ನಿರ್ದೇಶಕರು ನೀಡಿದ್ದಾರೆ. ಮಂಜರಿ ಫದ್ನಿಸ್ ಮೊದಲ ಬಾರಿ ಕನ್ನಡದಲ್ಲಿ ನಟಿಸಿರುವ ಚಿತ್ರ ಎಂಬ ಹೆಗ್ಗಳಿಕೆಯೂ ಇದೆ.

ವೆಬ್ದುನಿಯಾವನ್ನು ಓದಿ