ಬೆಳೆಯುತ್ತಿದೆ ಈ ಶಿವಲಿಂಗ!

WDWD
ಭಕ್ತರ ಕಲ್ಯಾಣಕ್ಕಾಗಿ ದೇವರು ಪ್ರತ್ಯಕ್ಷನಾಗುವನೇ? ಮೂರ್ತಿಯೊಂದು ಮಾನವನಂತೆಯೇ ಬೆಳೆಯುವುದು ಸಾಧ್ಯವೇ? ಈ ರೀತಿಯ ಪವಾಡಗಳು ನಿಜ ಜೀವನದಲ್ಲಿ ಸಂಭವಿಸುತ್ತವೆಯೇ? ಇಂಥ ಪ್ರಶ್ನೆಗಳಿಗೆ ಯಾರಲ್ಲೂ ಉತ್ತರ ಇಲ್ಲ. ಆದರೆ ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯ ಅಲೌಕಿಕ ಅಚ್ಚರಿಗಳನ್ನು ನೋಡಿರುತ್ತಾರೆ.

ಕೆಲವೊಮ್ಮೆ ಜನರು ಮರದಲ್ಲಿ ದೇವರನ್ನು ಕಾಣುತ್ತಾರೆ, ಮತ್ತೆ ಕೆಲವರು ತಮ್ಮ ಕಣ್ಣೆದುರೇ ಪ್ರಸಾದವು ಮಾಯವಾದ ಘಟನೆಯನ್ನು ಕೂಡ ಕಂಡವರಿದ್ದಾರೆ. ಈ "ನಂಬಿದ್ರೆ ನಂಬಿ ಬಿಟ್ಟರೆ ಬಿಡಿ" ಸರಣಿಯಲ್ಲಿ, ತನ್ನ ಪವಾಡಕ್ಕಾಗಿ ಖ್ಯಾತಿ ಪಡೆದ ಒಂದು ದೇವಾಲಯವನ್ನು ನಾವು ಸಂದರ್ಶಿಸಿದೆವು. ಈ ಮಾಹಿತಿ ಓದಿ, ಇದು ನಂಬಿಕೆಯೇ ಅಥವಾ ಮೂಢನಂಬಿಕೆಯೇ ಎಂಬುದನ್ನು ನೀವೇ ನಿರ್ಧರಿಸಿ.

ಇದು ಮಧ್ಯಪ್ರದೇಶದ ಉಜ್ಜಯಿನಿ ಸಮೀಪದ ದೇವಾಸ್ ಎಂಬಲ್ಲಿರುವ ಮಹಾಕಾಲೇಶ್ವರ ಮಂದಿರ. ಇದು ಸಾವಿರಾರು ಭಕ್ತಿಯ ಶ್ರದ್ಧಾಭಕ್ತಿಯ ತಾಣ. ಇದು ಸ್ವಯಂ ಉದ್ಭವವಾದ ಲಿಂಗವಷ್ಟೇ ಅಲ್ಲ, ಇದರ ಎತ್ತರವು ನಿಧಾನವಾಗಿ ಬೆಳೆಯುತ್ತಿದೆ ಎಂದು ಸಮೀಪದ ವಾಸಿಗಳು ಹೇಳುತ್ತಾರೆ. ಇದನ್ನು ಖಚಿತಪಡಿಸಿಕೊಳ್ಳಲು ನಾವು ಸ್ಥಳೀಯರನ್ನು ಮಾತನಾಡಿಸಿದೆವು.

WDWD
ನಾವು ಈ ಮಂದಿರದ ಆವರಣ ಪ್ರವೇಶಿಸಿದಾಗ, ಕೆಲವು ಭಕ್ತರು ಪೂಜಾ ನಿರತರಾಗಿದ್ದರು. ಮಹಾಕಾಲೇಶ್ವರನು ಖಂಡಿತವಾಗಿಯು ತಮ್ಮ ಇಷ್ಟಾರ್ಥ ಈಡೇರಿಸುತ್ತಾನೆ ಎಂಬುದು ಅವರ ಬಲವಾದ ನಂಬಿಕೆ. ಇಲ್ಲಿರುವ ಶಿವಲಿಂಗವು ಉಜ್ಜಯಿನಿ ಮಹಾಕಾಲ ಮಂದಿರದ ಲಿಂಗದಂತೆಯೇ ಇದೆ. ವ್ಯತ್ಯಾಸವೆಂದರೆ, ಉಜ್ಜಯಿನಿಯ ಮಹಾಕಾಲ ಲಿಂಗವು ಗಾತ್ರ ಕಿರಿದಾಗುತ್ತಿದ್ದರೆ, ದೇವಾಸ್ ಶಿವಲಿಂಗವು ನಿರಂತರವಾಗಿ ತನ್ನ ಎತ್ತರ ಹೆಚ್ಚಿಸಿಕೊಳ್ಳುತ್ತಿದೆ.

ಈ ಬಗ್ಗೆ ಸ್ಥಳೀಯ ರಾಧಾಕೃಷ್ಣ ಎಂಬಾತನನ್ನು ಮಾತನಾಡಿಸಿದೆವು. "ನಾನು ಬಾಲ್ಯದಿಂದಲೂ ಈ ಮಂದಿರಕ್ಕೆ ಭೇಟಿ ನೀಡುತ್ತಿದ್ದೇನೆ. ಶಿವಲಿಂಗದ ಎತ್ತರ ನಿರಂತರವಾಗಿ ಹೆಚ್ಚಾಗುತ್ತಿದೆ. ಪ್ರತಿ ಶಿವರಾತ್ರಿಯಂದೇ ಈ ಲಿಂಗವು ಎತ್ತರ ಹೆಚ್ಚಿಸಿಕೊಳ್ಳುತ್ತದೆ. ಆದರೆ ಶಿವಲಿಂಗದ ಬೆಳವಣಿಗೆಯು ಎಷ್ಟು ಸಣ್ಣ ಪ್ರಮಾಣದ್ದೆಂದರೆ, ನಾಲ್ಕು ಅಥವಾ ಐದು ವರ್ಷಗಳ ಬಳಿಕವಷ್ಟೇ ಶಿವಲಿಂಗ ಬೆಳೆದದ್ದು ಅರಿವಿಗೆ ಬರುತ್ತದೆ" ಎಂದಿದ್ದಾನೆ ಆತ. ಈ ಶಿವಲಿಂಗವು ಉದ್ಭವವಾದ ಕುರಿತಾಗಿಯೂ ಒಂದು ಕತೆಯಿದೆ.

WDWD
ಶತಮಾನದ ಹಿಂದೆ, ದೇವಾಸ್ ಒಂದು ಪುಟ್ಟ ಗ್ರಾಮವಾಗಿತ್ತು. ಅಲ್ಲಿ ಸಂಪರ್ಕ ವ್ಯವಸ್ಥೆಯೂ ಇರಲಿಲ್ಲ. ಅಲ್ಲೊಬ್ಬ ಗೌರಿ ಶಂಕರ ಎಂಬ ಅರ್ಚಕರಿದ್ದರು, ಮಹಾನ್ ಶಿವಭಕ್ತ. ಈ ದೇವಸ್ಥಾನದಲ್ಲಿ ಪೂಜೆ ಮಾಡಿದ ಬಳಿಕವೇ ಆತ ಏನನ್ನಾದರೂ ತಿನ್ನುತ್ತಿದ್ದರು. ಒಂದು ದಿನ ಈ ಮಂದಿರಕ್ಕೆ ಬರುವ ಮಾರ್ಗವು ಭಾರಿ ಪ್ರವಾಹದಿಂದಾಗಿ ಬಂದ್ ಆಯಿತು.

ಪೂಜೆಗಾಗಿ ಅವರಿಗೆ ಮಂದಿರ ತಲುಪಲು ಸಾಧ್ಯವಾಗಲೇ ಇಲ್ಲ. ಅವರು ಆಹಾರವನ್ನೂ ಸೇವಿಸಲಿಲ್ಲ. ಪ್ರವಾಹ ತಗ್ಗುವ ಲಕ್ಷಣ ಕಾಣಿಸಲಿಲ್ಲ. ಅಹಾರವಿಲ್ಲದೆ ಮೃತ್ಯುಮುಖನಾಗಿದ್ದ ಅವರೆದುರು ಭಗವಾನ್ ಶಿವ ಪ್ರತ್ಯಕ್ಷನಾದ. ವರ ಬೇಡುವಂತೆ ಶಿವನು ಕೇಳಿದಾಗ, ಪ್ರತಿದಿನವೂ ನಿನ್ನನ್ನು ನೋಡುವ ಇಚ್ಛೆ ನನಗೆ ದೇವಾ ಎಂದುತ್ತರಿಸಿದರು ಅರ್ಚಕರು. ಇದಕ್ಕೊಪ್ಪಿದ ಈಶ್ವರನು, ಎಲ್ಲೇ ಆದರೂ ಐದು ಬಿಲ್ವಪತ್ರೆಗಳನ್ನು ಇರಿಸಿದಲ್ಲಿ ತಾನು ಅಲ್ಲಿಗೆ ಬರುವುದಾಗಿ ಅಭಯ ನೀಡಿದ.

ಈ ಘಟನೆಯ ಬಳಿಕ ಭಗವಾನ್ ಶಿವನು ಅಲ್ಲಿ ನೆಲೆನಿಂತ. ಗ್ರಾಮಸ್ಥರು ಈ ಸ್ಥಳದಲ್ಲಿ ಮಂದಿರವೊಂದನ್ನು ಕಟ್ಟಿಸಿದರು. ಸಮಯ ಕಳೆದಂತೆ, ಇದು ಭಕ್ತಿಯ ತಾಣವಾಗಿ ಪರಿವರ್ತನೆಗೊಂಡಿತು. ಶಿವಲಿಂಗವು ನಿರಂತರವಾಗಿ ಬೆಳೆಯುತ್ತಿರುವುದು ಗಮನಕ್ಕೆ ಬಂತು.

WDWD
ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಭೀಮ ಸಿಂಗ್ ಏನನ್ನುತ್ತಾರೆ? "ನಾನು ಹಲವಾರು ವರ್ಷಗಳಿಂದ ಸಮಿತಿ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಶಿವಲಿಂಗ ಬೆಳೆಯುವುದನ್ನು ನಾನೂ ಕಣ್ಣಾರೆ ನೋಡಿದ್ದೇನೆ" ಎನ್ನುವ ಆತ, ತನ್ನ ನಂಬಿಕೆಗೆ ಪ್ರತಿಯಾಗಿ ಕೆಲವೊಂದು ಹಳೆಯ ಭಾವಚಿತ್ರಗಳನ್ನು ನಮ್ಮ ಮುಂದಿಡುತ್ತಾರೆ. ಈ ಭಾವಚಿತ್ರಗಳು, ಶಿವಲಿಂಗದ ಈಗಿನ ಗಾತ್ರಕ್ಕಿಂತ ಸಣ್ಣದಾಗಿರುವುದು ಗಮನಕ್ಕೆ ಬರುತ್ತದೆ.

ಆದರೆ ಭಾವಚಿತ್ರಗಳು ಮಾತ್ರವೇ ಶಿವಲಿಂಗ ಬೆಳೆಯುತ್ತದೆ ಎಂಬುದಕ್ಕೆ ಪುರಾವೆ ಒದಗಿಸಲಾರವು. ಇದು ಮುಗ್ಧ ಭಕ್ತರನ್ನು ವಂಚಿಸುವ ಪ್ರಯತ್ನವಾಗಿರಲೂಬಹುದೇ ಎಂಬ ಶಂಕೆ ಹಲವರದು. ಕೆಲವೊಂದು ಭೂಗರ್ಭಶಾಸ್ತ್ರೀಯ ಪ್ರಕ್ರಿಯೆಗಳಿಂದ, ಶಿವಲಿಂಗದ ಬೆಳವಣಿಗೆಯು ಸಾಧ್ಯವಿರಲೂಬಹುದು ಎನ್ನುತ್ತಾರೆ ವಿಜ್ಞಾನಿಗಳು. ಇದೇ ಪ್ರಕ್ರಿಯೆಯಿಂದಾಗಿ ಭೂಮಿಯ ಮೇಲೆ ಅಲ್ಲಲ್ಲಿ ಬೆಟ್ಟ, ಗುಡ್ಡಗಳು, ಶಿಲೆಗಳು ಕಾಣಸಿಗುತ್ತವೆ. ನೀವೇನು ಹೇಳುತ್ತೀರಿ? ನಮಗೆ ಬರೆದು ತಿಳಿಸಿ.