ಮಾಸ್ತಿ ಗುಡಿ ದುರಂತಕ್ಕೆ ಸಂತಾಪ ವ್ಯಕ್ತಪಡಿಸಿದ ಸೋನು ನಿಗಂ

ಬುಧವಾರ, 9 ನವೆಂಬರ್ 2016 (12:23 IST)
ಮುಂಬೈ: ಮಾಸ್ತಿ ಗುಡಿ ಕ್ಲೈಮಾಕ್ಸ್ ದೃಶ್ಯದ ಚಿತ್ರೀಕರಣದ ವೇಳೆ ಸಾವನ್ನಪ್ಪಿದ ಕನ್ನಡದ ಖಳ ನಟರಾದ ಉದಯ್ ಮತ್ತು ಅನಿಲ್ ಸಾವಿಗೆ ಬಾಲಿವುಡ್ ಗಾಯಕ ಸೋನು ನಿಗಂ ಸಂತಾಪ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಕನ್ನಡದ ಇಬ್ಬರು ನಟರು ದುರಂತಕ್ಕೀಡಾಗುವ ವಿಡಿಯೋ ನೋಡಿದ್ದೇನೆ. ಅವರಿಬ್ಬರೂ ಈಜು ಬರುವುದಿಲ್ಲ ಎಂದ ಮೇಲೆಯೂ ಅವರಿಂದ ಈ ಸಾಹಸ ಮಾಡಿಸಿದ್ದಾರೆಂದರೆ ಅದು ಅವಗಣನೆಯ ಫಲವಷ್ಟೇ. ಭಾರತೀಯ ಸಿನಿಮಾ ರಂಗದಲ್ಲಿ ಇನ್ನೂ ಕಲಾವಿದರ ಸುರಕ್ಷತೆಗೆ ತಕ್ಕ ಕ್ರಮ ಕೈಗೊಳ್ಳುತ್ತಿಲ್ಲ” ಎಂದು ಅವರು ಖೇದ ವ್ಯಕ್ತಪಡಿಸಿದ್ದಾರೆ.

ತಾವು ಇತ್ತೀಚೆಗೆ ನಟಿಸಿದ ಭಾರತ-ಚೀನಾ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಜಾಕಿ ಜಾನ್ ಚಿತ್ರ “ಕುಂಗ್ ಫು ಯೋಗ” ದ ಬಗ್ಗೆ ಉಲ್ಲೇಖಿಸಿದ ಸೋನು ನಿಗಂ “ಈ ಚಿತ್ರದ ಸೆಟ್ ನಲ್ಲಿ ಆಂಬ್ಯುಲೆನ್ಸ್ ಮತ್ತು ವೈದ್ಯರ ತಂಡ ಇಲ್ಲದ ದಿನವಿಲ್ಲ. ಅವರು ಅಷ್ಟೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದರು. ಇದು ಭಾರತೀಯ ಸಿನಿಮಾಗಳಲ್ಲೂ ಆಗಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ