ಮೊಹಮ್ಮದ್ ಶಮಿಯನ್ನು ಮರೆಸಿಯೇ ಬಿಟ್ಟ ಆಕಾಶ್ ದೀಪ್ ಸಿಂಗ್

Krishnaveni K

ಬುಧವಾರ, 2 ಅಕ್ಟೋಬರ್ 2024 (08:50 IST)
ಮುಂಬೈ: ಗಾಯದ ಕಾರಣದಿಂದ ಬರೋಬ್ಬರಿ ಒಂದು ವರ್ಷದಿಂದ ಕ್ರಿಕೆಟ್ ನಿಂದ ದೂರವಿರುವ ಸ್ಟಾರ್ ವೇಗಿ ಮೊಹಮ್ಮದ್ ಶಮಿಯನ್ನು ಯುವ ವೇಗಿ ಆಕಾಶ್ ದೀಪ್ ಸಿಂಗ್ ಮರೆಸಿಯೇ ಬಿಟ್ಟಿದ್ದಾರೆ.

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯಲ್ಲಿ ಆಕಾಶ್ ದೀಪ್ ಸಿಂಗ್ ಮೂರನೇ ವೇಗಿಯ ಸ್ಥಾನವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅವರ ಎಸೆತಗಳು ಅಷ್ಟು ನಿಖರವಾಗಿದ್ದು, ಮಹತ್ವದ ಸಂದರ್ಭಗಳಲ್ಲಿ ಭಾರತಕ್ಕೆ ವಿಕೆಟ್ ನೀಡುವ ಮೂಲಕ ತಮಗಿತ್ತ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ.

ಆಕಾಶ್ ದೀಪ್ ದೇಶೀಯ ಕ್ರಿಕೆಟ್ ನಲ್ಲಿ ಸಾಕಷ್ಟು ಪಳಗಿದವರು. ಹೀಗಾಗಿ ಅವರು ರಾಷ್ಟ್ರೀಯ ತಂಡಕ್ಕೆ ಹೊಸಬರಾದರೂ ಆಟದ ವಿಚಾರಕ್ಕೆ ಬಂದರೆ ಅನುಭವಿಯೇ. ಟೀಂ ಇಂಡಿಯಾದಲ್ಲಿ ಮೊಹಮ್ಮದ್ ಶಮಿ ಸ್ಥಾನವನ್ನು ತುಂಬಬಲ್ಲ ಒಬ್ಬ ಆಟಗಾರನ ಅವಶ್ಯಕತೆಯಿತ್ತು. ಅದನ್ನು ಆಕಾಶ್ ದೀಪ್ ಸಿಂಗ್ ಸಮರ್ಥವಾಗಿ ನಿಭಾಯಿಸಿದ್ದಾರೆ. ಬಹುಶಃ ಈ ಸರಣಿಯಲ್ಲಿ ಭಾರತದ ಬಹುದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಅದು ಆಕಾಶ್ ದೀಪ್.

ಇನ್ನು, ಇತ್ತ ಮೊಹಮ್ಮದ್ ಶಮಿ ಕಳೆದ ಏಕದಿನ ವಿಶ್ವಕಪ್ ನಲ್ಲಿ ಆಡಿದ್ದೇ ಕೊನೆ. ಏಕದಿನ ವಿಶ್ವಕಪ್ ನ ಹೀರೋ ಆಗಿದ್ದ ಶಮಿ ಬಳಿಕ ಕಾಲು ನೋವಿಗೊಳಗಾದರು. ಶಸ್ತ್ರಚಿಕಿತ್ಸೆಯನ್ನೂ ಮಾಡಿಸಿಕೊಂಡರು. ಈಗಷ್ಟೇ ಅವರು ಬೌಲಿಂಗ್ ಅಭ್ಯಾಸ ಮಾಡುತ್ತಿದ್ದಾರೆ. ಆದರೆ ಅವರು ಕಮ್ ಬ್ಯಾಕ್ ಮಾಡುವ ವೇಳೆಗೆ ಆಕಾಶ್ ದೀಪ್ ತಂಡದಲ್ಲಿ ಖಾಯಂ ಸ್ಥಾನ ಪಡೆದುಕೊಂಡರೂ ಅಚ್ಚರಿಯಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ