ಧೋನಿಯಷ್ಟು ಒಳ್ಳೆ ಬುದ್ಧಿ ನಿಮಗೆ ಬರಲ್ಲ! ಹಾರ್ದಿಕ್ ಪಾಂಡ್ಯಗೆ ನೆಟ್ಟಿಗರ ತಪರಾಕಿ

ಗುರುವಾರ, 10 ಆಗಸ್ಟ್ 2023 (08:20 IST)
ಗಯಾನ: ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ಗೆಲುವಿನ ರನ್ ಬಾರಿಸಿದರೂ ನೆಟ್ಟಿಗರು ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಇದಕ್ಕೆ ಕಾರಣ ಹಾರ್ದಿಕ್ ಬಾರಿಸಿದ ಸಿಕ್ಸರ್ ನಿಂದ ಯುವ ಬ್ಯಾಟಿಗ ತಿಲಕ್ ವರ್ಮಗೆ ಸತತ ಎರಡನೇ ಅರ್ಧಶತಕ ಗಳಿಸುವ ಅವಕಾಶ ಮಿಸ್ ಆಗಿದ್ದು. ಭಾರತದ ಗೆಲುವಿಗೆ ಎರಡು ರನ್ ಬೇಕಾಗಿತ್ತು. 17 ನೇ ಓವರ್ ಮುಕ್ತಾಯದ ಹಂತದಲ್ಲಿತ್ತು. ನಾಲ್ಕನೇ ಎಸೆತದಲ್ಲಿ ತಿಲಕ್ ವರ್ಮ ಒಂಟಿ ರನ್ ಗಳಿಸಲಷ್ಟೇ ಸಾಧ‍್ಯವಾಯಿತು. ಇದರಿಂದ ಅವರು ಅರ್ಧಶತಕಕ್ಕೆ ಒಂದು ರನ್ ಕೊರತೆಯಲ್ಲಿದ್ದರು.

ಆಗ ಹಾರ್ದಿಕ್ ಪಾಂಡ್ಯ ಐದನೇ ಎಸೆತ ಎದುರಿಸಿ ಸಿಕ್ಸರ್ ಬಾರಿಸಿ ಭಾರತ ತಂಡಕ್ಕೆ ಗೆಲುವು ಕೊಡಿಸಿದರು. ಆದರೆ ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದ ತಿಲಕ್  ವರ್ಮಗೆ ಅರ್ಧಶತಕ ಮಿಸ್ ಆಯಿತು. ಇದು ಫ್ಯಾನ್ಸ್ ಅಸಮಾಧಾನಕ್ಕೆ ಕಾರಣವಾಗಿದೆ. ಹಿಂದೊಮ್ಮೆ ಧೋನಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿಗೆ ಗೆಲುವಿನ ರನ್ ಗಳಿಸಲು ಅವಕಾಶ ಮಾಡಿಕೊಟ್ಟಿದ್ದರು. ಅದಕ್ಕಾಗಿ ಸಿಂಗಲ್ಸ್ ಪಡೆಯದೇ ತ್ಯಾಗ ಮಾಡಿದ್ದರು. ಇಂದು ನಾಯಕನಾಗಿ ಹಾರ್ದಿಕ್ ಗೂ ಅದೇ ರೀತಿ ಧಾರಾಳ ಮನಸ್ಸು ತೋರುವ ಅವಕಾಶವಿತ್ತು. ಬಾಲ್, ವಿಕೆಟ್ ಎಲ್ಲವೂ ಸಾಕಷ್ಟಿದ್ದರೂ ಯುವ ಬ್ಯಾಟಿಗನಿಗೆ ಅರ್ಧಶತಕ ಗಳಿಸಲು ಅವಕಾಶ ಕೊಡಲಿಲ್ಲವೆಂದು ನೆಟ್ಟಿಗರು ಧೋನಿಯನ್ನು ನೆನಪಿಸಿ ನೀವು ಯಾವತ್ತೂ ಧೋನಿ ಹತ್ತಿರವೂ ಬರಲು ಸಾಧ‍್ಯವಾಗದು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ