ಅಹಮದಾಬಾದ್: ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಹೈ-ವೋಲ್ಟೇಜ್ ಪಂದ್ಯಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಹಾಲಿ ಚಾಂಪಿಯನ್ ಭಾರತ ತಂಡವು ಟಿ20 ವಿಶ್ವಕಪ್ ಅನ್ನು ಉಳಿಸಿಕೊಳ್ಳಲು ಹೋರಾಟ ನಡೆಸಲಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ 253 ಗಳಿಸಿದ್ದ ಭಾರತ ಸದೃಢ ತಂಡವಾಗಿ ಫೈನಲ್ಗೆ ಪ್ರವೇಶಿಸಲಿದೆ. ನ್ಯೂಜಿಲೆಂಡ್ ತಂಡವು ಹಾಲಿ ರನ್ನರ್ ಅಪ್ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದೆ.
ಅಹಮದಾಬಾದ್ ಕ್ರೀಡಾಂಗಣದಲ್ಲಿ ಭಾರತೀಯ ಅಭಿಮಾನಿಗಳನ್ನು ಸ್ತಬ್ಧಗೊಳಿಸುತ್ತೇವೆ ಎಂದ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಹೇಳಿಕೆಗೆ ಭಾರತೀಯ ನಾಯಕ ಸೂರ್ಯಕುಮಾರ್ ಯಾದವ್ ಕೌಂಟರ್ ಕೊಟ್ಟಿದ್ದಾರೆ.
ತವರಿನಲ್ಲಿ ಭಾರತ ಫೈನಲ್ ಆಡುವಾಗ ಅನುಭವಿಸಬಹುದಾದ ಒತ್ತಡವನ್ನು ಸ್ಯಾಂಟ್ನರ್ ವ್ಯಕ್ತಪಡಿಸಿದರು. ಪ್ರೇಕ್ಷಕರನ್ನು ಮೌನಗೊಳಿಸುವುದು ತಮ್ಮ ಗುರಿಯಾಗಿದೆ. ತವರು ಮೈದಾನದಲ್ಲಿ ಗೆಲ್ಲಲು ಭಾರತದ ಮೇಲೆ ಸಾಕಷ್ಟು ಒತ್ತಡವಿದೆ ಎಂದು ನಾನು ಭಾವಿಸುತ್ತೇನೆ. ನಾನು ತುಂಬಾ ಉತ್ಸುಕನಾಗಿದ್ದೇನೆ. ನಾವು ಮೊದಲು ಇಲ್ಲಿ ಆಡಿದ್ದೇವೆ. ಅದರಲ್ಲಿ ಯಾವುದೇ ರಹಸ್ಯವಿಲ್ಲ ಎಂದು ಹೇಳಿದ್ದರು.
ಸ್ಯಾಂಟ್ನರ್ ಹೇಳಿಕೆಯ ಬಗ್ಗೆ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಪ್ರತಿಕ್ರಿಯಿಸಿ, ಸ್ಯಾಂಟ್ನರ್ ಸುಳ್ಳು ಹೇಳುತ್ತಿದ್ದಾರೆ. ನಾವು ಚೆನ್ನಾಗಿ ಬ್ಯಾಟಿಂಗ್ ಮಾಡಲು ಪ್ರಯತ್ನಿಸುತ್ತೇವೆ. ನಾವು 225 ಅಥವಾ 250 ರನ್ ಗಳಿಸಿದರೆ, ಅದು ಒಳ್ಳೆಯದು. ಆದರೆ ಕೆಲವೊಮ್ಮೆ ಪಿಚ್ ವಿಭಿನ್ನವಾಗಿರುತ್ತದೆ. ನಾವು ವಿಭಿನ್ನವಾಗಿ ಆಡಬೇಕಾಗುತ್ತದೆ. ನಾವು ಅಷ್ಟು ಸ್ಕೋರ್ ಮಾಡಬೇಕು ಎಂದು ಭಾವಿಸಿ ಡ್ರೆಸ್ಸಿಂಗ್ ಕೋಣೆಗೆ ಹೋಗುವುದಿಲ್ಲ. ಪಿಚ್ ಬೇಡಿಕೆಯ ಪ್ರಕಾರ ನಾವು ಆಡಬೇಕಾಗುತ್ತದೆ ಎಂದರು.