ಟೀಂ ಇಂಡಿಯಾ ಈಗ ತಂಡವಲ್ಲ, ಕುಟುಂಬ!

ಗುರುವಾರ, 22 ಡಿಸೆಂಬರ್ 2016 (08:58 IST)
ನವದೆಹಲಿ: ಚೆನ್ನೈ ಟೆಸ್ಟ್ ಪಂದ್ಯ ಗೆದ್ದ ಮೇಲೆ ಟೀಂ ಇಂಡಿಯಾ ಆಟಗಾರರು ಜತೆಯಾಗಿ ಫೋಟೋ ತೆಗೆಸುವಾಗ ಸರಣಿಯಲ್ಲಿ ಆಡದ ಆಟಗಾರರೆಲ್ಲಾ ಕಾಣಿಸಿಕೊಂಡಿದ್ದರು. ಇವರೆಲ್ಲಾ ಯಾಕೆ ಬಂದರು ಎಂದು ಕ್ಷಣ ಅನಿಸಿದರೂ, ಅಷ್ಟೊಂದು ತಲೆಕೆಡಿಸಿಕೊಂಡಿಲ್ಲ. ಆದರೆ ಅದಕ್ಕೀಗ ಉತ್ತರ ಸಿಕ್ಕಿದೆ.

ಇದೆಲ್ಲಾ ಕೋಚ್ ಅನಿಲ್ ಕುಂಬ್ಳೆ ಮಹಿಮೆ! ಟೀಂ ಇಂಡಿಯಾ ಫೋಟೋ ಸೆಷನ್ ನಲ್ಲಿ ಸರಣಿಗೆ ಆಯ್ಕೆಯಾದರೂ ನಂತರ ಗಾಯಗೊಂಡು ಮನೆಗೆ ಮರಳಿದ್ದ ಹಾರ್ದಿಕ್ ಪಾಂಡ್ಯ, ಮೊಹಮ್ಮದ್ ಶಮಿ, ವೃದ್ಧಿಮಾನ್ ಸಾಹಾ, ಅಜಿಂಕ್ಯಾ ರೆಹಾನೆ ಅವರನ್ನೆಲ್ಲಾ ಮರಳಿ ಕರೆಸಿದ್ದು ಅನಿಲ್ ಕುಂಬ್ಳೆಯಂತೆ!

ಒಂದು ಫೋಟೋ ಸೆಷನ್ ಗೆ ಇವರೆಲ್ಲಾ ಯಾಕೆ ಅಂದರೆ ಇದೆಲ್ಲಾ ಕುಂಬ್ಳೆಯವರ ನಯಾ ಸೋಚ್ ಪರಿಣಾಮ ಎನ್ನುತ್ತಿವೆ ಟೀಂ ಇಂಡಿಯಾ ಮೂಲಗಳು. ನಾವೆಲ್ಲಾ ಒಂದೇ ತಂಡ ಮಾತ್ರವಲ್ಲ, ಒಂದೇ ಕುಟುಂಬದವರು ಎಂಬ ಪರಿಕಲ್ಪನೆಯಂತೆ. ಇದರಿಂದಾಗಿ ತಂಡದಲ್ಲಿ ಸಾಮರಸ್ಯ ಹೆಚ್ಚುತ್ತದೆ ಎನ್ನುವ ಕಾರಣಕ್ಕೆ ಕುಂಬ್ಳೆ ಇಂತಹದ್ದೊಂದು ಪ್ರಯೋಗ ಮಾಡಿದ್ದಾರೆ.

ಹಾಗಾಗಿಯೇ ಕುಂಬ್ಳೆ ಮತ್ತು ನಾಯಕ ವಿರಾಟ್ ಕೊಹ್ಲಿ ಈ ಕ್ರಿಕೆಟಿಗರಿಗೆಲ್ಲಾ ವೈಯಕ್ತಿಕವಾಗಿ ಆಹ್ವಾನ ನೀಡಿ ಸಂಭ್ರಮಾಚರಣೆಯಲ್ಲಿ ಕುಟುಂಬದವರೆಲ್ಲಾ ಪಾಲ್ಗೊಳ್ಳಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದರಂತೆ. ಹೀಗಾಗಿಯೇ ತಂಡದಲ್ಲಿ ಆಡದವರೆಲ್ಲಾ ಫೋಟೋ ಸೆಷನ್ ನಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ