ಟೀಂ ಇಂಡಿಯಾ ಗೆಲ್ಲಬೇಕೆಂದರೆ ಈಗಲೂ ಧೋನಿ ಬೂಸ್ಟ್ ನೀಡಬೇಕು!

ಸೋಮವಾರ, 29 ಮೇ 2017 (08:50 IST)
ಲಂಡನ್: ನಾಯಕನಾಗಿರಲಿ, ಇಲ್ಲದೇ ಇರಲಿ. ಯಾವುದೇ ಪಂದ್ಯವಿರಲಿ… ಟೀಂ ಇಂಡಿಯಾಗೆ ವಿರಾಟ್ ಕೊಹ್ಲಿ ನಾಯಕರಾದರೂ, ಪಂದ್ಯಕ್ಕೆ ಮೊದಲು ಧೋನಿ ತಂಡದ ಆಟಗಾರರಿಗೆ ಖಡಕ್ ಆಗಿ ಮಾತನಾಡದಿದ್ದರೆ ಗೆಲ್ಲುವ ಹುಮ್ಮಸ್ಸು ಬರುವುದೇ ಇಲ್ಲವಂತೆ!

 
ಚಾಂಪಿಯನ್ಸ್ ಟ್ರೋಪಿ ಕ್ರಿಕೆಟ್ ಗೆ ಪೂರ್ವಭಾವಿಯಾಗಿ ನ್ಯೂಜಿಲೆಂಡ್ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಆಡಲು ಮೈದಾನಕ್ಕಿಳಿಯುವ ಮೊದಲು ವಿರಾಟ್ ಕೊಹ್ಲಿ ತಮ್ಮ ಹುಡುಗರ ಜತೆ ಒಂದು ಸುತ್ತು ಮಾತುಕತೆ ನಡೆಸಿದರು.

ಆದರೂ ತಂಡಕ್ಕೆ ಇನ್ನೂ ಏನೋ ಬೇಕಾಗಿತ್ತು. ಹಾಗಾಗಿ ಕೊಹ್ಲಿ ಸಭೆ ನಡೆಸಿದ ಮೇಲೆ ಧೋನಿಯೂ ಸಹ ಆಟಗಾರರ ಹೆಗಲ ಮೇಲೆ ಕೈ ಹಾಕಿ ಸುತ್ತು ಸೇರಿ ಖಡಕ್ ಆಗಿ ಮಾತನಾಡಿದ್ದು ಕಂಡುಬಂತು. ಬಹುಶಃ ಧೋನಿಯನ್ನು ಆಯ್ಕೆ ಮಾಡುವಾಗ ಆಯ್ಕೆಗಾರರು ಅವರು ಬೇರೆ ರೀತಿಯಲ್ಲೂ ತಂಡಕ್ಕೆ ಕೊಡುಗೆ ನೀಡಬಲ್ಲರು ಎಂದಿದ್ದು ಇದಕ್ಕೇ ಏನೋ.

ಹಲವಾರು ಬಾರಿ ವಿರಾಟ್ ನಾಯಕನಾದ ಮೇಲೆಯೂ ತಂಡದ ಹಲವು ನಿರ್ಣಯಗಳನ್ನು ಧೋನಿಯೇ ಕೈಗೊಳ್ಳುತ್ತಿದ್ದುದನ್ನು ನಾವು ನೋಡಿದ್ದೇವೆ. ಈ ಪ್ರತಿಷ್ಠಿತ ಟೂರ್ನಿಯಲ್ಲೂ ಧೋನಿ ‘ಪ್ರಮುಖ’ ಪಾತ್ರ ವಹಿಸಲಿದ್ದಾರೆ ಎಂಬುದು ಇಲ್ಲಿಗೆ ಸ್ಪಷ್ಟವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ