ಕೊನೆಗೂ ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟಕ್ಕೆ ಬಿಬಿಎಂಪಿ ಅಧಿಕಾರದ ಚುಕ್ಕಾಣಿ ಸಿಕ್ಕಿದೆ. ಇಂದು ನಡೆದ ಮೇಯರ್ ಚುನಾವಣೆಯಲ್ಲಿ ಬಿಜೆಪಿಯ ಮಂಜುನಾಥ್ ರಾಜು ಅವರಿಗೆ 128 ಮತಗಳು ಬಿದ್ದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಮಂಜುನಾಥ್ ರೆಡ್ಡಿಗೆ 131 ಮತಗಳು ಸಿಕ್ಕಿ, ಮಂಜುನಾಥ್ ರೆಡ್ಡಿ ಮೇಯರ್ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನಗಳನ್ನು ಗೆದ್ದ ಹುಮ್ಮಸ್ಸಿನಲ್ಲಿ ಅಂಕಿ, ಸಂಖ್ಯೆಯ ಲೆಕ್ಕಾಚಾರವನ್ನು ಮರೆತು, ಒಂದು ರೀತಿಯ ಭ್ರಮಾಲೋಕದಲ್ಲಿ ತೇಲಿತು. ಬಿಬಿಎಂಪಿ ಸಾಮ್ರಾಜ್ಯ ತಮ್ಮ ಕೈಗೆ ಸಿಕ್ಕಿತೆಂಬ ಭ್ರಮೆಯಲ್ಲಿ ಮುಳುಗಿತ್ತು.
ಬಿಜೆಪಿಗೆ ಬೆಂಬಲವನ್ನು ನೀಡುವುದಾಗಿ ಕೆಲವು ಪಕ್ಷೇತರ ಸದಸ್ಯರು ಹೇಳಿದಾಗ ಬಿಜೆಪಿಯ ಕೆಲವು ಶಾಸಕರು ಮತ್ತು ಸಂಸದರು ಖಾರವಾಗಿ ಮಾತನಾಡಿದರು. ಇದು ಒಂದು ರೀತಿಯಲ್ಲಿ ಪಕ್ಷೇತರರ ಸಿಟ್ಟು ಕೆರಳಿಸುವಂತೆ ಮಾಡಿ ಅವರು ಕಾಂಗ್ರೆಸ್ ಕಡೆ ಮುಖಮಾಡಿದಾಗಲೇ ಬಿಬಿಎಂಪಿಯಲ್ಲಿ ಅಂಕಿ, ಅಂಶಗಳ ಲೆಕ್ಕಾಚಾರ ಆರಂಭವಾಗಿತ್ತು.
ಕೊನೆಗೂ ಬಿಬಿಎಂಪಿ ಅಧಿಕಾರ ಚುಕ್ಕಾಣಿ ಕಾಂಗ್ರೆಸ್-ಜೆಡಿಎಸ್ ಪಾಲಾಗುವ ಮೂಲಕ ಪುನಃ ಆಡಳಿತಪಕ್ಷಕ್ಕೆ ಅಧಿಕಾರ ದಕ್ಕಿದೆ. ಆದರೆ ಬಿಬಿಎಂಪಿ ವ್ಯಾಪ್ತಿಯ ನೀರು, ವಿದ್ಯುತ್, ಕಸ ವಿಲೇವಾರಿ, ರಸ್ತೆ ಸಂಚಾರ ಮುಂತಾದ ಅನೇಕ ಸೌಲಭ್ಯಗಳಿಗೆ ಪ್ರಸಕ್ತ ಆಡಳಿತ ಗಮನಹರಿಸುವ ಮೂಲಕ ಮತ್ತು ಭ್ರಷ್ಟಾಚಾರ ಕಿಂಚಿತ್ತೂ ನುಸುಳದಂತೆ ನೋಡಿಕೊಳ್ಳುವ ಮೂಲಕ ಬೆಂಗಳೂರನ್ನು ದೇಶದಲ್ಲೇ ಒಂದು ಆದರ್ಶ ನಗರವಾಗಿ ಮಾಡುವ ಹೊಣೆಗಾರಿಕೆ ಅವರ ಮೇಲೆ ಬಿದ್ದಿದೆ.