ಶೌಚಾಲಯ ಉಡುಗೊರೆ ಬಯಸಿದ ವಧುವಿಗೆ 10 ಲಕ್ಷ ಬಹುಮಾನ

ಸೋಮವಾರ, 18 ಮೇ 2015 (16:56 IST)
ತಮ್ಮ ವಿವಾಹದ ಸಂದರ್ಭದಲ್ಲಿ ವಧುವರರು  ಹಣ, ಚಿನ್ನ, ಭೂಮಿ ಯಂತಹ ಬೆಲೆಬಾಳುವ ಉಡುಗೊರೆಗಳನ್ನು ಅಪೇಕ್ಷಿಸುವುದು ಸಾಮಾನ್ಯ. ಆದರೆ ಮಹಾರಾಷ್ಟ್ರದ 25 ವರ್ಷದ ಯುವತಿಯೋರ್ವಳು ತನ್ನ ಮದುವೆಯಲ್ಲಿ ಪಡೆಯಲು ಬಯಸಿದ ಉಡುಗೊರೆ  ಶೌಚಾಲಯ ಎಂದರೆ ನಂಬುತ್ತೀರಾ? ನೈರ್ಮಲ್ಯ ಎಷ್ಟು ಮಹತ್ವದ್ದು ಎಂದು ಅರ್ಥ ಮಾಡಿಸಿದ ಆಕೆ ಅದಕ್ಕೆ ಪ್ರತಿಯಾಗಿ 10 ಶೌಚಾಲಯವಷ್ಟೇ ಅಲ್ಲ, ಅದರ ಜತೆಗೆ 10 ಲಕ್ಷ ರೂಪಾಯಿಗಳ ಬಹುಮಾನವನ್ನು ಸಹ ಪಡೆಯುತ್ತಿದ್ದಾಳೆ. 
ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಆಂದೋಲನದ ಪ್ರಭಾವವೋ ಏನೋ!  ಮಹಾರಾಷ್ಟ್ರದ ಅಕೋಲಾದ ನಿವಾಸಿಯಾದ ಚೈತಾಲಿ ಗೋಖಲೆ ಎಂಬ ವಧುವೊಬ್ಬಳು ತನ್ನ ತಂದೆ- ತಾಯ ಬಳಿ  ತನ್ನ ಮದುವೆಯಲ್ಲಿ ಆಭರಣಗಳ ಬದಲಾಗಿ ಶೌಚಾಲಯವನ್ನು ಕಟ್ಟಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾಳೆ. ಮೂಲಭೂತ ನೈರ್ಮಲ್ಯ, ಆಭರಣ ಅಥವಾ ಇತರ ಮದುವೆ ಉಡುಗೊರೆಗಳಿಗಿಂತ ಹೆಚ್ಚು ಮಹತ್ವವಾದುದು ಎಂಬುದು ಅವಳ ವಾದ. 
 
ತನ್ನ ಭಾವೀ ಪತಿಯ ಮನೆಯಲ್ಲಿ ಶೌಚಾಲಯವಿಲ್ಲವೆಂದು ಅರಿತಿದ್ದ ಆಕೆ  ತನಗೆ ಶೌಚಾಲಯ ಕಟ್ಟಿಸಿಕೊಟ್ಟರೆ ಮಾತ್ರ ಮದುವೆ ಮಾಡಿಕೊಳ್ಳುವುದಾಗಿ ಪೋಷಕರಿಗೆ ಕರಾರು ಹಾಕಿದ್ದಳಂತೆ.
 
ಪ್ರೇರಣಾದಾಯಕವಾದ ಚೈತಾಲಿಯ ನಡೆಯನ್ನು ಅಭಿನಂದಿಸಿರುವ ಸ್ವಯಂ ಸೇವಾ ಸಂಸ್ಥೆಯೊಂದು ಆಕೆಯನ್ನು ನೈರ್ಮಲ್ಯ ಸಂದೇಶವಾಹಕಿ ಎಂದು ಹೊಗಳಿದ್ದಾರೆ. 
 
 ಈ ಕುರಿತು ಪ್ರತಿಕ್ರಿಯಿಸಿರುವ  ಸಾಮಾಜಿಕ ಕಾರ್ಯಕರ್ತ, ಸುಲಭ್ ಇಂಟರ್ ನ್ಯಾಶನಲ್ ವರಿಷ್ಠ ಡಾಕ್ಟರ್. ಬಿಂದೇಶ್ವರ್ ಪಾಠಕ್, "ಪ್ರಧಾನಿ ಮೋದಿಯವರ ಸ್ವಚ್ಛ ಭಾರತ ಆಂದೋಲನ ಪರಿಣಾಮ ಹಳ್ಳಿ ವಾಸಿಗಳ ಮೇಲು ಕೂಡ ಆಗುತ್ತಿದೆ. ಚೈತಾಲಿಗೆ ಸದ್ಯದಲ್ಲಿಯೇ 10 ಲಕ್ಷ ನಗದನ್ನು ಒಳಗೊಂಡಿರುವ ಸುಲಭ್ ನೈರ್ಮಲ್ಯ ಪ್ರಶಸ್ತಿಯನ್ನು ನೀಡಲಾಗುವುದು", ಎಂದು ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ