ನವದೆಹಲಿ: ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ನಾಯಕರ ಕೆಂಗಣ್ಣಿಗೆ ಗುರಿಯಾಗಿರುವ ಕಾಂಗ್ರೆಸ್ನ ಹಿರಿಯ ನಾಯಕ ಮತ್ತು ಸಂಸದ ಶಶಿ ತರೂರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ಟಾಸ್ಕ್ ನೀಡಿದ್ದಾರೆ.
ಭಾರತ ಸೇನೆ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಸರ್ವಪಕ್ಷ ನಿಯೋಗ ಇದೀಗ ರಷ್ಯಾದತ್ತ ಮುಖ ಮಾಡಿದೆ.
ಮೊದಲ ಸುತ್ತಿನ ಟಾಸ್ಕ್ ಮುಗಿಸಿರುವ ಶಶಿ ತರೂರು ನಾಯಕತ್ವದ ನಿಯೋಗವನ್ನು ರಷ್ಯಾ, ಬ್ರಿಟನ್ ಮತ್ತು ಗ್ರೀಸ್ನಂತಹ ದೇಶಗಳಿಗೆ ಎರಡನೇ ಸುತ್ತಿನ ರಾಜತಾಂತ್ರಿಕ ಸಂಪರ್ಕಕ್ಕೆ ನಿಯೋಜಿಸಲಾಗಿದೆ.
ತರೂರ್ ನಿಯೋಗವು ವಿವಿಧ ದೇಶಗಳಲ್ಲಿನ ಭಾರತೀಯ ರಾಜತಾಂತ್ರಿಕ ಕಾರ್ಯಾಚರಣೆಗಳೊಂದಿಗೆ ಸಂಪರ್ಕ ಸಾಧಿಸಲಿದ್ದಾರೆ. ಅಮೆರಿಕ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳು ಮೃದುವಾಗುತ್ತಿರುವ ಹಿನ್ನೆಲೆಯಲ್ಲಿ ಅವರ ರಷ್ಯಾ ಭೇಟಿ ಮಹತ್ವ ಪಡೆದುಕೊಂಡಿದೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಇತ್ತೀಚೆಗೆ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಎರಡು ಗಂಟೆಗಳಿಗೂ ಹೆಚ್ಚು ಕಾಲ ಮುಖಾಮುಖಿ ಸಭೆ ನಡೆಸಿದ ನಂತರ ಭಾರತದ ಈ ಕ್ರಮ ಕುತೂಹಲ ಕೆರಳಿಸಿದೆ.
ತರೂರ್ ನೇತೃತ್ವದ ತಂಡವು ಅಮೆರಿಕಕ್ಕೂ ಭೇಟಿ ನೀಡಿದ್ದು, ಅಲ್ಲಿ ಅವರು ಉಪಾಧ್ಯಕ್ಷ ಜೆ. ಡಿ. ವ್ಯಾನ್ಸ್ ಮತ್ತು ವಿದೇಶಾಂಗ ಉಪ ಕಾರ್ಯದರ್ಶಿ ಕ್ರಿಸ್ಟೋಫರ್ ಲ್ಯಾಂಡೌ ಅವರನ್ನು ಭೇಟಿ ಮಾಡಿದ್ದಾರೆ. ಲ್ಯಾಂಡೌ ಅವರೊಂದಿಗಿನ ಭೇಟಿಯ ಸಮಯದಲ್ಲಿ, ತರೂರ್ ನೇತೃತ್ವದ ನಿಯೋಗವು ಭಯೋತ್ಪಾದನೆಯ ವಿರುದ್ಧ ಭಾರತದ ನಿಲುವನ್ನು ಅವರಿಗೆ ಸ್ಪಷ್ಟವಾಗಿ ವಿವರಿಸಿದೆ.
ಮೋದಿ ಅವರು ಕಳೆದ ಮಂಗಳವಾರ ತರೂರ್ ಮತ್ತು ಆಪರೇಷನ್ ಸಿಂದೂರ್ನ ಸರ್ವಪಕ್ಷ ನಿಯೋಗದ ಎಲ್ಲಾ ಇತರ ಸದಸ್ಯರನ್ನು ಅವರ ನಿವಾಸ, 7 ಲೋಕ ಕಲ್ಯಾಣ್ ಮಾರ್ಗದಲ್ಲಿ ಭೇಟಿಯಾದರೂ, ಮರುದಿನ ಸಂಜೆ ಪ್ರಧಾನಿ ಮೋದಿ ಶಶಿ ತರೂರ್ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದರು.