ಪುನರ್ಜನ್ಮ ನಿಜಕ್ಕೂ ಇದೆಯಾ...!

ಬುಧವಾರ, 29 ಆಗಸ್ಟ್ 2018 (13:56 IST)
ಹಿಂದು ಪುರಾಣದಲ್ಲಿ ಮನುಷ್ಯನ ಜನನದ ಕಾಲದಿಂದ ಹಿಡಿದು ಮರಣದ ಕಾಲದವರೆಗೆ ಏನು ಬೇಕು ಯಾವ ಕರ್ಮಗಳನ್ನು ಮಾಡಬೇಕು ಎಂಬಿತ್ಯಾದಿ ವಿಷಯಗಳನ್ನು ಬರೆದಿರುವುದು ಎಲ್ಲರಿಗೂ ತಿಳಿದೆ ಇದೆ, ಆದ್ರೆ ಅದರಲ್ಲೂ ನಮಗೆ ತುಂಬಾ ಕೂತುಹಲಕಾರಿಯಾಗಿರುವುದು ಪುನರ್ಜನ್ಮ ಎಂಬ ವಿಷಯ ವಸ್ತು.  ಈ ಪುನರ್ಜನ್ಮ ಎಂದರೇನು ಮತ್ತು ಇದು ನಿಜವಾ ಅಂಥ ಕೆಲವರು ಕೇಳಿದರೆ ಇನ್ನೂ ಕೆಲವರು ಅವೆಲ್ಲಾ ಸುಳ್ಳು ಸತ್ತ ಮೇಲೆ ಎಲ್ಲವೂ ನಶ್ವರ ಎಂದು ಹೇಳುವ ಕೆಲವು ವರ್ಗದ ಜನರು ಇನ್ನೊಂದಡೆ. 
ಸಾಮಾನ್ಯವಾಗಿ ಒಬ್ಬ ಮನುಷ್ಯ ತನ್ನ ಭೌತಿಕ ಅಸ್ತಿತ್ವವನ್ನು ತೊರೆದು ಹೊಸ ಜೀವ ಕಂಡುಕೊಳ್ಳುತ್ತಾನೆ ಎಂಬುದು ನಮ್ಮ ಧರ್ಮ ಗ್ರಂಥಗಳಲ್ಲಿ ಉಲ್ಲೇಖವಿದೆ ಆದರೆ ಕೆಲವು ಸಂಗತಿಗಳನ್ನು ಗಮನಿಸಿದಾಗ ಭೌತಿಕ ದೇಹವನ್ನು ತೊರೆದ ಆತ್ಮಗಳು ಮತ್ತೊಮ್ಮೆ ಹೊಸ ಅಸ್ತಿತ್ವದೊಂದಿಗೆ ಹುಟ್ಟುವ ಪ್ರಕ್ರಿಯೆಗೆ ಸಾಮಾನ್ಯ ಅರ್ಥದಲ್ಲಿ ಪುನರ್ಜನ್ಮ ಎನ್ನಬಹುದು. ಇನ್ನು ತತ್ವ ಶಾಸ್ತ್ರದ ಪ್ರಕಾರ ಹೇಳುವುದಾದರೆ ಹುಟ್ಟು-ಸಾವುಗಳ ಚಕ್ರದ ನಡುವಿನ ಆತ್ಮದ ಪಯಣವೇ ಪುನರ್ಜನ್ಮ ಎನ್ನಬಹುದು.
ಆಚಾರ್ಯ ಶ್ರೇಷ್ಟ ಶಂಕರಾಚಾರ್ಯರು ತಮ್ಮ ಕೃತಿಯಾದ ಭಜಗೋವಿಂದಂನಲ್ಲಿ ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನೀಜಠರೇ ಶಯನಮ್| ಇಹ ಸಂಸಾರೇ ಬಹುದುಸ್ತಾರೇ ಕೃಪಯಾಪಾರೇ ಪಾಹಿ ಮುರಾರೇ ಇದರರ್ಥ ಮತ್ತೆ ಹುಟ್ಟುವುದು, ಮತ್ತೆ ಸಾಯುವುದು, ಮತ್ತೆ ತಾಯಿಯ ಗರ್ಭದಲ್ಲಿ ಸೇರಿ ಮಲಗುವುದು, ಈ ರೀತಿಯಲ್ಲಿರುವ ಸಂಸಾರಕ್ಕೆ ಪಾರವೇ ಇಲ್ಲ. ಇದನ್ನು ಸುಲಭವಾಗಿ ದಾಟಲಾಗುವುದಿಲ್ಲ. ಹೇ ಮುರಾರಿ, ನಾರಾಯಣ, ಕೃಪೆಯಿಟ್ಟು ನನ್ನನ್ನು ಪಾಲಿಸು. ಎಂದು ಅದರೆ ಅದರಲ್ಲಿಯೂ ಆತ್ಮಕ್ಕೆ ಸಾವಿಲ್ಲ ಪುನಃ ಹೊಸ ಜೀವದೊಂದಿಗೆ ಹುಟ್ಟುತ್ತದೆ ಎಂಬರ್ಥವಾಗಿದೆ.
ಇನ್ನೂ ವೈಜ್ಞಾನಿಕವಾಗಿ ಹೇಳುವುದಾದರೆ ಪಾಶ್ಚಾತ್ಯ ದೇಶಗಳಲ್ಲಿ ಹಿಫ್ನೊಟೈಸ್ (ಸಮ್ಮೋಹಿನ ವಿದ್ಯೆ) ಮುಖಾಂತರ ಹಲವು ವ್ಯಕ್ತಿಗಳನ್ನು ಪೂರ್ವ ಜನ್ಮಕ್ಕೆ ಕರೆದೊಯ್ದು ಅವರ ಪೂರ್ವಜನ್ಮದ ಪರಿಕಲ್ಪನೆಯನ್ನು ಹುಡುಕಿರುವ ಮತ್ತು ಅದರಲ್ಲಿ ಯಶಸ್ಸು ಸಾಧಿಸಿದ ಹಲವು ಉದಾಹರಣೆಗಳು ಇವೆ. ಅಷ್ಟೇ ಅಲ್ಲ ಭಾರತದಲ್ಲೂ ಕೂಡಾ ಅನೇಕ ನಿದರ್ಶನಗಳು ಈ ಪುನರ್ಜನ್ಮದ ಕಲ್ಪನೆಗೆ ಪುಷ್ಟಿ ಕೊಟ್ಟಿವೆ ಉದಾಹರಣೆಗೆ ಹೇಳುವುದಾದರೆ 1930 ರ ಸಮಯದಲ್ಲಿ ದೆಹಲಿಯಲ್ಲಿ ಒಂದು ಮಗುವಿನ ಜನನವಾಗುತ್ತೆ ಅದರ ಹೆಸರು ಶಾಂತಿದೇವಿ, ಅವಳು ನಾಲ್ಕು ವರ್ಷಕ್ಕೆ ಬರುತ್ತಿದ್ದ ಹಾಗೇ ತನಗೆ ಪುನರ್ಜನ್ಮ ಇತ್ತೆಂದು ತನ್ನ ಹಳೆಯ ನೆನಪುಗಳನ್ನೆಲ್ಲಾ ಹೇಳಿಕೊಳ್ಳುತ್ತಾಳೆ. ಮೊದ ಮೊದಲು ಅದೆಲ್ಲಾ ಸುಳ್ಳು ಚಿಕ್ಕ ಹುಡುಗಿ ಅದಕ್ಕೆ ಹೀಗೆ ತಮಾಷೆ ಮಾಡುತ್ತಿರಬಹುದು ಎಂದು ಅಂದುಕೊಂಡಿದ್ದ ಜನರು ಮತ್ತು ಪಾಲಕರಿಗೆ ಕ್ರಮೇಣ ಇದು ಅನುಮಾನಕ್ಕೆ ಎಡೆಮಾಡಿಕೊಡುತ್ತದೆ. ಈ ವಿಷಯ ಅಲ್ಲಲ್ಲಿ ಪ್ರಚಾರವಾಗುತ್ತಾ ಗಾಂಧಿಜಿಯವರ ಕಿವಿಗೂ ಹೋಗಿ ಮುಟ್ಟುತ್ತೆ ಇದರಿಂದ ಕೂತುಹಲಗೊಂಡಿರುವ ಗಾಂಧಿಜಿ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಒಂದು ತಂಡವನ್ನು ರಚಿಸುತ್ತಾರೆ. ಪರಿಶೀಲನೆ ನಡೆಸಿದ ತಂಡಕ್ಕೆ ಆಕೆ ತನ್ನ ಹಿಂದಿನ ಜನ್ಮದ ಎಲ್ಲಾ ಕಥೆಯನ್ನು ಹೇಳುತ್ತಾಳೆ ಅದನ್ನು ಪರಿಶೀಲಿಸಿದ ತಂಡಕ್ಕೆ ನಿಜಕ್ಕೂ ಆಶ್ಚರ್ಯಕಾದಿರುತ್ತದೆ, ಏಕೆಂದರೆ ಅವಳು ಹೇಳಿದ ಎಲ್ಲಾ ವಿಷಯಗಳು ಸತ್ಯವಾಗಿದ್ದವು ಇದು ಪೂರ್ವಜನ್ಮದ ಹೇಳಿಕೆಗೆ ಇನ್ನಷ್ಟು ಒತ್ತು ಕೊಟ್ಟಿತ್ತು.
ಅಷ್ಟೇ ಅಲ್ಲ ವಿದೇಶಗಳಲ್ಲೂ ಈ ತರದಹ ಪುನರ್ಜನ್ಮದ ನಿದರ್ಶನಗಳು ಇವೆ. 11 ವರ್ಷದ ಜೇಮ್ಸ್ ಲೈಯಂಗರ್ ಈತನು ಕೂಡಾ ತನ್ನ ಹಿಂದಿನ ಜನ್ಮದಲ್ಲಿ ಅಮೇರಿಕನ್ ಫೈಟರ್ ಪ್ಲೇನ್‌ ಫೈಲೆಟ್ ಆಗಿದ್ದು 2 ನೇ ವರ್ಡ್ ವಾರ್‌ ಜರ್ಮನಿಯ ನಡುವೆ ನೆಡೆದ ಯುದ್ಧದ ವಿಷಯಗಳನ್ನು ತಿಳಿಸುತ್ತಾನೆ ಅದನ್ನು ಪರಿಶೀಲಿಸಿದಾಗ ಅದೂ ಕೂಡಾ ಸತ್ಯವೇ ಆಗಿತ್ತು. ಅಷ್ಟೇ ಅಲ್ಲ ಮಾರ್ಟಾ ಲೋರೆನ್ಸ್ ಇವಳು ಕೂಡಾ ತನ್ನ ಹಿಂದಿನ ಜನ್ಮದಲ್ಲಿ ತನ್ನ ಈಗೀನ ತಾಯಿಯ ಹಳೆ ಗೆಳತಿಯಾಗಿದ್ದಳಂತೆ ಕೆಲವು ನಿದರ್ಶನಗಳು ನಮ್ಮೆದುರೇ ಪುನರ್ಜನ್ಮ ಕುರಿತಾದ ಸಂಗತಿಗಳನ್ನು ಒಪ್ಪುವಂತೆ ಮಾಡುತ್ತವೆ.
ಇನ್ನು ಕೆಲವರ ಪ್ರಕಾರ ಪುನರ್ಜನ್ಮ ಇದೆ ಅಂತಾರೆ ಅದನ್ನು ಸಮ್ಮೋಹನ ವಿದ್ಯೆಯ ಮೂಲಕ ಕುಡಂಲಿನಿಯನ್ನು ಜಾಗೃತಗೊಳಿಸಿ ಅದರ ಮೂಲಕ ನಮ್ಮ ಹಿಂದಿನ ಜನ್ಮವೃತ್ತಾಂತವನ್ನು ತಿಳಿಯಬಹುದು ಎಂದು ಪುರಾಣಗಳಲ್ಲಿ ಕಾಣಬಹುದು ಎಂದು ಹೇಳಲಾಗಿದೆ ಒಟ್ಟಿನಲ್ಲಿ ನಮ್ಮ ಹಿಂದಿನ ಜನ್ಮವು ಇದೆ ಎಂದು ಹಲವು ಗ್ರಂಥ ಮತ್ತು ಸಾಕ್ಷ್ಯಗಳಿಂದ ಪ್ರಮಾಣಿಸಲಾದರೂ ಇದೊಂದು ನಿಗೂಢವಾದ ಸಂಗತಿ ಎಂದೇ ಹೇಳಬಹುದು.
 
ಅಷ್ಟೇ ಅಲ್ಲ ಕೆಲವು ವಿಚಿತ್ರಗಳು ನಮಗೆ ಗೊತ್ತಿಲ್ಲದೇ ನಮ್ಮ ಮನಸ್ಸಿನ ಆಳದಲ್ಲಿ ಹೊಸ ಆಲೋಚನೆಗಳನ್ನು ಹುಟ್ಟಿಹಾಕುತ್ತದೆ ಅದಕ್ಕೂ ಪುನರ್ಜನ್ಮಕ್ಕೂ ನಂಟಿರುತ್ತದೆ ಎಂದು ಕೆಲವರು ಹೇಳುತ್ತಾರೆ ಅದೇನೆಂದರೆ ಯಾವುದಾದರೂ ಊರಿಗೆ ಹೋದಾಗ ನಮಗೆ ಆ ಊರು ತೀರಾ ಪರಿಚಿತ ಎನ್ನುವ ರೀತಿಯಲ್ಲಿ ಭಾಸವಾಗುವುದು, ಇಲ್ಲವೇ ಆ ಊರಿಗೆ ನಾನು ಮೊದಲೇ ಬಂದಿರಬಹುದು ಎಂದು ನಮ್ಮ ಮನಸ್ಸು ಒತ್ತಿ ಒತ್ತಿ ಹೇಳುತ್ತಿದ್ದರೆ ಆ ಊರು ಆ ವ್ಯಕ್ತಿಯ ಪೂರ್ವಜನ್ಮದೊಂದಿಗೆ ಸಂಬಂಧ ಹೊಂದಿರಬಹುದು. 
ಅಷ್ಟೇ ಅಲ್ಲ ನೀವು ಯಾವುದಾದರು ಕಾರ್ಯಕ್ರಮಕ್ಕೆ ಮೊದಲ ಬಾರಿಗೆ ಹೋಗಿರುತ್ತೀರಿ ಅಲ್ಲಿ ಯಾವುದಾದರೂ ಹೊಸ ವ್ಯಕ್ತಿಗಳನ್ನು ನೋಡಿದಾಗ ನಿಮಗೆ ಗೊತ್ತಿಲ್ಲದೇ ನಿಮ್ಮ ಮನಸ್ಸು ಅವರನ್ನು ಮೊದಲು ಭೇಟಿ ಆಗಿದ್ದೆ ಅನ್ನುವ ಭಾವನೆ ಬಂತೆಂದರೆ ಅವರು  ಕಳೆದ ಜನ್ಮದಲ್ಲಿ ನಿಮ್ಮ ಪರಿಚಿತರಾಗಿರಬಹುದು ಎಂದು ನೀವು ತಿಳಿದುಕೊಳ್ಳಬಹುದು ಅಲ್ಲದೇ ನಿಮಗೆ ಯಾವುದಾದರೂ ರೀತಿಯಲ್ಲಿ ಹೆದರಿಕೆ ಆಗುತ್ತಿದ್ದರೆ ಅಂದರೆ ಕೆಲವರಿಗೆ ಸಿಡಿಲು, ಬೆಂಕಿ, ವಾಹನ ಚಲಾಯಿಸುವುದು ಬೋಟ್ ಪ್ರಯಾಣ ಫ್ಲೈಟ್ ಪ್ರಯಾಣ ಹೀಗೆ ಹಲವಾರು ರೀತಿಯಲ್ಲಿ ಭಯವಿದ್ದರೆ ಹೋದ ಜನ್ಮದಲ್ಲಿ ಅದರಿಂದ ನಿಮಗೆ ತೊಂದರೆಗಳಾಗಿರಬಹುದು ಮತ್ತು ಸಾವಿಗೀಡಾಗಿರಬಹುದು ಇದು ಕೂಡಾ ನಿಮಗೆ ಪುನರ್ಜನ್ಮ ಇತ್ತು ಎನ್ನುವುದಕ್ಕೆ ಕುರುಹು ಎಂದು ಹೇಳಬಹುದು.
ಇನ್ನು ಹೊಸದಾದ ಬ್ರಾಂಡೆಡ್ ಬಟ್ಟೆಗಳನ್ನು ನೋಡಿದಾಕ್ಷಣ ಅದನ್ನು ತಾನು ಧರಿಸಬೇಕು ಇಲ್ಲವೇ ತಾನು ಕೊಳ್ಳಬೇಕು ಎಂಬ ಅತೀವ ಬಯಕೆ ಉಂಟಾದಲ್ಲಿ ನೀವು ಆ ತರಹದ ಬ್ರ್ಯಾಂಡ್ ಬಟ್ಟೆಯನ್ನು ಹಿಂದಿನ ಜನ್ಮದಲ್ಲಿ ನೀವು ಆಸೆಪಟ್ಟಿರಬಹುದು ಇಲ್ಲವೇ ಹಿಂದೆ ನೀವು ಬಳಕೆ ಮಾಡುತ್ತೀರಬಹುದು ಮತ್ತು ಕೆಟ್ಟ ಚಟಗಳು ಕೈ ಉಗುರು ಕಚ್ಚುವುದು ತಲೆಕೆರೆದುಕೊಳ್ಳುವುದು ಹೀಗೆ ಇಂತಹ ಹಲವು ರೀತಿಯ ಅಭ್ಯಾಸವನ್ನು ಇಟ್ಟುಕೊಂಡಿದ್ದೀರೆಂದರೆ ಅದು ನಿಮ್ಮ ಪೂರ್ವ ಜನ್ಮದ ಅಭ್ಯಾಸಗಳಿರಬಹುದು ಹೀಗೆ ಇಂತಹ ಕೆಲವು ಸೂಚನೆಗಳು ನಮಗೂ ಕೂಡಾ ಪೂರ್ವಜನ್ಮಕ್ಕೂ ನಂಟಿರಬಹುದು ಎಂಬುದನ್ನು ಸೂಚಿಸುವ ಕೊಂಡಿಗಳಾಗಿವೆ.
 
ಹಿಂದು ಗ್ರಂಥದಲ್ಲಿ ಅದರಲ್ಲೂ ಕರ್ಮ ಸಿದ್ಧಾಂತದ ಆಧಾರದಲ್ಲಿ ಪ್ರತಿಯೊಂದು ಜೀವರಾಶಿಯು ತನ್ನ ಪೂರ್ವಜನ್ಮದ ಕರ್ಮದ ಫಲಾಫಲಗಳ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಹೇಳಿಕೆಗಳ ಪ್ರಕಾರ 84000 ಸಲ ಕೀಳು ಪ್ರಾಣಿಗಳು ಅಂದರೆ ಹುಳ ಹುಪ್ಪಡಿಗಳು, ವಿಷಜಂತುಗಳು ಹೀಗೆ ಹಲವು ಅಂತಹ ಜನ್ಮಗಳನ್ನು ಹೊಂದಿ ನಂತರ ಮನುಷ್ಯ ಜನ್ಮ ಪ್ರಾಪ್ತಿಯಾಗುತ್ತದೆ ಅನ್ನುವುದು ನಮ್ಮ ಹಿಂದು ಕರ್ಮ ಸಿದ್ಧಾಂತದಲ್ಲಿ ಉಲ್ಲೇಖವಾಗಿರುವಂತದ್ದು.
ಒಟ್ಟಿನಲ್ಲಿ ಪುನರ್ಜನ್ಮದ ಕಲ್ಪನೆಯೋ ಇಲ್ಲವೇ ಸತ್ಯವೇ ಎನ್ನುವುದು ಕೆಲವು ನಿದರ್ಶನಗಳಿದ್ದರೂ ಪ್ರಶ್ನಿಸಿಕೊಳ್ಳಬೇಕಾದ ಸಂಗತಿಯಾಗಿದ್ದು ನಂಬಿಕೆ ಇಲ್ಲಿ ಹೆಚ್ಚಾಗಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಪ್ರತಿಯೊಬ್ಬ ಮನುಷ್ಯನಿಗೂ ಸಾವು ಎಂಬುದು ಖಚಿತ ಮತ್ತೆ ಜನ್ಮವಿದೆಯೇ ಎಂಬುದು ನಮ್ಮ ತರ್ಕಕ್ಕೂ ಮಿರಿದ್ದು ಮತ್ತು ನಿಗೂಢವಾಗಿರುವಂತದ್ದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ